ಬಿಜೆಪಿಯಲ್ಲಿ ಈಶ್ವರಪ್ಪ ಆಟಕ್ಕುಂಟು ಲೆಕ್ಕಕ್ಕಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ

By Govindaraj SFirst Published Feb 10, 2024, 8:31 AM IST
Highlights

ಬಿಜೆಪಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಹ ಸ್ಥಿತಿ ಎದುರಿಸುತ್ತಿದ್ದಾರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು. 

ಕಲಬುರಗಿ (ಫೆ.10): ಬಿಜೆಪಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಹ ಸ್ಥಿತಿ ಎದುರಿಸುತ್ತಿದ್ದಾರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು. ದೇಶ ವಿಭಜನೆಯ ಮಾತನಾಡುವ ಯಾವುದೇ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ದೇಶದಲ್ಲಿ ಜಾರಿಗೆ ತರಬೇಕು ಎಂದು ಸಂಸದ ಡಿ.ಕೆ.ಸುರೇಶ್ ವಿರುದ್ಧ ಈಶ್ವರಪ್ಪ ನೀಡಿರುವ ಹೇಳಿಕೆಗೆ ಅವರು ಹೀಗೆ ಪ್ರತಿಕ್ರಿಯಿಸಿದರು. ಒಂದು ವೇಳೆ, ಇಂಥದ್ದೊಂದು ಕಾನೂನು ಜಾರಿಗೆ ತಂದರೆ ಮೊದಲು ಬಿಜೆಪಿ ಹಾಗೂ ಆರ್‌ಎಸ್‍ಎಸ್ ಕಚೇರಿಯ ಅರ್ಧ ಮಂದಿ ಖಾಲಿ ಆಗುತ್ತಾರೆ. 

ಈಶ್ವರಪ್ಪ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿಯ ಹೇಳಿಕೆ ಕೊಡುತ್ತಿರುತ್ತಾರೆ. ಅವರದ್ದೇ ಪಕ್ಷದಲ್ಲಿ ಅವರನ್ನು ಯಾರೂ ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅವರಿಗೆ ನಿವೃತ್ತಿ ಕೊಡಿಸಿ ಕೂಡಿಸಿದ್ದಾರೆ. ಅವರ ಮಗನಿಗೂ ಟಿಕೆಟ್ ಕೊಡಿಸಲು ಅವರಿಂದ ಆಗಿಲ್ಲ. ಅವರು ಬೆಳಗ್ಗೆ ರಾಮಾಯಣ, ಮಧ್ಯಾಹ್ನ ಕೀರ್ತನೆ ಹಾಗೂ ರಾತ್ರಿ ಹನುಮಾನ್ ಚಾಲೀಸಾ ಕೇಳಿಕೊಂಡು ಆರಾಮವಾಗಿ ಮಲಗಬೇಕು ಎಂದು ವ್ಯಂಗ್ಯವಾಗಿ ಟಾಂಗ್ ನೀಡಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಅಲ್ಲಮಪ್ರಭು ಪಾಟೀಲ್ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಕಾಂಗ್ರೆಸ್ ಮುಖಂಡ ರಾಜಗೋಪಾಲರೆಡ್ಡಿ ಇದ್ದರು.

ಕೆಂಪಣ್ಣ ಆರೋಪಕ್ಕೆ ತಿರುಗೇಟು: ಈಗಿನ ರಾಜ್ಯ ಸರ್ಕಾರದಲ್ಲಿಯೂ 40 ಪರ್ಸೆಂಟ್ ಕಮಿಷನ್ ದಂಧೆ ನಡೆಯುತ್ತಿದೆ ಎನ್ನುವುದು ನಿಜವಾಗಿದ್ದರೆ, ರಾಜ್ಯ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣ ತಮ್ಮ ಬಳಿ ದಾಖಲೆ ಇದ್ದರೆ ಆಯೋಗದ ಎದುರು ಸಲ್ಲಿಸಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪಣ್ಣ ಅವರ ಬಳಿ ಅಂತಹ ಯಾವುದೇ ದಾಖಲೆ ಇದ್ದರೂ ಬಿಡುಗಡೆ ಮಾಡಬೇಕು.  ಈ ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ ಕೇಳಿ ಬಂದ 40 ಪರ್ಸೆಂಟ್ ಕಮಿಷನ್ ಕುರಿತ ದೂರುಗಳ ವಿಚಾರಣೆಗೆ ಈಗಾಗಲೇ ಪ್ರಸಕ್ತ ಸರ್ಕಾರ ಆಯೋಗ ರಚಿಸಿದೆ. 

ಕಾವೇರಿ, ಕೃಷ್ಣಾ ಸೇರಿ 12 ನದಿ ನೀರು ಕುಡಿಯುವಂತಿಲ್ಲ: ಏನಿದು ಆಘಾತಕಾರಿ ಸಂಗತಿ!

ಆ ಆಯೋಗ ಇನ್ನೂ ಜೀವಂತವಾಗಿದೆ. ಆಯೋಗದ ಎದುರು ಕೆಂಪಣ್ಣ, ರಾಜ್ಯದ ಸಾಮಾನ್ಯ ಜನರಾಗಲಿ ದೂರು ಸಲ್ಲಿಸಿದರೆ ಖಂಡಿತ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ದಿಲ್ಲಿಯಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಕುರಿತು ಪ್ರಸ್ತಾಪಿಸಿದ ಅವರು, ತೆರಿಗೆ ವಿಚಾರದಲ್ಲಿ ಬಿಜೆಪಿಯವರು ಕನ್ನಡಿಗರ ಪರ ಮಾತನಾಡುತ್ತಿಲ್ಲ. ಅವರೇನಿದ್ದರೂ ಪ್ರಧಾನಿ ಮೋದಿ ಮೆಚ್ಚಿಸೋದಕ್ಕೆ ಮಾತ್ರ ದಿಲ್ಲಿಗೆ ಹೋಗುತ್ತಾರೆ. ಈ ಹಿಂದೆ ಪ್ರಧಾನಿ ಮೋದಿ ಸಿಎಂ ಆಗಿದ್ದಾಗ ಏನೇನು ಮಾತನಾಡಿದ್ದರು ಅನ್ನೋದನ್ನು ದಯವಿಟ್ಟು ಬಿಜೆಪಿಯವರು ತಿಳಿದುಕೊಳ್ಳಬೇಕು. ಆಗ ಮೋದಿಯವರು ನಮಗೂ ಟ್ಯಾಕ್ಸ್ ಕೇಳಬೇಡಿ, ನಿಮ್ಮನ್ನೂ ನಾವು ಅನುದಾನ ಕೊಡಿ ಅಂತ ಕೇಳಲ್ಲ’ ಎಂದಿದ್ದರು. ಹಾಗಾದರೆ, ಈ ಮಾತು ದೇಶ ವಿಭಜನೆಯ ಮಾತು ಅನಿಸಲ್ವಾ? ಎಂದು ಪ್ರಶ್ನಿಸಿದರು.

click me!