
ಧಾರವಾಡ (ಆ.23): ಕಾಂಗ್ರೆಸ್ ನವರಂಗಿ ಆಟವಾಡುತ್ತಿದೆ ಎಂದು ಸಿ.ಟಿ.ರವಿಯವರು ಆರೋಪಿಸುತ್ತಿದ್ದಾರೆ. ಆದರೆ, ‘ಆಪರೇಷನ್ ಕಮಲ’ದ ಮೂಲಕ ನವರಂಗಿ ಆಟವಾಡಿ ಅಧಿಕಾರ ಹಿಡಿದಿದ್ದು ಬಿಜೆಪಿ. ಆಗ ಅವರಿಗೆ ನಾಚಿಕೆ ಆಗಲಿಲ್ವಾ?, ಆಗದು ‘ನವರಂಗಿ ಆಟ’ ಎಂದು ಅವರಿಗೆ ಅನ್ನಿಸಲಿಲ್ವಾ? ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಮುಖಂಡ ಸಿ.ಟಿ.ರವಿಗೆ ಆತುರ ಜಾಸ್ತಿ. ಯಾವುದಕ್ಕೂ ಸಮಾದಾನವಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಅನುಷ್ಠಾನ ನೋಡಿ, ದಿಗ್ಭ್ರಮೆಗೊಂಡು ಏನೇನೋ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿರುವ, ಬರುತ್ತಿರುವ ಶಾಸಕರು ನಮ್ಮವರೇ.
ಬಿಜೆಪಿಯಲ್ಲಿದ್ದರೆ ಮುಂದೆ ಏನೂ ಆಗೋದಿಲ್ಲ ಎಂದು ತಿಳಿದಿದ್ದು, ಕಾಂಗ್ರೆಸ್ಸಿನ ತತ್ವ, ಸಿದ್ಧಾಂತ ಒಪ್ಪಿ ಬರುತ್ತಿದ್ದಾರೆ. ಎಷ್ಟು ಜನ ಬರುತ್ತಿದ್ದಾರೆ ಗೊತ್ತಿಲ್ಲ. ಆದರೆ, ಅವರು ಬರುವಾಗ ಮಾಧ್ಯಮಗಳಿಗೆ ಹೇಳಿಯೇ ಕರೆದುಕೊಳ್ಳುತ್ತೇವೆ ಎಂದರು. ಚುನಾವಣೆಯಲ್ಲಿ ಬಿಜೆಪಿ ಪುಣ್ಯಾತ್ಮರು, ಪ್ರಧಾನಿ ನರೇಂದ್ರ ಮೋದಿ ಕರೆತಂದ ರಾಜ್ಯವ್ಯಾಪ್ತಿ ಸುತ್ತಿಸಿದರೂ 66 ಸೀಟು ಗೆಲ್ಲುವ ಮೂಲಕ ಅವರ ಗೌರವಕ್ಕೂ ಚ್ಯುತಿ ತಂದಿದ್ದಾರೆ. ಇವರಿಗೆ ಕಾಂಗ್ರೆಸ್ ಬಗ್ಗೆ ಮಾತಾಡುವ ನೈತಿಕತೆಯೇ ಇಲ್ಲ ಎಂದ ಅವರು, ನಾವು ’ಆಪರಷನ್ ಹಸ್ತವೂ ಮಾಡುತ್ತಿಲ್ಲ. ನವರಂಗಿ ಆಟವೂ ಆಡುತ್ತಿಲ್ಲ. ನಮ್ಮ ತತ್ವ-ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ. ಬಿಜೆಪಿಯಿಂದ ಎಷ್ಟು ಹಾಲಿ-ಮಾಜಿ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದು ಈಗಲೇ ಏನು ಹೇಳಲ್ಲ ಎಂದು ಉತ್ತರಿಸಿದರು.
