
ವಾಡಿ(ಡಿ.19): ಮುಂಬರುವ ದಿನಗಳಲ್ಲಿ ಯುವನಿಧಿ ಯೋಜನೆ ಸಹ ಜಾರಿಯಾಗಲಿದೆ. ಸದ್ಯ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಬಸವ ತತ್ವ, ಅಂಬೇಡ್ಕರ್ ತತ್ವಗಳ ಮೇಲೆ ನಮ್ಮ ಸರಕಾರ ನಡೆಯುತ್ತಿದೆ. ಬಡವರ ಹಾಗೂ ನೋಂದವರ ಪರ ಕಾಳಜಿ ಇದೆ. ಆದರೆ ಹೊಟ್ಟೆಕಿಚ್ಚುಪಡುವ ಬಿಜೆಪಿಗರಿಗೆ ಇಂತಹ ಆಲೋಚನೆಗಳಿಲ್ಲ. 40% ಕಮಿಷನ್ ಹೊಡೆದು ಸಾರ್ವಜನಿಕರ ಹಣ ಲೂಟಿ ಮಾಡಿ ಅಧಿಕಾರ ಕಳೆದುಕೊಂಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣ ಸಮೀಪದ ಕಮರವಾಡಿ ಗ್ರಾಮದಿಂದ ಬಲರಾಮ ಚೌಕ್ವರೆಗೆ ನಿರ್ಮಿಸಲಾಗುತ್ತಿರುವ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಯ 4.46 ಲಕ್ಷ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಅಡಿಗಲ್ಲು, ವಾಡಿ-ಚಿತ್ತಾಪುರ ರಾಷ್ಟ್ರೀಯ ಹೆದ್ದಾರಿಯಿಂದ ರಾಮನಗರ ತಾಂಡವರೆಗೆ ಪಿಡಬ್ಲುಡಿ ಇಲಾಖೆಯ 200 ಲಕ್ಷದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ಕಮರವಾಡಿ ಗ್ರಾಮದ ಶ್ರೀಸೋಮಲಿಂಗೇಶ್ವರ ದೇವಾಲಯದ ಜೀರ್ಣೋದ್ದಾರ ಹಾಗೂ ಕಲ್ಯಾಣ ಮಂಟಪ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಸಚಿವರು, ಅಭಿವೃದ್ದಿಯೇ ನನ್ನ ಮೂಲ ಮಂತ್ರವಾಗಿದೆ ಎಂದರು.
ಪ್ರಧಾನಿ ಮೋದಿ ಎಂದು ಜಾತಿ, ಧರ್ಮ ನೋಡಿಲ್ಲ: ಭಗವಂತ ಖೂಬಾ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದ್ದ ಬಿಜೆಪಿಗರು ಕೂಡಾ ಈ ಎಲ್ಲಾ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಯೋಜನೆಗಳು ಸರಿಯಿಲ್ಲ ಎನ್ನುವ ಬಿಜೆಪಿಗರು ಜನರ ಮುಂದೆ ಬಂದು ಈ ಮಾತನ್ನು ಹೇಳಲಿ ಎಂದು ಸವಾಲಾಕಿದರು.
