
ಹೊಸಕೋಟೆ (ಮಾ.04): ಚುನಾವಣೆ ಸಂಧರ್ಭದಲ್ಲಿ ಶಾಸಕ ಶರತ್ ಬಚ್ಚೇಗೌಡರು ಕ್ಷೇತ್ರದಲ್ಲಿ ಮತದಾರರ ಅನುಕಂಪ ಗಿಟ್ಟಿಸಲು ಅನುದಾನದ ನೆಪದಲ್ಲಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ, ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಾಟಕ ಮಾಡುತ್ತಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಸಿಎಂ ಬೊಮ್ಮಾಯಿ ಅವರು ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಬಿಜೆಪಿ ಶಾಸಕರಿಗೂ ವಿಶೇಷವಾಗಿ 25 ಕೋಟಿ ಅನುದಾನ ಪಕ್ಷಾತೀತವಾಗಿ ಬಿಡುಗಡೆ ಮಾಡಿದ್ದಾರೆ. ಶಾಸಕ ಶರತ್ ಬಚ್ಚೇಗೌಡರು ಸುಮಾರು 48 ಕೋಟಿ ಅನುದಾನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಂದಿದ್ದಾರೆ. ಆದರೂ 10 ಕೋಟಿ ಅನುದಾನ ಸಿಎಂ ಬೊಮ್ಮಾಯಿ ಅವರು ತಡೆ ಹಿಡಿದಿದ್ದಾರೆ. ಅದಕ್ಕೆ ಎಂಟಿಬಿ ನಾಗರಾಜ್ ಕಾರಣ ಎಂದು ವಿನಾಕಾರಣ ಆರೋಪ ಮಾಡುವುದರ ಮೂಲಕ ಕ್ಷೇತ್ರದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಅನುದಾನಕ್ಕೆ ಸಿಎಂ ಫೋಟೋ ಬಳಸಲ್ಲ: ಹೊಸಕೋಟೆ ಕ್ಷೇತ್ರದಲ್ಲಿ ಮಾಡುವ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಸರ್ಕಾರದ ಅನುದಾನ ಆದರೂ ಬ್ಯಾನರ್ಗಳಲ್ಲಿ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ, ಸಂಬಂಧಪಟ್ಟಇಲಾಖೆ ಸಚಿವ, ಉಸ್ತುವಾರಿ ಸಚಿವರ ಫೋಟೊ ಬಳಸದೆ ಬಚ್ಚೇಗೌಡರ ಹಾಗೂ ತಮ್ಮ ಬೆಂಬಲಿಗರ ಫೋಟೋ ಹಾಕಿಕೊಂಡು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ. ಸಂಸದ ಬಚ್ಚೇಗೌಡ ಬಿಜೆಪಿ ಸರ್ಕಾರದಲ್ಲಿ ಒಬ್ಬ ಸಂಸದರಾಗಿ ಮಗನ ರಾಜಕೀಯ ಅಸ್ತಿತ್ವಕ್ಕಾಗಿ ರಾಜಕಾರಣ ಮಾಡುವುದು ಸಮಂಜಸವಲ್ಲ. ಮೊದಲು ಅವರು ರಾಜಿನಾಮೆ ಕೊಟ್ಟು ನಂತರ ನೇರವಾಗಿ ಮಗನ ಬೆಂಬಲಕ್ಕೆ ನಿಲ್ಲುವುದು ಸೂಕ್ತ ಎಂದು ಸಂಸದ ಬಚ್ಚೇಗೌಡ ವಿರುದ್ಧ ಸಚಿವ ಎಂಟಿಬಿ ನಾಗರಾಜ್ ಕಿಡಿಕಾರಿದರು.
