ಗಂಗಾವತಿ (ಸೆ.29): ನಗರದ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಕಿಷ್ಕಿಂಧಾ ಹೋರಾಟ ಸಮಿತಿಯ ಪದಾಧಿಕಾರಿಗಳ ಸಭೆ ಜರುಗಿತು. ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಿದ್ದರಾಮಯ್ಯ ಅವರು ಪ್ರಯಾಸ ಪಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಹಣ ಇಲ್ಲ. ಇನ್ನೆರಡು ವರ್ಷ ಯಾವ ಶಾಸಕರೂ ಹಣದ ಬೇಡಿಕೆ ಇಟ್ಟುಕೊಂಡು ನನ್ನ ಬಳಿ ಬರಬೇಡಿ ಎಂದು ಹೇಳುತ್ತಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಹೊಸ ಯೋಜನೆಗಳನ್ನು ನಿರೀಕ್ಷಿಸುವುದು, ಮುಖ್ಯವಾಗಿ ನೂರಾರು ಕೋಟಿ ರೂಪಾಯಿ ಅಗತ್ಯವಾಗಲಿರುವ ಹೊಸ ಜಿಲ್ಲೆಗಳನ್ನು ರಚನೆ ಈ ಸರ್ಕಾರದ ಅವಧಿಯಲ್ಲಿ ಕಷ್ಟವಾಗಲಿದೆ ಎಂದರು.
ಕಿಷ್ಕಿಂಧಾ ಜಿಲ್ಲಾ ರಚನೆ ಸಕಾಲಿಕವಾಗಿದ್ದು, ಕಂಪ್ಲಿ, ತಾವರಗೇರಾ, ಕನಕಗಿರಿ, ಕಾರಟಗಿ ಒಳಗೊಂಡಂತೆ ಐತಿಹಾಸಿಕ ನೂತನ ತಾಲೂಕು ರಚನೆಯಾಗಬೇಕು. ಇದಕ್ಕಾಗಿ ನಿರಂತರ ಹೋರಾಟ ಬೇಕು. ಈಗಾಗಲೆ 13 ತಾಲೂಕುಗಳನ್ನು ಒಳಗೊಂಡಿರುವ ಬೆಳಗಾವಿಯನ್ನು ವಿಭಜಿಸಿ ನೂತನ ಜಿಲ್ಲೆ ರಚಿಸಬೇಕು ಎಂಬ ಬೇಡಿಕೆ ಇದೆ. ಒಂದೊಮ್ಮೆ ಬೆಳಗಾವಿ ಜಿಲ್ಲೆಯ ಪುನರಚನೆಗೆ ಸರ್ಕಾರ ಮುಂದಾದರೆ ಆಗ ರಾಜ್ಯದ ನಾನಾ ನೂತನ ಜಿಲ್ಲೆಗಳ ಹೋರಾಟಗಳು ಮುಂಚೂಣಿಗೆ ಬರಲಿವೆ. ಆಗ ನಮ್ಮ ಕಿಷ್ಕಿಂಧಾ ಜಿಲ್ಲಾ ಹೋರಾಟಕ್ಕೂ ಮನ್ನಣೆ ಸಿಗಲಿದೆ ಎಂದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಆರ್. ಶ್ರೀನಾಥ್, ಗಂಗಾವತಿ ನೂತನ ಜಿಲ್ಲಾ ಕೇಂದ್ರದ ಬಗ್ಗೆ ಈಗಾಗಲೆ ಹೋರಾಟ ಆರಂಭವಾಗಿದ್ದು, ನಾವು ಹೋರಾಟವನ್ನು ತೀವ್ರಗೊಳಿಸಿ ಉಗ್ರರೂಪಕ್ಕೆ ತೆಗೆದುಕೊಂಡ ಹೋಗದಿದ್ದಲ್ಲಿ ನಮಗೆ ಸ್ಪಂದನೆ ಸಿಗದು. ಕಾರಣ ಸಚಿವ ಶಿವರಾಜ ತಂಗಡಗಿ ಆಸಕ್ತಿ ವಹಿಸಬೇಕಾಗಿದೆ ಎಂದರು.
ಲಿಂಗಾಯತ ಡಿಸಿಎಂ ಯಾರಿಗೆ ಬೇಕು, ಮಾಡೋದಿದ್ರೆ ಸಿಎಂ ಮಾಡಿ: ಶಾಮನೂರು ಶಿವಶಂಕರಪ್ಪ ಸ್ಪೋಟಕ ಹೇಳಿಕೆ
ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ. ವೀರಪ್ಪ, ಬಸವರಾಜ ದಢೇಸೂಗೂರು, ಪ್ರಮುಖರಾದ ಕೆ. ಚನ್ನಬಸಯ್ಯಸ್ವಾಮಿ , ಹೋರಾಟ ಸಮಿತಿ ಸಂಚಾಲಕರಾದ ಸಂತೋಷ್ ಕೇಲೋಜಿ, ನಾಗರಾಜ ಗುತ್ತೇದಾರ ಇತರರು ಮಾತನಾಡಿದರು. ಪ್ರಮುಖರಾದ ಜೋಗದ ನಾರಾಯಣಪ್ಪ ನಾಯಕ್, ಸುರೇಶ ಸಿಂಗನಾಳ, ಶ್ರೀನಿವಾಸಯ್ಯ ಕೇಲೋಜಿ, ಮರಿಯಪ್ಪ ಕುಂಟೋಜಿ, ಸಿಂಗನಾಳ ಸುರೇಶ, ಅಮರಜ್ಯೋತಿ ವೆಂಕಟೇಶ, ವಿ.ಪಿ. ಗುಪ್ತಾ, ರಮೇಶಗೌಳಿ, ಶಾಹೀನ್ ಕೌಸರ್, ಸರ್ವೇಶ ವಸ್ತ್ರದ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.