
ಮಂಡ್ಯ (ಆ.06): ಕುಮಾರಸ್ವಾಮಿ ಅವರನ್ನು ಬಿಜೆಪಿ ತಮ್ಮ ಪಕ್ಷದ ವಕ್ತಾರರನ್ನಾಗಿ ನೇಮಕ ಮಾಡಿರಬೇಕು. ಅದಕ್ಕೆ ಬಿಜೆಪಿಯವರು ಏನೂ ಮಾತನಾಡದಿದ್ದರೂ ಇವರೇ ಎಲ್ಲವನ್ನೂ ಮಾತನಾಡುತ್ತಿದ್ದಾರೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕುಟುಕಿದರು.
ವರ್ಗಾವಣೆ ದಂಧೆ ಕುರಿತು ಕುಮಾರಸ್ವಾಮಿ ಆರೋಪಿಸುತ್ತಿರುವ ವಿಚಾರವಾಗಿ ಪ್ರಶ್ನಿಸಿದಾಗ, ಬಿಜೆಪಿಯವರು ಕುಮಾರಸ್ವಾಮಿ ಅವರಿಗೆ ಮಾತನಾಡಲು ಬಿಟ್ಟುಕೊಟ್ಟಿರಬೇಕು. ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ದಿಕ್ಕುತಪ್ಪಿಸಲು ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಯಾರೋ ಕುಮಾರಸ್ವಾಮಿಗೆ ಹೇಳಿಕೊಟ್ಟಿರಬೇಕು. ಅದಕ್ಕೆ ಮಾತನಾಡುತ್ತಿದ್ದಾರೆ. ವರ್ಗಾವಣೆಗಳು ಎಲ್ಲರ ಕಾಲದಲ್ಲೂ ಆಗಿವೆ. ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಎಲ್ಲರ ಕಾಲದಲ್ಲೂ ವರ್ಗಾವಣೆಗಳು ಆಗಿವೆ. ಹೀಗೆ ಮಾತಾಡೋದು ಮಾಜಿ ಸಿಎಂ ಆದವರಿಗೆ ಗೌರವ ತರುವುದಿಲ್ಲ. ದೇವೇಗೌಡರೇನಾದರೂ ವರ್ಗಾವಣೆ ವಿಚಾರ ತಪ್ಪು ಎಂದರೆ ಒಪ್ಪುತ್ತೇವೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ವಿಪಕ್ಷದವರಿಗೆ ಊಟ ಸೇರ್ತಿಲ್ಲ, ನಿದ್ರೆ ಬರ್ತಿಲ್ಲ: ಸಚಿವ ಚಲುವರಾಯಸ್ವಾಮಿ
ಈಗಾಗಲೇ ನಾವು ಅನೇಕರಿಗೆ ಉತ್ತರ ಕೊಡುವುದನ್ನೇ ಬಿಟ್ಟಿದ್ದೀವಿ, ಈಗ ಕುಮಾರಸ್ವಾಮಿ ಅವರಿಗೂ ಉತ್ತರ ಕೊಡೋದನ್ನು ಬಿಟ್ಟು ಬಿಡುತ್ತೇವೆ. ಒಂದು ಪೆನ್ಡ್ರೈವ್ ಇಟ್ಕೊಂಡು ಯಾರೂ ನಿದ್ದೆಗೆಟ್ಟಿಲ್ಲ. ಪಾಪ ಕುಮಾರಸ್ವಾಮಿ ನಿದ್ದೆಗೆಟ್ಟಿದ್ದಾರೆ. ಅದರಲ್ಲೇನಿದೆ ಅಂತ ತೋರಿಸಿ ಸಾಕ್ಷಿ ಸಹಿತ ಸಾಬೀತುಪಡಿಸಲಿ ಬೇಡ ಎಂದವರು ಯಾರು ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟಭರವಸೆ ಈಡೇರಿಸಲಿಲ್ಲ. ಯಾಕೆ ಅಂತ ಕೇಳಿದ್ರೆ ಸಮ್ಮಿಶ್ರ ಸರ್ಕಾರ ಅಂತ ಹೇಳುತ್ತಿದ್ದರು. ಆಗ ಸಿಎಂ ಕುರ್ಚಿ ಇದ್ದಿದ್ದು ಒಂದೇ. ಎರಡಲ್ಲ. ಸೈನ್ ಹಾಕುತ್ತಿದ್ದು ಅವರ ಪೆನ್ನಲ್ಲಿಯೇ. ಹಣಕಾಸಿನ ಸಚಿವರೂ ಅವರೇ ಆಗಿದ್ದರು. ಹಾಗಾಗಿ ಕೊಟ್ಟಭರವಸೆಗಳನ್ನು ಈಡೇರಿಸಲು ಯಾವುದೇ ತೊಂದರೆ ಇರಲಿಲ್ಲ. ಈಗ ನಾನು ಕೊಟ್ಟಭರವಸೆಗಳನ್ನು ಈಡೇರಿಸಿದ್ದೇವೆ. ಈಗ ಜೆಡಿಎಸ್ ಮತ್ತು ಬಿಜೆಪಿಗೆ ಲೋಕಸಭೆಗೆ ಏನು ಮಾಡುವುದು ಎಂಬ ಆತಂಕ ಶುರುವಾಗಿದೆ ಎಂದರು.
ಕೋಲಾರ ಜಿಲ್ಲೆ ಅಭಿವೃದ್ಧಿಗೆ 74 ಕೋಟಿ ಅನುದಾನ: ಸಚಿವ ಬೈರತಿ ಸುರೇಶ್
ಯತೀಂದ್ರ ಸಿದ್ದರಾಮಯ್ಯ ಸಿಎಂ ಜೊತೆ ವರ್ಗಾವಣೆ ಬಗ್ಗೆ ಮಾತನಾಡಬಾರದು ಎಂದರೆ ಹೇಗೆ. ಕುಮಾರಸ್ವಾಮಿಯವರ ಮನೆಯವರೆಲ್ಲ ಸೇರಿಕೊಂಡು ರಾಜಕಾರಣ ಮಾಡ್ತಿರಲಿಲ್ವಾ?, ಇಡೀ ಕುಟುಂಬದವರು, ರಾಜಕಾರಣಕ್ಕೆ ಸಂಬಂಧ ಇಲ್ಲದೆ ಇರೋರೆಲ್ಲಾ ರಾಜಕಾರಣ ಮಾಡುತ್ತಿದ್ದರು. ಆಗ ನಾವೇನಾದ್ರೂ ಕೇಳಿದೆವಾ?. ಕುಮಾರಸ್ವಾಮಿ, ದೇವೇಗೌಡರ ಕುಟುಂಬ ಎಂದರೆ ಒಂದು ಗೌರವ ಇದೆ. ದೇವೇಗೌಡರ ಹತ್ತಿರ ಕುಮಾರಸ್ವಾಮಿ ಅವರು ರಾಜಕೀಯ ಮಾರ್ಗದರ್ಶನ ಪಡೆದುಕೊಂಡರೆ ಕುಮಾರಸ್ವಾಮಿಯವರಿಂದ ಈ ರೀತಿ ತಪ್ಪು ಆಗುವುದಿಲ್ಲ ಎಂದು ಬುದ್ಧಿಮಾತು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.