ಬಿಜೆಪಿಯವರಿಗೆ ದಮ್‌ ಇದ್ದರೆ 40 ಅಲ್ಲ, ಬರೀ 4 ಶಾಸಕರನ್ನು ಕರೆದೊಯ್ಯಲಿ: ಸಚಿವ ತಂಗಡಗಿ ಸವಾಲು

By Kannadaprabha NewsFirst Published Sep 13, 2023, 11:12 AM IST
Highlights

ಲೋಕಸಭೆಯ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ಅದು ಅಪವಿತ್ರ ಮೈತ್ರಿ . ಜ್ಯಾತ್ಯತೀತ ಜನತಾದಳ ಎಂದು ಇರೋದನ್ನು ಕೋಮವಾದಿ ಜನತಾದಳ ಎಂದು ಬದಲಾಯಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದ ಸಚಿವ ಶಿವರಾಜ ತಂಗಡಗಿ 

ಕುಷ್ಟಗಿ(ಸೆ.13):  ಬಿಜೆಪಿಯಲ್ಲಿ ಎಲ್ಲರೂ ಅತೃಪ್ತರೇ, ನಮ್ಮ ಪಕ್ಷ 136 ಸೀಟು ಪಡೆದು ಸರ್ಕಾರ ರಚನೆ ಮಾಡಿದೆ. ಬಿಜೆಪಿಯವರಿಗೆ ತಾಕತ್ತು, ದಮ್‌ ಇದ್ದರೇ 40 ಅಲ್ಲ, 4 ಶಾಸಕರನ್ನು ಕೆರೆದುಕೊಂಡು ಹೋಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸವಾಲು ಹಾಕಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಬರೋದಾದ್ರೆ ಬರುವರಿಗೆ ಬೇಡ ಅನ್ನೋದಿಲ್ಲ. ಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದರು.

ಲೋಕಸಭೆಯ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ಅದು ಅಪವಿತ್ರ ಮೈತ್ರಿ . ಜ್ಯಾತ್ಯತೀತ ಜನತಾದಳ ಎಂದು ಇರೋದನ್ನು ಕೋಮವಾದಿ ಜನತಾದಳ ಎಂದು ಬದಲಾಯಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಸಿಎಂ ಸಿದ್ದರಾಮಯ್ಯರನ್ನು ಜನರು ದೇವರಾಜ್ ಅರಸರಂತೆ ಕಾಣುತ್ತಿದ್ದಾರೆ: ಶಿವರಾಜ ತಂಗಡಗಿ 

ಸಚಿವ ಡಿ.ಸುಧಾಕರ ವಿರುದ್ಧ ಎಫ್‌ಐಆರ್‌ ಕುರಿತ ಪ್ರಶ್ನೆಗೆ, ತಪ್ಪು ಮಾಡಿದವರಿಗೆ ಕಾನೂನು ಕ್ರಮ ಕೈಗೊಳ್ಳುತ್ತದೆ. ಪ್ರಕರಣದ ಬಗ್ಗೆ ಈಗಾಗಲೇ ಸಿಎಂ, ಡಿಸಿಎಂ ಮಾಹಿತಿ ಪಡೆದುಕೊಂಡಿರುತ್ತಾರೆ. ಅಧಿಕಾರ ನಮ್ಮ ಕೈಯಲ್ಲಿ ಇದೆ ಎಂದು ಏನೇನೋ ಮಾಡಲು ಆಗಲ್ಲ, ಮಂತ್ರಿಯಾಗಿರುವುದರಿಂದ ಸುದ್ದಿ ಆಗಬಹುದು ಎಂದು ಕೇಸ್ ಮಾಡಿರಬಹುದು, ವಿರೋಧ ಪಕ್ಷದವರ ಒತ್ತಡದಿಂದ ಕೇಸ್ ಆಗಿರಬಹುದು. ನಮ್ಮ ಸರ್ಕಾರ ದಲಿತರ ಮೇಲೆ ದೌರ್ಜನ್ಯ ಆಗಲು ಬಿಡುವುದಿಲ್ಲ. ಕಾನೂನು ಬಹಳ ಗಟ್ಟಿಯಾಗಿವೆ. ಅದಕ್ಕೆಲ್ಲ ಅವಕಾಶ ಇರುವುದಿಲ್ಲ, ಅವರ ಮೇಲೆ ಯಾಕೆ ಹೀಗಾಗಿದೆ ಎಂದು ತಿಳಿದುಕೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಹಾಗೂ ಮಾಜಿ ಶಾಸಕ ಹಸನಸಾಬ ದೋಟಿಹಾಳ ಸೇರಿದಂತೆ ಪಕ್ಷದ ನಾಯಕರು ಕಾರ್ಯಕರ್ತರು ಇದ್ದರು.

