ಸಿಎಂ ಇಳಿಸಲು ಕುತಂತ್ರ ಎಂಬ ಎಚ್‌ಡಿಕೆ ಹೇಳಿಕೆ ಸರಿಯಲ್ಲ: ಸಚಿವ ಚಲುವರಾಯಸ್ವಾಮಿ

By Kannadaprabha NewsFirst Published Sep 15, 2024, 8:09 PM IST
Highlights

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಾಗಮಂಗಲಕ್ಕೆ ಬಂದು ನಷ್ಟಕ್ಕೊಳಗಾದವರಿಗೆ ಪರಿಹಾರ ನೀಡಿರುವುದು ಸಂತೋಷ. ಪರಿಹಾರ ಕೊಟ್ಟಿದ್ದು ತಪ್ಪಲ್ಲ. ಆದರೆ, ಸಿಎಂ ಇಳಿಸಲು ಕುತಂತ್ರ ಎನ್ನುವುದು ಸರಿಯಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. 
 

ನಾಗಮಂಗಲ (ಸೆ.15): ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಾಗಮಂಗಲಕ್ಕೆ ಬಂದು ನಷ್ಟಕ್ಕೊಳಗಾದವರಿಗೆ ಪರಿಹಾರ ನೀಡಿರುವುದು ಸಂತೋಷ. ಪರಿಹಾರ ಕೊಟ್ಟಿದ್ದು ತಪ್ಪಲ್ಲ. ಆದರೆ, ಸಿಎಂ ಇಳಿಸಲು ಕುತಂತ್ರ ಎನ್ನುವುದು ಸರಿಯಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ನಾಗಮಂಗಲಕ್ಕೆ ಬಂದು ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಮಾತನಾಡುವುದು ಎಷ್ಟರಮಟ್ಟಿಗೆ ಸರಿ? ಕುಮಾರಸ್ವಾಮಿ ನನ್ನಂತೆ ಸಾಮಾನ್ಯ ಮಂತ್ರಿಯಲ್ಲ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. 

ನಾಗಮಂಗಲಕ್ಕೆ ಬಂದವರು ಜನರಿಗೆ ಏನು ಸಂದೇಶ ಕೊಡಬೇಕಿತ್ತು? ಅವರು ಕೊಟ್ಟಿದ್ದೇನು? ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸದಿರುವುದೇ ಸೂಕ್ತ ಎಂದರು. ವಿಪಕ್ಷ ನಾಯಕ ಆರ್.ಅಶೋಕ್ ಎಲ್ಲಿಂದ ಪರಿಹಾರ ಕೊಡ್ತೀರಾ ಎಂದು ಅಧಿಕಾರಿಗಳನ್ನು ಕೇಳಿದ್ದಾರೆ. ನಾನು ಈಗಾಗಲೇ ಸಿಎಂ ಬಳಿ ಪರಿಹಾರ ಕುರಿತು ಮಾತನಾಡಿದ್ದೇನೆ. ಕಾನೂನಿನಲ್ಲಿ ನಷ್ಟ ಪರಿಹಾರಕ್ಕೆ ಅವಕಾಶ ಇಲ್ಲ. ಆದರೂ ಪರಿಹಾರ ಕೊಡಿಸಲು ಸಿಎಂ ಅವರನ್ನು ಒಪ್ಪಿಸಿದ್ದೇನೆ. ವರದಿ ಪಡೆದು ಸರ್ಕಾರದಿಂದ ಪರಿಹಾರ ಕೊಡುತ್ತೇನೆ. ನಾನೂ ವೈಯಕ್ತಿಕವಾಗಿ ಪರಿಹಾರ ನೀಡುತ್ತೇನೆ ಎಂದು ಹೇಳಿದರು.

Latest Videos

ಜೈಲು ಸಿಬ್ಬಂದಿ ಮೇಲೆ ದರ್ಪ ತೋರಿಸಿದ್ದೇಕೆ ಈ ಪೊರ್ಕಿ?: ದರ್ಶನ್‌ಗೆ ಹಳೇ ಟಿವಿ ಬೇಡ್ವಂತೆ.. ಹೊಸದೇ ಆಗಬೇಕಂತೆ!

ವಿಶೇಷ ತನಿಖಾ ತಂಡ ರಚನೆ: ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ನಮ್ಮೆಲ್ಲರ ಉದ್ದೇಶ ಶಾಂತಿ ಸ್ಥಾಪನೆ. ಜನರು ನೆಮ್ಮದಿಯಾಗಿ ಬದುಕು ಬದುಕಬೇಕು. ನಾಗಮಂಗಲ ಈಗ ಯಥಾಸ್ಥಿತಿಗೆ ಬಂದಿದೆ. ಈ ಘಟನೆ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ತಿಳಿಯಲು ವಿಶೇಷ ತನಿಖೆ ನಡೆಸಲಾಗುವುದು ಎಂದು ಹೇಳಿದರು. ಗಲಭೆಯಿಂದ ಎರಡೂ ಕಡೆಯವರಿಗೆ ನಷ್ಟವಾಗಿರುವ ಪ್ರಮಾಣದ ವರದಿ ಸಿದ್ದವಾಗಲಿದೆ. ಅದನ್ನು ಸರ್ಕಾರಕ್ಕೆ ಕಳುಹಿಸಿ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ಪ್ರಕರಣದಲ್ಲಿ ಬಂಧಿತರಾಗಿರುವ ಅಮಾಯಕರ ಬಿಡುಗಡೆಗೆ ಮನವಿ ಮಾಡಿದ್ದಾರೆ. ದೋಷಾರೋಪಣಾ ಪಟ್ಟಿಯಲ್ಲಿ ಅಮಾಯಕರನ್ನು ಕೈಬಿಡಲಾಗುವುದು. ಇದರ ಜೊತೆಗೆ ಸಾರ್ವಜನಿಕರೂ ಕೆಲವೊಂದು ಸಲಹೆಗಳನ್ನೂ ನೀಡಿದ್ದು ಅದನ್ನೂ ಸ್ವೀಕರಿಸಿದ್ದೇವೆ ಎಂದು ನುಡಿದರು.

