
ನಾಗಮಂಗಲ (ಜು.31): ರಾಜ್ಯದ ಪ್ರತಿ ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಿ ಶಾಂತಿ ನೆಮ್ಮದಿಯಿಂದ ಬದುಕು ಕಟ್ಟಿಕೊಡಬೇಕೆಂಬ ಉದ್ದೇಶದಿಂದ ಐದು ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಪಟ್ಟಣದ ಹೊರ ವಲಯ ಎಪಿಎಂಸಿ ಆವರಣದಲ್ಲಿ ಮೈಸೂರಿನ ಓಡಿಪಿ ಸಂಸ್ಥೆ, ತಾಲೂಕು ಕೃಷಿ ಕಣಜ ರೈತ ಉತ್ಪಾದಕರ ಸಮಿತಿ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಎಪಿಎಂಸಿ ಸಹಭಾಗಿತ್ವದಲ್ಲಿ ಭಾನುವಾರ ಆಯೋಜಿಸಿದ್ದ ರೈತರಿಗೆ ಉಚಿತ ಬಿತ್ತನೆ ರಾಗಿ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ರೈತರ ಸಾಲಮನ್ನಾ ಮಾಡಿದ್ದರೆ ಸರ್ಕಾರಕ್ಕೆ 6 ರಿಂದ 7 ಸಾವಿರ ಕೋಟಿ ಹಣ ರು. ಹೊರೆಯಾಗುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳಿಂದ ಪ್ರತಿ ವರ್ಷ 52 ಸಾವಿರ ಕೋಟಿ ರು. ರಾಜ್ಯದ ಜನರಿಗೆ ತಲುಪಲಿದೆ. ಈ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒಂದಲ್ಲೊಂದು ರೂಪದಲ್ಲಿ ಕನಿಷ್ಠ 5 ರಿಂದ 6ಸಾವಿರ ಹಣ ತಲುಪುತ್ತದೆ ಎಂದರು. ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಕಾರ್ಯ ನಡೆಯುತ್ತಿದೆ. ಈವರೆಗೆ ನೋಂದಣಿ ಮಾಡಿಕೊಂಡಿರುವ ಮಹಿಳೆಯರ ಬ್ಯಾಂಕ್ ಖಾತೆಗೆ ಆ.18ರಂದು ಏಕ ಕಾಲದಲ್ಲಿ ತಲಾ 2 ಸಾವಿರ ಹಣ ಜಮಾ ಆಗುತ್ತದೆ.
ಟೋಲ್ ಸಂಗ್ರಹಿಸುವವರು ನಾವಲ್ಲ, ಹೆದ್ದಾರಿ ಪ್ರಾಧಿಕಾರದವರು: ಸಿದ್ದರಾಮಯ್ಯ
ಈ ಯೋಜನೆಯಲ್ಲಿ 2023ರ ಆಗಸ್ವ್ ನಿಂದ 2024ರ ಮಾಚ್ರ್ವರೆಗಿನ 8 ತಿಂಗಳಿಗೆ 18 ಸಾವಿರ ಕೋಟಿ ಹಣ ರಾಜ್ಯದ ಮಹಿಳೆಯರಿಗೆ ತಲುಪಲಿದೆ ಎಂದರು. ಶಕ್ತಿ ಯೋಜನೆಯಡಿಯಲ್ಲಿ ಪ್ರತಿನಿತ್ಯ ರಾಜ್ಯದಲ್ಲಿ 50 ಲಕ್ಷ ಮಂದಿ ಮಹಿಳೆಯರು ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಈ ಯೋಜನೆಯಿಂದ ಮಹಿಳೆಯರಿಗೆ ದೊಡ್ಡ ಪ್ರಮಾಣದ ಅನುಕೂಲವಾಗಿದೆ. ಇದಲ್ಲದೆ ಅನ್ನಭಾಗ್ಯ ಮತ್ತು ಗೃಹ ಜ್ಯೋತಿ ಯೋಜನೆಯೂ ಸಹ ಜನರಿಗೆ ತಲುಪುತ್ತಿದೆ. ಯುವನಿಧಿ ಯೋಜನೆಯೂ ಸಹ ಡಿಸೆಂಬರ್ ಅಥವಾ ಜನವರಿಯಿಂದ ಜಾರಿಯಾಗುತ್ತದೆ ಎಂದರು.
