ಅಧಿಕಾರಕ್ಕಾಗಿ ಕಾಂಗ್ರೆಸ್ಸಿನಿಂದ ಬೇಕಾಬಿಟ್ಟಿ ಭಾಗ್ಯಗಳು: ಶಾಸಕ ಸಿ.ಸಿ.ಪಾಟೀಲ್‌

By Kannadaprabha NewsFirst Published Feb 7, 2024, 7:03 AM IST
Highlights

ಸಾಕಷ್ಟು ಅನುಭವ ಹೊಂದಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತ ನಿರ್ವಹಣೆಯಲ್ಲಿ ಎಡವಿದ್ದಾರೆ. ಆಡಳಿತ ನಡೆಸಲು ಹಾಗೂ ಮಾಸಾಶನ, ವೇತನ, ಪಿಂಚಣಿಗಳಿಗಾಗಿ ಎಷ್ಟು ಹಣ ಬೇಕಾಗುತ್ತದೆ ಎಂಬುದರ ಅರಿವಿಲ್ಲದೇ ಅಧಿಕಾರದ ವ್ಯಾಮೋಹಕ್ಕಾಗಿ ಬೇಕಾಬಿಟ್ಟಿ ಭಾಗ್ಯಗಳನ್ನು ಕಲ್ಪಿಸಿದ್ದಾರೆ. 

ನರಗುಂದ (ಫೆ.07): ಸಾಕಷ್ಟು ಅನುಭವ ಹೊಂದಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತ ನಿರ್ವಹಣೆಯಲ್ಲಿ ಎಡವಿದ್ದಾರೆ. ಆಡಳಿತ ನಡೆಸಲು ಹಾಗೂ ಮಾಸಾಶನ, ವೇತನ, ಪಿಂಚಣಿಗಳಿಗಾಗಿ ಎಷ್ಟು ಹಣ ಬೇಕಾಗುತ್ತದೆ ಎಂಬುದರ ಅರಿವಿಲ್ಲದೇ ಅಧಿಕಾರದ ವ್ಯಾಮೋಹಕ್ಕಾಗಿ ಬೇಕಾಬಿಟ್ಟಿ ಭಾಗ್ಯಗಳನ್ನು ಕಲ್ಪಿಸಿದ್ದಾರೆ. ಅದಕ್ಕೆ ಪೂರಕ ಆರ್ಥಿಕ ಸದೃಢತೆಗೆ ಕ್ರಮ ಕೈಗೊಂಡಿಲ್ಲ ಎಂದು ಶಾಸಕ, ಮಾಜಿ ಸಚಿವ ಸಿ.ಸಿ.ಪಾಟೀಲ್‌ ಆರೋಪಿಸಿದರು. ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಾರಿಗೊಳಿಸಿದ ಭಾಗ್ಯಗಳ ಬಗ್ಗೆ ತಕರಾರು, ಆಕ್ಷೇಪಣೆ ಇಲ್ಲ. 

ಆದರ ನಿರ್ವಹಣೆ ಸರಿಯಾಗಿಲ್ಲ, ಹಣಕಾಸು ಕ್ರೋಡಿಕರಣ ಸಾಧ್ಯವಾಗದೇ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ಈ ಸರ್ಕಾರದ ಯೋಜನೆಗಳ ಬಗ್ಗೆ ಲೋಕಸಭೆ ಚುನಾವಣೆ ನಂತರ ಗೊತ್ತಾಗಲಿದೆ ಎಂದರು. ಒಂದೆಡೆ 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಟ್ಟು, ಇನ್ನೊಂದೆಡೆ ವಿದ್ಯುತ್ ದರವನ್ನು ಮೂರ್ನಾಲ್ಕು ಪಟ್ಟು ಹೆಚ್ಚಳ ಮಾಡಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳ ಫೀ ಹಾಗೂ ಅಬಕಾರಿ ಶುಲ್ಕ, ಸ್ಟಾಂಪ್ ಡ್ಯೂಟಿ ಫೀ ಹೆಚ್ಚಳ ಮಾಡಿ ಬಡವರನ್ನು ಸಂಕಷ್ಟದಲ್ಲಿ ಸಿಲುಕಿಸಿದ್ದಾರೆ. ಇದು ಬಡವರ ವಿರೋಧಿ ಸರ್ಕಾರವಾಗಿದೆ ಎಂದು ಕಿಡಿಕಾರಿದರು.