ಎಚ್‌ಡಿಕೆಗೆ ಅಭಿನಂದನೆ: ಕುಮಾರಸ್ವಾಮಿ ಹೇಳಿಕೆ ಏನೇ ಇದ್ದರೂ ನೊಂದವರಿಗೆ ಪರಿಹಾರ ಕೊಟ್ಟಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಈ ಸಮಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಮನವಿ ಮಾಡುತ್ತೇನೆ. ನಾಗಮಂಗಲದಲ್ಲಿ ಘಟನೆ ನಡೆದುಹೋಗಿದೆ. ಅಲ್ಲಿ ಮತ್ತೆ ಶಾಂತಿ ಸ್ಥಾಪನೆ ಆಗಬೇಕು. ನಾಳೆಯಿಂದ ಗಣಪತಿ ಉತ್ಸವ ಆರಂಭವಾಗಲಿದೆ. ಈ ಘಟನೆ ಇಲ್ಲಿಗೇ ನಿಲ್ಲಲು ಎಲ್ಲರ ಸಹಕಾರ ಅಗತ್ಯವಿದೆ. ನಾಗಮಂಗಲ ಯಥಾಸ್ಥಿತಿಗೆ ತಲುಪಿರುವ ಸಂದೇಶವನ್ನು ರಾಜ್ಯಕ್ಕೆ ಕೊಡಬೇಕು ಎಂದು ಮನವಿ ಮಾಡಿದರು. ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಜಿ.ಆದರ್ಶ್, ಡಿವೈಎಸ್ಪಿ ಎ.ಆರ್.ಅಮಿತ್, ಸಿಪಿಐ ನಿರಂಜನ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಸೇರಿ ಹಿಂದೂ- ಮುಸ್ಲಿಮ್ ಸಮುದಾಯದ ನೂರಾರು ಮಂದಿ ಮುಖಂಡರು ಇದ್ದರು.

ಅಕ್ಟೋಬರ್‌ನಲ್ಲಿ ಶುರು ಸ್ಯಾಂಡಲ್‌ವುಡ್ ಸಿನಿಜಾತ್ರೆ: ಮಾರ್ಟಿನ್, UI, ಬಘೀರ.. ಯಾರಿಗೆ ವಿಜಯ ಮಾಲೆ!

ಉಭಯ ಕೋಮಿನವರ ನಡುವೆ ಸಮನ್ವಯ ಸಮಿತಿ ರಚನೆಗೆ ಸಲಹೆ: ನಾಗಮಂಗಲದಲ್ಲಿ ಮುಂದಿನ ದಿನಗಳಲ್ಲಿ ಹಿಂದೂ- ಮುಸ್ಲಿಮರ ನಡುವೆ ಗಲಭೆ ಸಂಭವಿಸದಂತೆ ತಡೆಯಲು ಎರಡೂ ಕೋಮಿನವರ ನಡುವೆ ಸಮನ್ವಯ ಸಮಿತಿ ರಚನೆಯಾಗಬೇಕೆಂಬ ಸಲಹೆ ಸಾರ್ವಜನಿಕರಿಂದ ಶಾಂತಿಸಭೆಯಲ್ಲಿ ವ್ಯಕ್ತವಾಯಿತು. ಯಾರೋ ಕಿಡಿಗೇಡಿಗಳು ಮಾಡುವ ಕೃತ್ಯಕ್ಕೆ ಎರಡೂ ಧರ್ಮದವರು ನೋವು, ಸಂಕಟ, ನಷ್ಟ ಅನುಭವಿಸುವಂತಾಗಿದೆ. ಎರಡೂ ಕಡೆ ತಲಾ ೫೦ ಜನರ ಸಮಿತಿಯನ್ನು ರಚಿಸಿಕೊಂಡರೆ ಮೆರವಣಿಗೆ, ಹಬ್ಬದ ಸಮಯದಲ್ಲಿ ಗಲಭೆ ಸೃಷ್ಟಿಸುವವರನ್ನು ಸುಲಭವಾಗಿ ಪತ್ತೆಹಚ್ಚಬಹುದು. ಇದರಿಂದ ತಾಲೂಕಿಗೆ ಬರುವ ಕೆಟ್ಟಹೆಸರನ್ನೂ ತಡೆಯಬಹುದು ಎಂಬ ಮಾತುಗಳು ಕೇಳಿಬಂದವು. ಹಬ್ಬ, ಮೆರವಣಿಗೆ ನಡೆಸುವುದಕ್ಕೂ ಮುನ್ನ ಎರಡೂ ಕಡೆಯ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದರೆ ಅಶಾಂತಿ ಉಂಟಾಗುವ ಘಟನೆಗಳನ್ನು ತಡೆಯಬಹುದು. ಎರಡೂ ಧರ್ಮದವರು ಪರಸ್ಪರ ಅನ್ಯೋನ್ಯತೆಯಿಂದ ಮಾದರಿಯಾಗಿ ಜೀವನ ನಡೆಸಬಹುದೆಂಬ ಸಲಹೆ ಕೇಳಿಬಂದಿತು.

click me!