ಹರಿಪ್ರಸಾದ ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕಿತ್ತು: ತಂಗಡಗಿ

ಹಿರಿಯ ಕಾಂಗ್ರೆಸ್‌ ನಾಯಕ ಬಿ.ಕೆ. ಹರಿಪ್ರಸಾದ ಅವರಿಗೆ ಏನೋ ನೋವಾಗಿರಬಹುದು, ಕಾರಣ ಸಿಎಂ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಅವರ ಬಗ್ಗೆ ತಪ್ಪು, ಸರಿ ಎಂದು ನಾನು ಹೇಳುವುದಿಲ್ಲ, ಆದರೆ ಅವರು ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕಿತ್ತು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ ಅವರು, ಸಿಎಂ ಸಿದ್ದರಾಮಯ್ಯ ಅವರ ಕುರಿತು ಮಾಧ್ಯಮದವರ ಮುಂದೆ ಬಹಿರಂಗವಾಗಿ ಮಾತನಾಡಬಾರದಿತ್ತು, ಯಾವುದೇ ಸಮಸ್ಯೆ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಿದರೆ ಪರಿಹಾರವಾಗಬಹುದಿತ್ತು. ರಾಷ್ಟ್ರೀಯ ಅಧ್ಯಕ್ಷರು ಮಾತನಾಡಿ ಅವರ ಸಿಟ್ಟನ್ನು ಶಮನ ಮಾಡಲಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯನವರು ನಾನು ದೇವರಾಜ ಅರಸು ಆಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ದೇವರಾಜು ಅರಸು ಜಾಗದಲ್ಲಿ ಸಿದ್ದರಾಮಯ್ಯ ಅವರನ್ನ ಕಾಣುತ್ತೇವೆ ಅಂತ ನಾನೇ ಹೇಳಿದ್ದು. ಸಿದ್ದರಾಮಯ್ಯ ನಾನು ಯಾವತ್ತೂ ದೇವರಾಜ ಅರಸು ಆಗಲ್ಲ ಎಂದು ಸ್ವತಃ ಹೇಳಿದ್ದಾರೆ. ದೇವರಾಜು ಅರಸು ಅವರು ನಡೆದು ಬಂದ ಹಾದಿಯಲ್ಲಿ ಸಿದ್ದರಾಮಯ್ಯ ನಡೆಯುತ್ತಿದ್ದಾರೆ ಆದ ಕಾರಣ ಆ ರೀತಿ ಹೇಳಲಾಗಿದೆ ಎಂದರು.

ಬಿಜೆಪಿಯವರು ಎಸ್ಸಿ, ಎಸ್ಟಿ ಹಣ ಬೇರೆ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಆರೋಪ ಮಾಡುವುದು ಸರಿಯಲ್ಲ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದೇ ಹಣವನ್ನು ಮೆಟ್ರೋ ಯೋಜನೆಗೆ ಬಳಸಲಾಗಿತ್ತು. ಆಗ ಗೋವಿಂದ ಕಾರಜೋಳ ಅವರು ಬಿಸ್ಕೀಟ್‌ ತಿನ್ನುತ್ತಿದ್ದರಾ? ನಮ್ಮ ಸರ್ಕಾರದ ಕುರಿತು ಮಾತನಾಡುವ ಯೋಗ್ಯತೆ ಬಿಜೆಪಿಯವರಿಗೆ ಇಲ್ಲ ಎಂದರು.

ಬಿ.ಎಲ್‌.ಸಂತೋಷ್‌ 4 ಶಾಸಕರನ್ನು ಕರೆಸಿಕೊಳ್ಳಲಿ ನೋಡೋಣ: ಸಚಿವ ಶಿವರಾಜ ತಂಗಡಗಿ

ನಮ್ಮಲ್ಲಿ ಯಾವುದೆ ಹಗರಣಗಳಿಲ್ಲ, ಸಿಎಂ ಸಿದ್ದರಾಮಯ್ಯ ಮೇಲೂ ಯಾವುದೇ ಹಗರಣಗಳಿಲ್ಲ, ಅವರು ಕ್ಲೀನ್ ಹ್ಯಾಂಡ್ ಅನ್ನೊದು ಎಲ್ಲರಿಗೂ ಗೊತ್ತಿದೆ. ಬೇಕಿದ್ರೆ ನ್ಯಾಯಾಲಯಕ್ಕೆ ಹೋಗಲಿ ಎಂದು ಬಿಜೆಪಿಯ ನಾಯಕರಿಗೆ ತಿರುಗೇಟು ನೀಡಿದರು.

ಬಸನಗೌಡ ಯತ್ನಾಳ ಅವರಿಗೆ ಭ್ರಮೆ ಬಂದಿದೆ, ಡಿಕೆಶಿ ಹಾಗೂ ರೈತರ ಕುರಿತು ಮಾತನಾಡುವದು ತಪ್ಪು, ಯತ್ನಾಳ ಅವರು ಈ ಬಗ್ಗೆ ಮಾತಾಡೋದು ಸರಿಯಲ್ಲ ಯಾರೇ ಆಗಲಿ ರೈತರ ವಿಚಾರದಲ್ಲಿ ಹಗುರವಾಗಿ ಮಾತಾಡಬಾರದು. ರೈತರ ಜೀವಕ್ಕೆ ಬೆಲೆ ಕಟ್ಟೊಕೆ ಆಗಲ್ಲ ಆತ್ಮಹತ್ಯೆ ಮಾಡಿಕೊಂಡಾಗ ಅವರ ಕುಟುಂಬಕ್ಕೆ ಸಹಾಯ ಮಾಡಲಾಗತ್ತೆ. ಯಾರೂ ಕೂಡಾ ರೈತರ ಜೀವಕ್ಕೆ ಬೆಲೆ ಕಟ್ಟೋಕೆ ಆಗಲ್ಲ. ಸಿದ್ದರಾಮಯ್ಯನವರು ರೈತರ ಆತ್ಮಹತ್ಯೆಗೆ ಎರಡು ಲಕ್ಷ ಇರುವ ಹಣವನ್ನು ಐದು ಲಕ್ಷಕ್ಕೆ ಏರಿಸಿದ್ದು, ರೈತ ಕುಟುಂಬಕ್ಕೆ ಒಳ್ಳೆಯದಾಗಲಿ ಸ್ವಲ್ಪ ಸಹಾಯವಾಗಬೇಕು ಎಂಬ ಉದ್ದೇಶದಿಂದ ಎಂದರು.

click me!