ಸರ್ಕಾರಿ ದುಡ್ಡಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ ಮಾಡುತ್ತಿದೆ: ಕೆ.ಎಸ್.ಈಶ್ವರಪ್ಪ

ಕೇಂದ್ರ ಸರಕಾರದ ಆಯುಷ್ಮಾನ್ ಯೋಜನೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ತನ್ನ ಯೋಜನೆ ಎಂದು ದಿನಪತ್ರಿಕೆಗಳಲ್ಲಿ ಜಾಹೀರಾತು ಕೊಡುತ್ತಿದೆ. ಅಧಿಕಾರದ ದುರಹಂಕಾರ, ವ್ಯಾಮೋಹದಿಂದ ಕಾಂಗ್ರೆಸ್ಸಿನವರು ಭಸ್ಮಾಸುರನಂತಾಗಿದ್ದಾರೆ. ರಾಜ್ಯ ಸರ್ಕಾರವನ್ನು ಭ್ರಷ್ಟಾಚಾರದ ಕೂಪಕ್ಕೆ ಸಿಲುಕಿಸಿ, ಖಜಾನೆಯನ್ನು ಸಂಪೂರ್ಣ ಖಾಲಿ ಮಾಡಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲಿಕ್ಕೆ ಕೇಂದ್ರದ ವಿರುದ್ಧ ನಾಟಕೀಯ ರೀತಿಯಲ್ಲಿ ಆರೋಪ, ಪ್ರತಿಭಟನೆ ಮಾಡುತ್ತಾ ದಿಲ್ಲಿಗೆ ಹೊರಟಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಹಲವಾರು ಜನ ಆರ್ಥಿಕ ಜ್ಞಾನವುಳ್ಳವರು ಇದ್ದಾರೆ. ಆರ್ಥಿಕ ತಜ್ಞರ ಜೊತೆ ಮಾತನಾಡಿ ಮಾಹಿತಿ ತಿಳಿದುಕೊಳ್ಳದೇ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ದಿಲ್ಲಿಗೆ ಹೊರಟಿರುವ ಕಾಂಗ್ರೆಸ್‌ ವರ್ತನೆಯನ್ನು ಖಂಡಿಸಿದರು.

ತಪ್ಪು ಮುಚ್ಚಲು ಕೇಂದ್ರದ ಮೇಲೆ ಸಿದ್ದರಾಮಯ್ಯ ಆರೋಪ: ಮಾಜಿ ಸಿಎಂ ಬೊಮ್ಮಾಯಿ

ಕಾಂಗ್ರೆಸ್ ಪಕ್ಷದಲ್ಲಿ ಹಾಲಿ ಶಾಸಕರಿಗಿಂತ ಮಾಜಿ ಶಾಸಕರುಗಳೇ ಭ್ರಷ್ಟಾಚಾರಕ್ಕೆ ಇಳಿದಿರುವುದು ರಾಜ್ಯದೆಲ್ಲೆಡೆ ಕಾಣುತ್ತಿದೆ ಎಂದು ಆರೋಪಿಸಿದರು. ಅಯೋಧ್ಯೆಯ ಶ್ರೀರಾಮನ ಮಂದಿರ ಉದ್ಘಾಟನೆ ದಿವಸ ರಜೆ ನೀಡದ ಕಾಂಗ್ರೆಸ್ ಸರ್ಕಾರ ಒಂದು ಕೋಮಿನ ಮತದ ಆಸೆಗಾಗಿ ಎಸ್ಎಸ್‌ಎಲ್‌ಸಿ ಪರೀಕ್ಷೆಯ ಸಮಯವನ್ನೇ ಬದಲಾಯಿಸಿದೆ. ಲಿಂಗಾಯತರು ಹೆಚ್ಚು ಮತ ನೀಡಿದ್ದಕ್ಕೆ ಕಾಂಗ್ರೆಸ್‌ಗೆ 136 ಸೀಟುಗಳು ಬಂದಿವೆ. ಇಂತಹ ಗಾಳಿಯಲ್ಲಿ ಚುನಾಯಿತರಾಗದೇ ಇರುವ ವ್ಯಕ್ತಿಗಳು ಕೆಲಸಕ್ಕೆ ಬಾರದವರಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಅಜ್ಜಪ್ಪ ಹುಡೇದ, ಬಿ. ಬಿ. ಐನಾಪೂರ, ಚಂದ್ರು ದಂಡಿನ, ಮಲ್ಲಪ್ಪ ಮೇಟಿ, ಕಿರಣ ಮುಧೋಳೆ, ಸಿದ್ದೇಶ ಹೂಗಾರ, ಸೇರಿದಂತೆ ಮುಂತಾದವರು ಇದ್ದರು.

click me!