ಬಿಜೆಪಿ- ಜೆಡಿಎಸ್ ಜಮೀನ್ದಾರರ ಪರ, ಬರೀ ಹೇಳ್ತಾರೆ, ಏನೂ ಮಾಡಲ್ಲ: ಸಚಿವ ರಾಮಲಿಂಗಾರೆಡ್ಡಿ

By Kannadaprabha NewsFirst Published Sep 21, 2024, 12:43 PM IST
Highlights

ಬಿಜೆಪಿಯವರು ಯಾವತ್ತಿಗೂ ಅಂಬಾನಿ, ಅದಾನಿಯಂತಹ ಶ್ರೀಮಂತರ ಪರವಾಗಿಯೇ ಇರುತ್ತಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಲೋಕಸಭೆ ಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಅಧಿಕಾರ ಪಡೆದರು. ಇನ್ನೊಂದು 20 ಸೀಟು ಕಡಿಮೆಯಾಗಿದ್ದರೆ, ಅವರು ಮನೆಗೆ ಹೋಗಬೇಕಿತ್ತು. ಆದರೆ, ಅದು ಹೇಗೋ ಅಧಿಕಾರ ಹಿಡಿದಿದ್ದಾರೆ ಎಂದ ಸಚಿವ ರಾಮಲಿಂಗಾರೆಡ್ಡಿ 

ಚನ್ನಪಟ್ಟಣ(ಸೆ.21):  ಕಾಂಗ್ರೆಸ್ ಯಾವತ್ತು ಬಡವರ ಪರವಾಗಿದ್ದು, ಆರ್ಥಿಕವಾಗಿ ದುರ್ಬಲರಾಗಿರುವವರ ಅಭಿವೃದ್ಧಿಗೆ ಶ್ರಮಿಸುತ್ತದೆ. ಬಿಜೆಪಿ-ಜೆಡಿಎಸ್‌ನವರು ಜಮೀನ್ದಾರರ ಪರ. ಅವರು ಬರೀ ಹೇಳುತ್ತಾರೆ ಆದರೆ, ಏನು ಮಾಡುವುದಿಲ್ಲ. ಇದೇ ನಮಗೂ ಅವರಿಗೆ ಇರುವ ವ್ಯತ್ಯಾಸ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯವರು ಯಾವತ್ತಿಗೂ ಅಂಬಾನಿ, ಅದಾನಿಯಂತಹ ಶ್ರೀಮಂತರ ಪರವಾಗಿಯೇ ಇರುತ್ತಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಲೋಕಸಭೆ ಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಅಧಿಕಾರ ಪಡೆದರು. ಇನ್ನೊಂದು ೨೦ ಸೀಟು ಕಡಿಮೆಯಾಗಿದ್ದರೆ, ಅವರು ಮನೆಗೆ ಹೋಗಬೇಕಿತ್ತು. ಆದರೆ, ಅದು ಹೇಗೋ ಅಧಿಕಾರ ಹಿಡಿದಿದ್ದಾರೆ ಎಂದರು.

Latest Videos

ದೀಪಾವಳಿ ಬಳಿಕ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತಾ? : ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು

ಸಿದ್ದರಾಮಯ್ಯ ಮೊದಲ ಅವಧಿಗೆ ಮುಖ್ಯಮಂತ್ರಿ ಆಗುವುದಕ್ಕೆ ಮುಂಚೆ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ ೧೬೫ ಭರವಸೆಗಳಲ್ಲಿ ಅಧಿಕಾರಕ್ಕೆ ಬಂದ ನಂತರ ೧೫೮ ಭರವಸೆಗಳನ್ನು ಈಡೇರಿಸಿತ್ತು. ಆದರೆ ಆ ನಂತರ ಅಧಿಕಾರಕ್ಕೆ ಬಂದ ಬಿಜೆಪಿಯವರು ೬೦೦ ಭರವಸೆಗಳಲ್ಲಿ ಕೇವಲ ೬೦ ಭರವಸೆಗಳನ್ನು ಮಾತ್ರ ಈಡೇರಿಸಿದರು. ಇದೇ ಕಾಂಗ್ರೆಸ್‌ಗೂ ಅವರಿಗೂ ಇರುವ ವ್ಯತ್ಯಾಸ ಎಂದು ತಿಳಿಸಿದರು.

