ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್‌ ಸರ್ಕಾರ: ಎಂಎಲ್‌ಸಿ ಪ್ರತಾಪ ಸಿಂಹ ನಾಯಕ

By Kannadaprabha NewsFirst Published Mar 16, 2024, 11:40 AM IST
Highlights

ನುಡಿದಂತೆ ನಡೆದಿದ್ದೇವೆ ಎನ್ನುವ ಕಾಂಗ್ರೆಸ್ ರಾಜ್ಯ ಸರ್ಕಾರ ಜನರ ದಿಕ್ಕುತಪ್ಪಿಸುತ್ತಿದೆ. ಚುನಾವಣೆಗೂ ಮೊದಲು ಹೇಳಿದ ಗ್ಯಾರಂಟಿಗೂ ಈಗ ಅನುಷ್ಠಾನ ಮಾಡಿರುವ ಗ್ಯಾರಂಟಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ ಟೀಕಿಸಿದರು.

ಕಾರವಾರ (ಮಾ.16): ನುಡಿದಂತೆ ನಡೆದಿದ್ದೇವೆ ಎನ್ನುವ ಕಾಂಗ್ರೆಸ್ ರಾಜ್ಯ ಸರ್ಕಾರ ಜನರ ದಿಕ್ಕುತಪ್ಪಿಸುತ್ತಿದೆ. ಚುನಾವಣೆಗೂ ಮೊದಲು ಹೇಳಿದ ಗ್ಯಾರಂಟಿಗೂ ಈಗ ಅನುಷ್ಠಾನ ಮಾಡಿರುವ ಗ್ಯಾರಂಟಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಯಲ್ಲಿ ಷರತ್ತು ಹಾಕುತ್ತಿದ್ದಾರೆ. ವರಸೆ ಬದಲಾಯಿಸಿದ್ದಾರೆ. ಆರ್ಥಿಕ ವರ್ಷಾಂತ್ಯ ಸಮೀಪಿಸಿದರೂ ೨೨೪ ಶಾಸಕರಿಗೆ, ೭೪ ವಿಧಾನಪರಿಷತ್ ಸದಸ್ಯರಿಗೆ ವಾರ್ಷಿಕವಾಗಿ ನೀಡುವ ₹೨ ಕೋಟಿ ಕ್ಷೇತ್ರಾಭಿವೃದ್ಧಿ ನಿಧಿ ಬಿಡುಗಡೆ ಮಾಡಿಲ್ಲ. 

ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಇದುವರೆಗೂ ರಾಜ್ಯ ಸರ್ಕಾರದಿಂದ ಆಗಿಲ್ಲ. ₹೧೧ ಸಾವಿರ ಕೋಟಿ ಎಸ್ಸಿಎಸ್ಟಿಗಳಿಗೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಎರಡೂವರೆ ಸಾವಿರ ಕೋಟಿ ರುಪಾಯಿ ಮೀಸಲು ಎಂದಿದ್ದರು. ಆದರೆ ಒಂದೇ ಒಂದು ರುಪಾಯಿ ಇದುವರೆಗೂ ನೀಡಿಲ್ಲ ಎಂದು ಆರೋಪಿಸಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನರ ಎದುರು ಹೋಗಿ ೧೦ ವರ್ಷದಲ್ಲಿ ಕೇಂದ್ರ ಸರ್ಕಾರದಿಂದಾದ ಅಭಿವೃದ್ಧಿ, ಜಾರಿಗೆ ತಂದ ಕಾರ್ಯಕ್ರಮವನ್ನು ವಿವರಿಸಿ ಮೂರನೆ ಬಾರಿಗೆ ಅವಕಾಶ ಕೇಳುತ್ತೇವೆ. 

ಭಾರತ ಆರ್ಥಿಕತೆಯಲ್ಲಿ ೨೦೧೪ರಲ್ಲಿ ೧೧ನೇ ಸ್ಥಾನದಲ್ಲಿತ್ತು. ಪ್ರಸಕ್ತ ೫ನೇ ಸ್ಥಾನಕ್ಕೆ ಬಂದಿದೆ. ಕೋವಿಡ್ ನಡುವೆಯು ಆರ್ಥಿಕತೆ ಮೇಲೆರಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ೨೩ ಕೋಟಿ ಜನ ಬಡತನರೇಖೆಗಿಂತ ಮೇಲೆ ಬಂದಿದ್ದಾರೆ. ದೇಶವನ್ನು ದಶಕಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಮುಂದಿನ ೫ ವರ್ಷ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಮತ ಕೇಳುತ್ತೇವೆ ಎಂದರು. ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಕಾಮಗಾರಿ ಅಪೂರ್ಣ, ಸ್ಥಗಿತ ಮಾಡಿದ ಬಗ್ಗೆ ಕೇಳಿದಾಗ, ಬೇರೆ ಭಾಗಕ್ಕೆ ಹೋಲಿಸಿದರೆ ಕರಾವಳಿ ಭಾಗದಲ್ಲಿ ಹೆದ್ದಾರಿ ಕಾಮಗಾರಿ ವೇಗ ಕಡಿಮೆಯಿದೆ. 

ಬಿಎಸ್‌ವೈ ಸಿಎಂ ಆಗಲು ಸಂಸದ ಸಿದ್ದೇಶಣ್ಣ ಕಾರಣ: ಆರ್.ಅಶೋಕ

ಕೇಂದ್ರದ ಗಮನಕ್ಕೆ ತಂದು ಕರಾವಳಿ ಭಾಗಕ್ಕೆ ವಿಶೇಷ ಆದ್ಯತೆ ನೀಡುವಂತೆ ಕೇಳುತ್ತೇವೆ. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಪಕ್ಷಾತೀತವಾಗಿ ಅಭಿವೃದ್ಧಿ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದ ಕಾಮಗಾರಿಗಳು ಕಾಲಮಿತಿಯಲ್ಲಿ ಕೆಲಸ ಮುಗಿದು ಉದ್ಘಾಟನೆ ಆಗುತ್ತಿದೆ ಎಂದರು. ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಪ್ರಶಾಂತ ನಾಯಕ, ಗೋವಿಂದ ನಾಯ್ಕ, ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಕಿಶನ್ ಕಾಂಬ್ಳೆ ಇದ್ದರು.

click me!