ತಮ್ಮ ಶಾಸಕರನ್ನೇ ಹೆದರಿಸಲು ಕಾಂಗ್ರೆಸ್ ಆಪರೇಷನ್ ತಂತ್ರ: ಬಾಲಚಂದ್ರ ಜಾರಕಿಹೊಳಿ
ಪ್ರಸಕ್ತ ರಾಜ್ಯದಲ್ಲಿ ಮಳೆಯ ಕೊರತೆ ಇದೆ. ಯಾವುದೇ ಆಣೆಕಟ್ಟು ಸಹ ತುಂಬಿಲ್ಲ. ಒಂದೆರಡು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದರೆ, ಲೋಡ್ ಶೆಡ್ಡಿಂಗ್ ಎಂದರೆ ಹೇಗೆ? ವಾಸ್ತವ ಅರಿತು ಮಾತನಾಡಲಿ ಎಂದು ಸಿ.ಟಿ.ರವಿಗೆ ತೀರುಗೇಟು ನೀಡಿದರು. ವರ್ಷಕ್ಕೊಂದು ಗ್ಯಾರಂಟಿ ಎಂಬ ಕಲ್ಪನೆ ಬಿಜೆಪಿ ತಿಳಿದಿತ್ತು. ಆದರೆ, 14 ಬಾರಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಲ್ಲದರ ಅರಿವು ಚೆನ್ನಾಗಿದೆ. ಹೀಗಾಗಿ ಮೂರೇ ತಿಂಗಳಲ್ಲಿ ನಾಲ್ಕು ಗ್ಯಾರಂಟಿ ಅನುಷ್ಠಾನಿಸಿದ್ದಾರೆ. ಸರ್ಕಾರದ ಗ್ಯಾರಂಟಿಗೆ ಜನಸ್ಪಂದನೆ ಕಂಡ ಬಿಜೆಪಿಗರಿಗೆ ದಿಕ್ಕು ತೋಚದಂತಾಗಿ, ಬಾಯಿಗೆ ಬಂದಂತೆ ಮಾತಾಡುವುದು ನಿಲ್ಲಿಸಬೇಕು ಎಂದು ಶಿವರಾಜ ತಂಗಡಗಿ ಹೇಳಿದರು.
ಕೆಲಸ ಮಾಡಿ ಇಲ್ಲವೇ ಕಠಿಣ ಕ್ರಮ ಎದುರಿಸಿ: ಕೆಲಸದಲ್ಲಿ ನಿರ್ಲಕ್ಷ್ಯ ತೋರಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ, ಕೆಲಸ ಮಾಡಿ, ಇಲ್ಲವೇ ಕಠಿಣ ಕ್ರಮ ಎದುರಿಸಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ನೂತನ ಸಭಾಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬೆಳಗಾವಿ ಕಂದಾಯ ವಿಭಾಗದ ವ್ಯಾಪ್ತಿಗೆ ಬರುವ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಇಲಾಖೆ ಅಧಿಕಾರಿಗಳ ಧೋರಣೆ ಕುರಿತು ಮಾತನಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಚಂದ್ರಯಾನ-3ರಿಂದಾಗಿ ನೈಸ್ ದಾಖಲೆ ಬಿಡುಗಡೆ ಮುಂದಕ್ಕೆ: ಎಚ್.ಡಿ.ಕುಮಾರಸ್ವಾಮಿ
ಅಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಕಾರ್ಯ ನಿರ್ವಹಿಸಬೇಕು ಹಾಗೂ ವಾಸ್ತವಿಕ ಸಂಗತಿಗಳ ಆಧಾರದ ಮೇಲೆ ಕಾರ್ಯ ನಿರ್ವಹಿಸಬೇಕು ಎಂದರು. ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗದಂತೆ ಎಲ್ಲಾ ರೀತಿಯ ಎಚ್ಚರಿಕೆ ವಹಿಸಬೇಕು ಎಂದ ಅವರು, ಗಂಗಾ ಕಲ್ಯಾಣ ಯೋಜನೆ ಅತ್ಯಂತ ಮುಖ್ಯವಾದದ್ದು, ಅದನ್ನು ಜಾರಿಗೆ ತರುವ ಕೆಲಸಕ್ಕೆ ಆದ್ಯತೆ ನೀಡಲು ಅವರು ಸೂಚಿಸಿದರು. ಇನ್ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ವಿಭಾಗೀಯ ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದರು. ಇಲಾಖೆಯ ಕಾರ್ಯದರ್ಶಿ ತುಳಸಿ ಮದ್ದಿನೇನಿ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.