ಕೋಲಾರದಲ್ಲಿ ಸ್ಪರ್ಧೆ ಸಿದ್ದುಗೆ ಮಾರಕವಾಗಬಹುದು: ಸಚಿವ ಸುಧಾಕರ್‌

By Kannadaprabha NewsFirst Published Jan 11, 2023, 2:18 PM IST
Highlights

ಸಿದ್ದರಾಮಯ್ಯ ಸೋಲಿಗೆ ವ್ಯೂಹ ರಚಿಸುತ್ತೇವೆ, ಸಿದ್ದು ಸ್ಪರ್ಧೆ ಪಕ್ಕದ ಕ್ಷೇತ್ರಗಳ ಮೇಲೆ ಪ್ರಭಾವ ಬೀರಲ್ಲ: ಆರೋಗ್ಯ ಸಚಿವ ಡಾ.ಸುಧಾಕರ್‌

ಚಿಕ್ಕಬಳ್ಳಾಪುರ(ಜ.11): ಮಾಜಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ತೀರ್ಮಾನ ಅವರಿಗೆ ಮಾರಕವಾಗಬಹುದು, ಅವರಿಗೇ ಮಾರಕವಾಗುವ ಪರಿಸ್ಥಿತಿ ಇರುವಾಗ ಜಿಲ್ಲೆಗಳ ಇತರೆ ಕ್ಷೇತ್ರಗಳ ಮೇಲೆ ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ನಗರದ ಹೊರ ವಲಯದ ಚಿತ್ರಾವತಿ ಬಳಿ ಮಂಗಳವಾರ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್‌ ಅವರ ಹುಟ್ಟುಹಬ್ಬ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋಲಾರಕ್ಕೂ ಅವರಿಗೂ ಯಾವುದೇ ರೀತಿಯ ವಿಶೇಷ ಸಂಬಂಧ ಇಲ್ಲ. ಸ್ವಾಭಾವಿಕವಾಗಿ ಅವರು ಅಲ್ಪಸಂಖ್ಯಾತ ಮತಗಳು ಮತ್ತು ಇತರೆ ಹಲವು ಜಾತಿಗಳ ಮತಗಳ ಲೆಕ್ಕಾಚಾರದಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿರ್ಸಲು ತೀರ್ಮಾನಿಸಿದ್ದಾರೆ ಎಂದರು.

CHIKKABALLAPUR UTSAV: ಸುಧಾಕರ್ ವ್ಯಕ್ತಿಯಲ್ಲ, ಶಕ್ತಿ; ಭವಿಷ್ಯದ ನಾಯಕ : ವಸತಿ ಸಚಿವ ಸೋಮಣ್ಣ

ಸೋಲಿಗೆ ವ್ಯೂಹ ರಚಿಸುತ್ತೇವೆ:

ತಾವು ವೈಯಕ್ತಿಕವಾಗಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದು, ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ಕೋಲಾರದಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಅಗತ್ಯವಿರುವ ವ್ಯೂಹ ನಾವು ಮಾಡುತ್ತೇವೆ ಎಂದರು. ಕೋಲಾರ ಜಿಲ್ಲೆಯ ಕೆಲವು ನಾಯಕರ ಬುಡ ಅಲ್ಲಾಡುತ್ತಿದೆ, ಹಾಗಾಗಿ ಅವರು ಉಳಿಯಲು ಇವರನ್ನು ಬಲಿಪಶು ಮಾಡುತ್ತಿದ್ದಾರೆ ಎನಿಸುತ್ತದೆ. ಕೋಲಾರವನ್ನು ಏನೇ ಆಗಲೀ ನಾವು ಗೆಲ್ಲಬೇಕು ಎಂದು ಪಣ ತೊಟ್ಟಿದ್ದೇವೆ ಎಂದು ಸಚಿವರು ಹೇಳಿದರು.

ಕೃಷಿಕನಿಗೆ ಸಂದ ಗೌರವ:

ಕೃಷಿಕ ಕುಟುಂಬದಿಂದ ಬಂದ ಕೆ.ವಿ. ನಾಗರಾಜ್‌ ಅವರು ಕೃಷಿಕರ ಕಷ್ಟಅರ್ಥಮಾಡಿಕೊಂಡಿದ್ದ ಕಾರಣ ಹೈನುಗಾರಿಕೆಗೆ ವಿಶೇಷ ಒತ್ತು ನೀಡಿದ್ದಾರೆ. ಅಲ್ಲದೆ ಅವರಿಗೆ ದೊರೆತ ಮಾವು ಮತ್ತು ಖಾದಿ ಮಂಡಳಿಗಳು ರೈತ ಸಂಬಂಧಿ ಮಂಡಳಿಗಳೇ ಆಗಿದ್ದು, ಇವುಗಳಲ್ಲಿ ಅವರು ಕೃಷಿಕರಿಗಾಗಿ ಸಾಕಷ್ಟುಅಭಿವೃದ್ಧಿ ಮಾಡುವತ್ತ ಶ್ರಮಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

click me!