492 ಕೋಟಿ ವೆಚ್ಚದ ಕಾಮಗಾರಿ: 

ಚನ್ನಪಟ್ಟಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ ಮಾಡಿದ ವೇಳೆ ಜನ ತಮ್ಮ ಸಮಸ್ಯೆಗಳ ಕುರಿತು ಅಹವಾಲು ಸಲ್ಲಿಸಿದ್ದರು. ಆ ನಂತರ ತಾಲೂಕಿನಲ್ಲಿನ ಸಮಸ್ಯೆಗಳ ಕುರಿತು ನಮ್ಮ ಗಮನಕ್ಕೆ ಬಂತು. ಅದರ ಫಲವೇ ಇಂದು ತಾಲೂಕಿನಲ್ಲಿ ೪೯೨ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಹೇಳಿದರು.

ತಾಲೂಕಿನ ನಿವೇಶನ ರಹಿತರಿಗೆ ಒಟ್ಟು ಮೂರು ಸಾವಿರ ನಿವೇಶನ ನೀಡಲು ಯೋಜನೆ ರೂಪಿಸಲಾಗಿದ್ದು, ಶನಿವಾರ ಮೊದಲ ಹಂತದಲ್ಲಿ ಒಂದು ಸಾವಿರ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ತಾಲೂಕಿನ ಸಮಗ್ರ ಅಭಿವೃದ್ಧಿ ಕಾಂಗ್ರೆಸ್ ಬದ್ಧವಾಗಿದೆ. ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲೇ ಕಾಂಗ್ರೆಸ್ ಜಾರಿಗೆ ತಂದಿದೆ. ಯಾರು ಕೆಲಸ ಮಾಡುತ್ತಾರೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ತಾಲೂಕಿನಲ್ಲಿ ಉಳಿದ ಕೆಲಸ ಕಾರ್ಯಗಳು ಏನಾದರೂ ಇದ್ದರೆ ಅದನ್ನು ಶೀಘ್ರದಲ್ಲೇ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಎಲ್ರೂ ‘ನಾನೇ ಸಿಎಂ’ ಎನ್ನುತ್ತಿರೋದು 2028ರ ಚುನಾವಣೆಗೆ: ಸಚಿವ ರಾಮಲಿಂಗಾರೆಡ್ಡಿ

ಕಾರ್ಯಕ್ರಮದಲ್ಲಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪ್ರಮೋದ್, ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ತಹಸೀಲ್ದಾರ್ ನರಸಿಂಹಮೂರ್ತಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಬೋರ್‌ವೆಲ್ ರಂಗನಾಥ್ ಇತರರು ಇದ್ದರು.

ಇನ್ನು 8.8 ವರ್ಷ ನಮ್ಮದೇ ಸರ್ಕಾರ

ಬಿಜೆಪಿ, ಜೆಡಿಎಸ್‌ನವರು ದೀಪಾವಳಿ ನಂತರ ಕಾಂಗ್ರೆಸ್ ಸರ್ಕಾರ ಬಿದ್ದುಹೋಗುತ್ತದೆ. ಆಗ ಬೀಳುತ್ತದೆ ಈಗ ಬೀಳುತ್ತದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಆದರೆ ಅದು ಸಾಧ್ಯವೇ ಇಲ್ಲ. ಈ ಬಾರಿಯ ಅವಧಿ ಇನ್ನು ೩.೮ ವರ್ಷವಿದ್ದು, ಅದನ್ನು ಪೂರೈಸಿ ನಂತರ ಮತ್ತೆ ಐದು ವರ್ಷ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಒಟ್ಟು ೮.೮ ವರ್ಷ ನಮ್ಮದೇ ಸರ್ಕಾರ ಇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

click me!