ಓಡಿಪಿ ಸಂಸ್ಥೆಯು ಅನೇಕ ಜನಪರ ಕಾರ್ಯಕ್ರಮ ಆಯೋಜಿಸಿ ರೈತರಿಗೆ ಹೆಚ್ಚು ಅನುಕೂಲ ಕಲ್ಪಿಸುತ್ತಿದೆ. ರೈತರು ಹಿಂದಿನ ಪದ್ಧತಿ ಬಿಟ್ಟು ಕಾಲ ಬದಲಾದಂತೆ ಆಧುನಿಕ ಕೃಷಿ ಪದ್ಧತಿ ಅನುಸರಿಸಿ ಬೆಳೆ ಬೆಳೆದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದರು. ವೇದಿಕೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ತೇರ್ಗಡೆ ಹೊಂದಿರುವ ಸಂಸ್ಥೆ ಸದಸ್ಯತ್ವ ಹೊಂದಿರುವ ರೈತರ ಮಕ್ಕಳನ್ನು ಸನ್ಮಾನಿಸಲಾಯಿತು. ನೂರಾರು ಮಂದಿ ರೈತರಿಗೆ ಉಚಿತವಾಗಿ ಬಿತ್ತನೆ ರಾಗಿ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಕೃಷಿ ಕಣಜ ರೈತ ಉತ್ಪಾದಕ ಸಮಿತಿ ಅಧ್ಯಕ್ಷ ಎಸ್.ವೆಂಕಟೇಶ್, ಮೈಸೂರಿನ ಓಡಿಪಿ ಸಂಸ್ಥೆ ನಿರ್ದೇಶಕ ವಂ.ಸ್ವಾಮಿ ಅಲೆಕ್ಸ್ ಪ್ರಶಾಂತ್ ಸಿಕ್ವೆರಾ, ಜಂಟಿ ಕೃಷಿ ನಿರ್ದೇಶಕ ಅಶೋಕ್, ಎಪಿಎಂಸಿ ಕಾರ್ಯದರ್ಶಿ ನಾಗೇಶ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ರಮೇಶ್ಗೌಡ, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಣ್ಣಗೌಡ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ರಾಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಕೃಷಿ ಅಧಿಕಾರಿ ಯುವರಾಜ, ಮುಖಂಡರಾದ ಶರತ್ ರಾಮಣ್ಣ, ರವಿಕಾಂತೇಗೌಡ, ಓಡಿಪಿ ಸಂಸ್ಥೆ ರಮೇಶ್, ಜಯಶೀಲ ಸೇರಿದಂತೆ ನೂರಾರು ಮಂದಿ ರೈತರು, ರೈತ ಮಹಿಳೆಯರಿದ್ದರು.
ಹವಾಮಾನ ಆಧಾರಿತ ಬೆಳೆ ಬಗ್ಗೆ ಜಾಗೃತಿ ಮೂಡಿಸಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ
ಈ ಬಾರಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವ ಹಿನ್ನೆಲೆಯಲ್ಲಿ ರಾಗಿ ಬಿತ್ತನೆ ಕಾರ್ಯದಲ್ಲಿಯೂ ಹಿನ್ನಡೆಯಾಗಿದೆ. ಇನ್ನೊಂದು ತಿಂಗಳಲ್ಲಿ ಹೆಚ್ಚಿನ ಬಿತ್ತನೆ ಮಾಡಲು ಅವಕಾಶವಿದೆ. ಹಾಗಾಗಿ ಜಿಲ್ಲೆಯ ರೈತರಿಗೆ 270 ಕ್ವಿಂಟಾಲ್ ಬಿತ್ತನೆ ರಾಗಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ರೈತರು ಇಲಾಖೆಯ ಸವಲತ್ತು ಪಡೆದುಕೊಳ್ಳಬೇಕು.
-ಎನ್.ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.