Cabinet Reshuffle ಸಿಎಂಗೂ ಮುನ್ನ ದಿಲ್ಲಿಗೆ ಹೋಗಿ ಕುಂತ ಶ್ರೀರಾಮುಲು, ಡಿಸಿಎಂ ಆಸೆ ಈಡೇರುತ್ತಾ?

By Suvarna NewsFirst Published Feb 2, 2022, 4:35 PM IST
Highlights

* ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ
* ರಾಜ್ಯ ಸಂಪುಟ ಪುನಾರಚನೆಗೆ ಸಿದ್ಧತೆ
* ಸಿಎಂಗೂ ಮುನ್ನ ನವದೆಹಲಿಗೆ ಹೋಗಿ ಕುಳಿತ ಶ್ರೀರಾಮುಲು

ಬೆಂಗಳೂರು, (ಫೆ.02): ಕರ್ನಾಟಕ ಸಂಪುಟ ಪುನಾರಚನೆಗೆ (Karnataka Cabinet) ಸಕಲ ಸಿದ್ಧತೆಗಳು ನಡೆಯತ್ತಿದ್ದು, ಸಿಎಂ ಬೊಮ್ಮಾಯಿ  ವರಿಷ್ಠರ ಭೇಟಿಗೆ ಕಾಯುತ್ತಿದ್ದಾರೆ. ವರಿಷ್ಠರು ಭೇಟಿಗೆ ಸಮಯ ನೀಡಿದ ಕೂಡಲೇ ದೆಹಲಿಗೆ ತೆರಳುತ್ತಿರುವುದಾಗಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.

ಇದರ ಮಧ್ಯೆ ಬಸವರಾಜ ಬೊಮ್ಮಾಯಿಗೂ ಮೊದಲೇ ಸಾರಿಗೆ ಸಚಿವ ಬಿ. ಶ್ರೀರಾಮುಲು  (B Sriramulu) ದೆಹಲಿಗೆ (New Delhi) ಹೋಗಿ ಕುಳಿತಿರುವುದು ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಕುತೂಹಲ ಮೂಡಿಸಿದೆ. ಅಲ್ಲದೇ ತೀವ್ರ ಚರ್ಚೆಗೆ ಗ್ರಾಸವಾಗಿದೆ. 

Latest Videos

Cabinet Reshuffle: ಸಿಎಂ ಬೊಮ್ಮಾಯಿ ದೆಹಲಿ ಭೇಟಿ ನಾಳೆಯಲ್ಲ, ಫೆ. 07 ಕ್ಕೆ

ಡಿಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ಶ್ರೀರಾಮುಲು, ನಿನ್ನೆ(ಫೆ.01) ರಾತ್ರಿ ದೆಹಲಿ ತಲುಪಿದ್ದು, ಬಿಜೆಪಿ ಹಿರಿಯ ನಾಯಕರನ್ನು(BJP High Command ) ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. 

ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಈ ಬಾರಿ ಕಡೆಯದಾಗಿ ಸಂಪುಟ ಪುನಾರಚನೆಗೊಳ್ಳುತ್ತಿದೆ. ಈ ಹಿನ್ನಲೆ ಕಡೆಯದಾಗಿ ಡಿಸಿಎಂ ಹುದ್ದೆ ನೀಡುವಂತೆ ರಾಮುಲು ಮನವಿ ಮಾಡುತ್ತಿದ್ದಾರಂತೆ. ಕಳೆದ ಬಾರಿಯ ಚುನಾವಣೆಯಲ್ಲಿ ಡಿಸಿಎಂ ಮಾಡುವುದಾಗಿ ಹೈಕಮಾಂಡ್ ಘೋಷಿಸಿತ್ತು. ಚುನಾವಣೆ ಹತ್ತಿರ ಇರುವ ಹಿನ್ನಲೆ ಕಡೆಯ ಅವಕಾಶ ನೀಡಬೇಕು ಎಂದು ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ.

