
ಹಾಸನ (ಅ.04): ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಸಾಕಷ್ಟು ಬೆಳೆಗಳು ಒಣಗಿ ಹೋಗಿವೆ. ಇದರ ನಡುವೆಯೂ ರೈತರು ಶ್ರಮಪಟ್ಟು ಕೆಲ ಬೆಲೆಗಳನ್ನು ಬೆಳೆದಿದ್ದಾರೆ. ಇವುಗಳ ಪೈಕಿ ಅಲ್ಪ ಪ್ರಮಾಣದಲ್ಲಿ ಬೆಳೆದಿರುವ ಮುಸುಕಿನ ಜೋಳವನ್ನು ಕೆಎಂಎಫ್ನಿಂದ ನೇರವಾಗಿ ಖರೀದಿಸಬೇಕು ಎಂದು ಕೆಎಂಎಫ್ ಮಾಜಿ ಅಧ್ಯಕ್ಷ ಹಾಗೂ ಶಾಸಕ ಎಚ್.ಡಿ.ರೇವಣ್ಣ ಒತ್ತಾಯಿಸಿದರು. ನಗರದ ಗಣಪತಿ ಪೆಂಡಾಲಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ , ಈಗಾಗಲೇ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ನೀರಾವರಿ ಮತ್ತು ಪಂಪ್ಸೆಟ್ ಮೂಲಕ ಹಾಗೂ ಬಿದ್ದಂತಹ ಅಲ್ಪಸ್ವಲ್ಪ ಮಳೆಯಲ್ಲಿ ಮುಸುಕಿನ ಜೋಳವನ್ನು ಬೆಳೆದಿದ್ದಾರೆ. ಅದನ್ನ ಮುಖ್ಯಮಂತ್ರಿಗಳು ತಕ್ಷಣವೇ ಕೆಎಂಎಫ್ ಮೂಲಕ ಹೆಚ್ಚುವರಿ ಹಣ ಕೊಟ್ಟು ಖರೀದಿ ಮಾಡಬೇಕು. ಇಲ್ಲವಾದರೆ ಮುಂದಿನ ಸೋಮವಾರ ಕೆಎಂಎಫ್ ಕಟ್ಟಡಕ್ಕೆ ಜೋಳ ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಕೆಎಂಎಫ್ ಅಧಿಕಾರಿಗಳು ಹಣವನ್ನು ಲೂಟಿ ಮಾಡುವ ಉದ್ದೇಶದಿಂದ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳ ಮೂಲಕ ಖರೀದಿ ಮಾಡುತ್ತಿದ್ದಾರೆ. ಇದರ ಬದಲಾಗಿ ರೈತರಿಂದಲೇ ನೇರವಾಗಿ ಖರೀದಿಗೆ ಮುಖ್ಯಮಂತ್ರಿಗಳು ಆದೇಶ ನೀಡುವ ಮೂಲಕ ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ನಮಗೇ ಪ್ಲಸ್ ಆಗುತ್ತೆ: ಸಚಿವ ಜಮೀರ್
ಕಾವೇರಿ ಸಮಸ್ಯೆ ಬಗೆಹರಿಸಿ ಉತ್ತಮ ಮಳೆಯಾಗಿ ರೈತರು ಬೆಳೆದ ಬೆಳೆಯನ್ನು ಉತ್ತಮ ಬೆಲೆಗೆ ಖರೀದಿ ಮಾಡಲಿ ಎಂದು ಶ್ರೀ ಗಣಪತಿಯಲ್ಲಿ ಬೇಡಿಕೆಯಿಟ್ಟು ಪ್ರಾರ್ಥಿಸಿದ್ದೇನೆ. ರಾಜ್ಯ ಸರಕಾರವು ಸ್ವಲ್ಪ ದಿನ ಗ್ಯಾರಂಟಿ ನಿಲ್ಲಿಸಿ ರೈತರ ಉಳಿಸುವ ಕೆಲಸ ಮಾಡಬೇಕು. ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಿ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಡೀಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ರೇವಣ್ಣ ಎಚ್ಚರಿಕೆ ನೀಡಿದರು. ಕಾವೇರಿ ವಿಚಾರದಲ್ಲಿ ಸರಿಯಾದ ರೀತಿ ಕ್ರಮ ಕೈಗೊಳ್ಳದೆ ಇರುವುದರಿಂದ ನೀರನ್ನ ತಮಿಳುನಾಡಿಗೆ ಬಿಟ್ಟು ಸಂಕಷ್ಟ ತಂದಿದ್ದಾರೆ. ನೀರಾವರಿ ಪ್ರದೇಶದಲ್ಲಿ ನಾಟಿ ಮಾಡಿರುವಂತಹ ಬೆಳೆಗಳು ಕೂಡ ನಾಶವಾಗುತ್ತಿವೆ.
ಆದ್ದರಿಂದ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಇದರ ಬಗ್ಗೆ ಸರ್ವೆ ನಡೆಸಿ ಸಂಪೂರ್ಣವಾಗಿ ಬೆಳೆ ಪರಿಹಾರವನ್ನು ನೀಡಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಹಾಸನ ಜಿಲ್ಲೆಯಲ್ಲಿ ರೈತರು ಬೆಳೆದ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ. ಆದ್ದರಿಂದ ಜಿಲ್ಲಾಡಳಿತ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಸಂಪೂರ್ಣವಾಗಿ ಸರ್ವೆ ನಡೆಸಿ ಎಷ್ಟು ಎಕರೆಯಲ್ಲಿ ಬೆಳೆ ನಾಶವಾಗಿದೆ ಎಂಬುದನ್ನ ಕೃಷಿ ಅಧಿಕಾರಿಗಳ ಮೂಲಕ ವರದಿ ತಯಾರಿಸಿ ಸರ್ಕಾರಕ್ಕೆ ಕಳಿಸಬೇಕು.
ಹಿಂದೂ ಧರ್ಮ ಉಳಿದರೆ ದೇಶ ಉಳಿಯಲು ಸಾಧ್ಯ: ಶೋಭಾ ಕರಂದ್ಲಾಜೆ
ತಪ್ಪು ಮಾಡಿರುವುದು ಸರ್ಕಾರ. ಅದಕ್ಕಾಗಿ ಸಂಪೂರ್ಣ ಪರಿಹಾರವನ್ನ ನೀಡಬೇಕು ಎಂದು ಒತ್ತಾಯಿಸಿದರು. ಸ್ವಲ್ಪ ದಿನದ ಮಟ್ಟಿಗೆ ರಾಜ್ಯ ಸರ್ಕಾರ ತಮ್ಮ ಗ್ಯಾರಂಟಿಗಳನ್ನ ನಿಲ್ಲಿಸಿ ಮೊದಲು ರೈತರನ್ನು ಉಳಿಸಿ, ಅವರ ಸಂಕಷ್ಟದಲ್ಲಿ ನೆರವಾಗಿ ಆ ನಂತರ ಬೇಕಾದರೆ ನಿಮ್ಮ ಗ್ಯಾರಂಟಿಗಳನ್ನ ಮುಂದುವರಿಸಿ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಚನ್ನವೀರಪ್ಪ, ಗಿರೀಶ್, ನೇತ್ರಾವತಿ ಗಿರೀಶ್ ಇತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.