ಈ ಹಿಂದಿನ ಬಿಜೆಪಿ ಸರ್ಕಾರದ ಹಗರಣಗಳನ್ನು ನಾನು ಬಯಲಿಗೆಳಿದಿದ್ದಕ್ಕೆ ಚಿತ್ತಾಪುರ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ರೂ 300 ಕೋಟಿ ಅನುದಾನ ವಾಪಸ್ ಪಡೆಯಲಾಯಿತು. ಹಾಗಾಗಿ, ಅಭಿವೃದ್ದಿ ಕಾರ್ಯದಲ್ಲಿ ಹಿನ್ನೆಡೆಯಾಯಿತು. ಆದರೆ, ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ನಿಮಗೆ ಕುಡಿಯುವ ನೀರು, ರಸ್ತೆ, ಶಾಲೆ, ಸಮುದಾಯ ಭವನ ಮುಂತಾದ ಅಭಿವೃದ್ದಿ ಕೆಲಸಗಳನ್ನು ನಿರಂತರವಾಗಿ ಮಾಡುವ ಮೂಲಕ ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಗ್ಯಾರಂಟಿ ಕೇವಲ ಘೋಷಣೆ, ಅನುಷ್ಠಾನಕ್ಕೆ ಬಂದಿಲ್ಲ: ಮಲ್ಕಪ್ಪಗೋಳ್
ಕಮರವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರು, ಶೌಚಾಲಯ ಸಮಸ್ಯೆ ಇದ್ದು ನಾವುಗಳು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದೇವೆ ಎಂದು ಬಾಲಕಿ ಮರಿಯಮ್ಮ ಗೊಗೇಯರ ಕಣ್ಣೀರು ಹಾಕುತ್ತಲೇ ಶಾಸಕರ ಎದುರು ಸಮಸ್ಯೆ ತೋಡಿಕೊಂಡ ಘಟನೆ ಜರುಗಿತು. ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾರಿನಿಂದ ಇಳಿಯುತ್ತಲೇ ಮನದಲ್ಲಿ ಮಡುಗಟ್ಟಿದ ಸಮಸ್ಯೆಯನ್ನು ಬಾಲಕಿಯರು ಕಣ್ಣೀರು ತುಂಬಿಕೊಂಡು ಹೊರಹಾಕಿದರು. ಬಾಲಕಿಯರ ಕಣ್ಣೀರಿಗೆ ಮರುಗಿದ ಸಚಿವ ಪ್ರಿಯಾಂಕ್, ಶಾಲೆಯ ಸಮಸ್ಯೆಗಳನ್ನು ಪಟ್ಟಿ ಮಾಡಿ ಈ ತಕ್ಷಣವೇ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಕಾಂಗ್ರೆಸ್ ಮುಖಂಡ ನಾಗರೆಡ್ಡಿಗೌಡ ಪಾಟೀಲ ಕರದಾಳ, ಗ್ರಾಪಂ ಅಧ್ಯಕ್ಷೆ ಅನಿತಾ ಹರಿಸಿಂಗ್ ಚವ್ಹಾಣ, ತಹಶೀಲ್ದಾರ ಸೈಯದ್ ಷಾಷಾವಲಿ, ತಾಪಂ ಇಒ ನೀಲಗಂಗಾ ಬಬಲಾದಿ, ಪಿಡಿಒ ಹಣಂಮತರಾಯ ಹೊಸ್ಸಮನಿ, ಉಪಾಧ್ಯಕ್ಷ ರಾಮು ಗಡ್ಡಿಮನಿ, ಸದಸ್ಯರಾದ ಮಂಗಲಸಿಂಗ್ ಚವ್ಹಾಣ, ರಾಜು ಗುತ್ತೇದಾರ, ಮಲ್ಲಮ್ಮ ಬೊಮನಹಳ್ಳಿ, ಅಯ್ಯಪ್ಪ ಆಲೂರು, ಮುಖಂಡರಾದ ಇಸ್ಮಾಯಿಲ್ ಸಾಬ್ ಮುಲ್ಲಾ, ಬಸವರಾಜ ಸುಲೆಪೇಠ, ಅಜೀಜ್ ಸೇಠ ರಾವೂರ, ಶಿವಶರಣಪ್ಪ ಯರಗಲ್, ಶಿವಶರಣಪ್ಪ ಶಿರವಾಳ, ಮಹ್ಮದ ಯೂಶ್ಯಫ್ ಮುಲ್ಲಾ, ರಮೇಶ ಮರಗೋಳ, ಶಿವಾನಂದ ಪಾಟೀಲ್ ಜಗದೀಶ ಚವ್ಹಾಣ, ಸೈಯದ್ ಚಾಂದಪಾಶಾ, ಧೂಳಪ್ಪ ಯರಗಲ್, ಖದೀರ್ ಮುಲ್ಲಾ, ಸಿದ್ದಪ್ಪ ತಳವಾರ, ಸಿದ್ದಪ್ಪ ಕೊಟಗಾರ, ಹರಿಸಿಂಗ್ ಚವ್ಹಾಣ, ಶಂಕರ ಗಂಗನೋರ, ಬಾಬುರಾವ್ ಅಣಕೇರಿ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು, ಗ್ರಾಮದ ಮಹಿಳೆಯರು ಪಾಲ್ಗೋಂಡಿದ್ದರು. ಯುವ ಮುಖಂಡ ಮಹೆಬೂಬ್ ಮುಲ್ಲಾ ಸ್ವಾಗತಿಸಿದರು. ಶಿಕ್ಷಕ ಭೀಮಶಂಕರ ಇಂದೂರ ನಿರೂಪಿಸಿ, ವಂದಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.