ಸಧ್ಯ ಇರುವ ಸಾರಿಗೆ ಖಾತೆಯ ಬಗ್ಗೆಯೂ ಶ್ರೀರಾಮುಲು ತೃಪ್ತರಾಗಿಲ್ಲ. ಈ ಹಿನ್ನೆಲೆಯಲ್ಲಿ ಉಪಮುಖಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಲ್ಲಿ ಸಂಪುಟ ಪುನಾರಚನೆ ವೇಳೆ ಪ್ರಭಾವಿ ಖಾತೆ ಸಿಗಬಹುದು  ಎಂಬ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗಿದೆ.

ಆದ್ರೆ, ದೆಹಲಿ ಹಿರಿಯ ನಾಯಕರು ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜಿಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಅಮಿತ್ ಶಾ ಸೇರಿದಂತೆ ಇತರೆ ಹಿರಿಯ ನಾಯಕರು ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾರ್ಯದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಭೇಟಿ ಶ್ರೀರಾಮುಲುಗೆ ಕಷ್ಟ ಸಾಧ್ಯ. 

ಬಿಜೆಪಿ ಸರ್ಕಾರ ಬಂದು ಎರಡುವರೆ ವರ್ಷಗಳು ಕಳೆದರೂ ಬಿ.ಶ್ರೀರಾಮುಲುಗೆ ಡಿಸಿಎಂ ಪಟ್ಟ ನೀಡದೇ ಕೇವಲ ಸಚಿವ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತೆ ಮಾಡಿದೆ. ಇದರಿಂದ  ಸಚಿವ ಶ್ರೀರಾಮುಲು, ಸೇರಿದಂತೆ ವಾಲ್ಮೀಕಿ ಸಮುದಾಯ ಬೇಸರಗೊಂಡಿದೆ. ಇದೀಗ ಶ್ರೀರಾಮುಲು ದಿಢೀರ್ ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.

ಸಚಿವ ಸಂಪುಟ ಪುನಾರಚನೆ ಆಗ್ಬೇಕು ಎಂದು ವಿಶ್ವನಾಥ್
ರಾಜ್ಯ ಸಚಿವ ಸಂಪುಟದಲ್ಲಿ ಸೋಮಾರಿ ಮಂತ್ರಿಗಳಿದ್ದಾರೆ. ಹೀಗಾಗಿ ರಾಜ್ಯ ಸಚಿವ ಸಂಪುಟ ಪುನಾರಚನೆಯಾಗಬೇಕು. ತಮ್ಮ ಕ್ಷೇತ್ರವೇ ವಿಧಾಸೌಧವೆಂದು ತಿಳಿದು ಮಲಗಿಬಿಟ್ಟಿದ್ದಾರೆ. ಹಿರಿಯರ ಬದಲಿಗೆ ಯುವಕರಿಗೆ ಆದ್ಯತೆಯನ್ನು ನೀಡಲಿ ಎಂದು ಬೆಂಗಳೂರಿನಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

ಸಿಎಂ ಬೊಮ್ಮಾಯಿ ದೆಹಲಿಗೆ
ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಸಜ್ಜಾಗಿದ್ದು, ದೆಹಲಿಯಲ್ಲಿ ವರಿಷ್ಠರ ಭೇಟಿಗೆ ಕಾಯುತ್ತಿದ್ದಾರೆ. ವರಿಷ್ಠರು ಭೇಟಿಗೆ ಸಮಯ ನೀಡಿದ ಕೂಡಲೇ ದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.

ಇಂದು(ಬುಧವಾರ) ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದು, ಹೇಳಿಕೆ ನೀಡಲು ಸಾಧ್ಯವಿಲ್ಲ. ವರಿಷ್ಠರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಅವರಿಂದ ಒಪ್ಪಿಗೆ ಪಡೆಯಲು ಕಾಯುತ್ತಿದ್ದೇನೆ, ಫೆ.07ಕ್ಕೆ ಬಹುತೇಕ ದೆಹಲಿಗೆ ತೆರಳುವ ಸಾಧ್ಯತೆಯಿದೆ ಎಂದರು.

click me!