ಅಭಿವೃದ್ಧಿ ಶ್ವೇತ ಪತ್ರ ಹೊರಡಿಸಿ: ಬಿಜೆಪಿ ಸರ್ಕಾರದ ವಿವಿಧ ಇಲಾಖೆಗಳಿಂದ 48 ಕೋಟಿ ಅನುದಾನ ತಂದು ಪೂಜೆಗೆ ನಮ್ಮನ್ನೆ ಆಹ್ವಾನಿಸಲ್ಲ. ನಮ್ಮ ಅವಧಿಯಲ್ಲಿ ನಾನು ಮಾಡಿರುವ ಅಭಿವೃದ್ಧಿ ಬಗ್ಗೆ ಶ್ವೇತ ಪತ್ರ ಹೊರಡಿಸುತ್ತೇನೆ. ನೀವು ಕೂಡ ನಿಮ್ಮ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಶ್ವೇತ ಪತ್ರ ಹೊರಡಿಸಿ ಎಂದು ಶಾಸಕ ಶರತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ಅಧ್ಯಕ್ಷ ಡಿ.ಕೆ.ನಾಗರಾಜ್, ಸದಸ್ಯರಾದ ಅರುಣ್ ಕುಮಾರ್, ಕೆ.ದೇವರಾಜ್, ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್, ಯುವ ಮೋರ್ಚಾ ಅಧ್ಯಕ್ಷ ತವಟಹಳ್ಳಿ ರಾಮು, ಬಿಎಂಆರ್ಡಿಎ ಅಧ್ಯಕ್ಷ ಶಂಕರೇಗೌಡ, ಮಾಜಿ ಅಧ್ಯಕ್ಷ ಸಿ.ನಾಗರಾಜ್, ಟೌನ್ ಬ್ಯಾಂಕ್ ಅಧ್ಯಕ್ಷ ಬಾಲಚಂದ್ರ, ಯುವ ಮುಖಂಡರಾದ ಶೌರತ್ ಇತರರಿದ್ದರು.
ಶಿರಸಿಯಲ್ಲಿ ಅಬ್ಬರದ ಬೇಡರ ವೇಷದ ಸಂಭ್ರಮ: ರೌದ್ರರಮಣೀಯ ಬೇಡರ ವೇಷ ನೋಡಲು ಸಹಸ್ರಾರು ಜನ
ಮಂಜುನಾಥನ ಸನ್ನಿಧಿಗೆ ಬರಲು ಸಿದ್ಧ: ಶಾಸಕ ಶರತ್ಗೆ ಬರಬೇಕಾದ 10 ಕೋಟಿ ಅನುದಾನ ನಾನು ತಡೆ ಹಿಡಿಸಿದ್ದೇನೆ ಎಂದು ಆರೋಪ ಮಾಡಿರುವ ಶರತ್ ಬಚ್ಚೇಗೌಡ ನನ್ನನ್ನು ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಗೆ ಬಂದು ಪ್ರಮಾಣ ಮಾಡಲು ಆಹ್ವಾನಿಸಿದ್ದು, ನಾನು ಈ ಕ್ಷಣದಲ್ಲೆ ಬರಲು ಸಿದ್ಧ. ಅವರು ಸೂಲಿಬೆಲೆಯ ಶಾಂತನಪುರ ದಲಿತರ ಜಮೀನನ್ನು ಕಬಳಿಕೆ ಮಾಡಿಲ್ಲ ಎಂದು ಮಂಜುನಾಥನ ಸನ್ನಿಧಿಗೆ ಬಂದು ಪ್ರಮಾಣ ಮಾಡ್ತಾರಾ? ನಾನು ಒಂದೂವರೆ ವರ್ಷದಿಂದ ಈ ಕುರಿತು ಕೇಳುತ್ತಲೆ ಇದ್ದೇನೆ. ಅವರು ಬರುವುದಾದರೆ ನಾನು ಯಾವ ಕ್ಷಣದಲ್ಲಿ ಬೇಕಾದರೂ ಸಿದ್ಧ ಎಂದು ಶಾಸಕ ಶರತ್ ಬಚ್ಚೇಗೌಡಗೆ ಆಹ್ವಾನ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.