ಪ್ರತಿಪಕ್ಷ ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ ಜೋಡೋ ಯಾತ್ರೆಯು ಪಾದಯಾತ್ರೆಯಲ್ಲ, ಬದಲಿಗೆ ಅದು ಅಲ್ಲಲ್ಲಿ ವಾಹನ ಹತ್ತುವ-ಇಳಿಯುವ ಯಾತ್ರೆ ಎಂದು ವಸತಿ ಸಚಿವ ವಿ.ಸೋಮಣ್ಣ ಲೇವಡಿ ಮಾಡಿದ್ದಾರೆ.
ಬೆಂಗಳೂರು (ಅ.01): ಪ್ರತಿಪಕ್ಷ ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ ಜೋಡೋ ಯಾತ್ರೆಯು ಪಾದಯಾತ್ರೆಯಲ್ಲ, ಬದಲಿಗೆ ಅದು ಅಲ್ಲಲ್ಲಿ ವಾಹನ ಹತ್ತುವ-ಇಳಿಯುವ ಯಾತ್ರೆ ಎಂದು ವಸತಿ ಸಚಿವ ವಿ.ಸೋಮಣ್ಣ ಲೇವಡಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಡೆದುಕೊಂಡು ಬಂದಿದ್ದರು. ನಾನೂ ನೂರಾರು ಕಿ.ಮೀ. ಸುತ್ತಾಡಿಕೊಂಡು ಬಂದಿದ್ದೆ. ಕಾಂಗ್ರೆಸ್ನವರದ್ದು ಪಾದಯಾತ್ರೆಯಲ್ಲ, ಅಲ್ಲಲ್ಲಿ ಹತ್ತುವುದು-ಇಳಿಯುವ ಯಾತ್ರೆ ಎಂದು ವ್ಯಂಗ್ಯವಾಡಿದರು. ಗುಂಡ್ಲುಪೇಟೆಯಲ್ಲಿ ಯಾತ್ರೆ ಆರಂಭಿಸಿ ಸಭೆ ನಡೆಸಿ ಅಲ್ಲಿ ಕೆಲವು ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲ್ ಅವರು ಚಾಮರಾಜನಗರ ಜಿಲ್ಲೆ ಪ್ರಾರಂಭಿಸಿದ್ದಾರೆ. ಆಗ ನಾನು ಸಚಿವನಾಗಿ ಕೆಲಸ ಮಾಡುತ್ತಿದೆ. ಪಟೇಲರು ಚಾಮರಾಜನಗರ ಜಿಲ್ಲಾ ನಾಮಕರಣ ಮಾಡಿ ಜಿಲ್ಲಾ ಕೇಂದ್ರ ಕಟ್ಟಿದ್ದನ್ನು ಹೊರತುಪಡಿಸಿದರೆ ಮುಂದೆ ಬಂದ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ. ಏನಿಲ್ಲ ಎಂಬುದರ ಬಗ್ಗೆ ಚರ್ಚೆಗೆ ಸಿದ್ದ ಎಂದು ಸವಾಲೆಸೆದ ಅವರು, ಚಾಮರಾಜನಗರ ಜಿಲ್ಲೆಯ ಇತಿಹಾಸದಲ್ಲಿ ಏನಾದರೂ ಒಂದಷ್ಟುಕೆಲಸಗಳಾಗಿದ್ದರೆ, ಅದು ಬಿಜೆಪಿಯಿಂದ ಆಗಿದೆ ಎಂದರು. ಸುಮಾರು 212 ಕೋಟಿ ರು. ವೆಚ್ಚದಲ್ಲಿ 22 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಆರಂಭವಾಯಿತು.
ಕರ್ನಾಟಕದಲ್ಲಿ 40 ದಿನ ಪಾದಯಾತ್ರೆ ಮಾಡಿದ್ರೂ ಕಾಂಗ್ರೆಸ್ ಗೆಲ್ಲಲ್ಲ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗ ನೀರಾವರಿ ಸಚಿವರಾಗಿದ್ದು, ನಾನು ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಒಂದೇ ಬಾರಿಗೆ 110 ಕೋಟಿ ರು. ಬಿಡುಗಡೆ ಮಾಡಿಸಿದ್ದೇನೆ ಎಂದರು. ಮಲೆಮಾದೇಶ್ವರ ಬೆಟ್ಟದ ರಸ್ತೆಗಳ ವಿಸ್ತರಣೆ ಮತ್ತು ಅಭಿವೃದ್ಧಿ ನಡೆದಿದೆ. 200ಕ್ಕೂ ಹೆಚ್ಚು ಕೆರೆಗಳನ್ನು ಗುರುತಿಸಿ ಅವುಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಅ.15ರ ವೇಳೆಗೆ ಬಸವರಾಜ ಬೊಮ್ಮಾಯಿ ಅವರು ಯೋಜನೆಗೆ ಚಾಲನೆ ಕೊಡಲಿದ್ದಾರೆ. 2-3 ವರ್ಷದಲ್ಲಿ ಎಲ್ಲ ಕೆರೆಗಳಿಗೆ ನೀರು ಹರಿಸಲಾಗುವುದು. ಗುಡಿಸಲು ರಹಿತ ಜಿಲ್ಲೆ ಮಾಡಲಾಗುವುದು. ಜಿಲ್ಲೆ ಶಾಪಗ್ರಸ್ಥ ಎಂಬ ಹಣೆಪಟ್ಟಿಯಿಂದ ಹೊರಬರಲು ಇದು ಪೂರಕ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ, ರಾಜ್ಯ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್ ಉಪಸ್ಥಿತರಿದ್ದರು.
ಸಂತೇಮರಹಳ್ಳಿ ವಸತಿ ಪ್ರದೇಶದಲ್ಲಿ ಗಣಿಗಾರಿಕೆ ಬೇಡ: ಸಂತೇಮರಹಳ್ಳಿ ಜನ ವಸತಿ ಪ್ರದೇಶದಲ್ಲಿ ಗಣಿಗಾರಿಕೆ ಮಾಡುವುದು ಸರಿಯಲ್ಲ. ಕೂಡಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗಣಿಗಾರಿಕೆ ನಿಲ್ಲಿಸಿ, ವಾಸ್ತವತೆ ಮನವರಿಕೆ ಮಾಡಿಕೊಟ್ಟು ಜನರು ನೆಮ್ಮದಿಯಿಂದ ಬಾಳ್ವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಸಚಿವ ವಿ. ಸೋಮಣ್ಣ ಸೂಚನೆ ನೀಡಿದರು. ಸಂತೇಮರಹಳ್ಳಿ ಹೆಗ್ಗವಾಡಿಪುರ ಗೇಟ್ ಬಳಿ ಎನ್ರಿಎಚ್ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ನಂಜುಂಡಸ್ವಾಮಿಗೆ ಖಡಕ್ ಸೂಚನೆ ನೀಡಿದರು. ನ್ಯಾಯಾಲಯದಿಂದ ಅವರು ತಂದಿರುವ ಆದೇಶವನ್ನು ಕೂಲಂಕುಶ ಪರಿಶೀಲನೆ ಮಾಡಿ, ಸರ್ಕಾರಕ್ಕೆ ಪತ್ರ ಬರೆಯಬೇಕು.
ಜನರ ನೋವು ಆಲಿಸಲು ಭಾರತ ಐಕ್ಯತಾ ಯಾತ್ರೆ: ರಾಹುಲ್ ಗಾಂಧಿ
ಗಣಿಗಾರಿಕೆ ಪುನಾರಂಭಕ್ಕೆ ಅವಕಾಶ ಮಾಡಕೂಡದು ಎಂದರು. ಸಂತೇಮರಹಳ್ಳಿ ಹೋಬಳಿ ಕೇಂದ್ರ ಚಾ.ನಗರ ಜಿಲ್ಲೆಯ ಅಭಿವೃದ್ದಿಗೆ ಪೂರಕವಾದ ಮತ್ತೊಂದು ಉಪ ನಗರವಾಗುವ ಲಕ್ಷಣಗಳು ಇವೆ. ಈಗಾಗಲೇ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಮಾಡಲು ಶಾಸಕ ಎನ್. ಮಹೇಶ್ ಸ್ಥಳ ಪರಿಶೀಲನೆ ಮಾಡಿದ್ದಾರೆ. ತಕ್ಷಣದಲ್ಲಿಯೇ ಬಸ್ ನಿಲ್ದಾಣವಾಗುತ್ತದೆ. ಸಂತೇಮರಹಳ್ಳಿ ಜಂಕ್ಷನ್ ಪ್ರದೇಶವಾಗಿದ್ದು, ಚಾಮುಲ್ ಘಟಕ ಕಾರ್ಯರಂಭ ಮಾಡಿದೆ. ಸಂತೇಮರಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎನ್ರಿಚ್ ಮಹದೇವಸ್ವಾಮಿ ಅವರ ತಂಡ ಇಲ್ಲಿಗೆ ಅಹ್ವಾನಿಸಿ ಅನೇಕ ವಿಚಾರಗಳ ಕುರಿತು ಮನವಿ ಮಾಡಿದ್ದಾರೆ.