
ತುಮಕೂರು (ನ.17): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆದುಕೊಂಡು ಬಂದು ಅಲ್ಲಿನ ಕಾಂಗ್ರೆಸ್ ಮುಖಂಡರು ಬಲಿ ಕೊಡಲು ಮುಂದಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಲೇವಡಿ ಮಾಡಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರದಲ್ಲಿ ಸಾಕಷ್ಟು ಕಾಂಗ್ರೆಸ್ ನಾಯಕರು ಇದ್ದರೂ ಸಹ ಬುಡ ಅಲಗಾಡುತ್ತಿರವ ಹಿನ್ನೆಲೆಯಲ್ಲಿ ಅದನ್ನು ಸರಿ ಮಾಡಲು ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಬಂದ್ದಿದಾರೆ.
ನಗರದಲ್ಲಿ ನಡೆದ ಬಾಣಂತಿ ಮತ್ತು ನವಜಾತ ಶಿಶುಗಳ ಸಾವು ಪ್ರಕರಣದಲ್ಲಿ ಏಕಪಕ್ಷೀಯ ಕ್ರಮವಾಗಿದೆ ಎಂಬ ಆರೋಪಿ ವೈದ್ಯೆಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಏಕಮುಖ ತನಿಖೆ ನಡೆಯುತ್ತಿದೆ ಎಂಬ ಆರೋಪ ಸರಿಯಲ್ಲ. ನಾನು ಸಿಸಿ ಕ್ಯಾಮೆರಾ ನೋಡಿದ್ದೇನೆ. ಏಕಮುಖವಾಗಿ ನಿರ್ಧಾರ ತೆಗೆದುಕೊಂಡಿಲ್ಲ. ಅವರು ಆಪರೇಷನ್ ಥಿಯೇಟರ್ನಿಂದ ಬಂದಿದ್ದಾರೆ. ಆ ವಿಡಿಯೋ ಫ್ರೇಮ್ನಲ್ಲಿ ರೋಗಿ ಹಾಗೂ ವೈದ್ಯೆ ಇಬ್ಬರೂ ಇದ್ದಾರೆ ಎಂದರು.
ರಾಜಧಾನಿಯಲ್ಲಿ ರಕ್ಷಣಾ ಇಲಾಖೆ ಪ್ರಾದೇಶಿಕ ತಂತ್ರಜ್ಞಾನ ಕೇಂದ್ರ ಶುರು
ತಾಯಿ ಮತ್ತು ಅವಳಿ ಮಕ್ಕಳ ಸಾವಿನ ಪ್ರಕರಣದ ನತದೃಷ್ಟ ಬಾಲಕಿಯ ಶಿಕ್ಷಣ, ಭದ್ರತೆ ಹಾಗೂ ಭವಿಷ್ಯಕ್ಕಾಗಿ 10 ಲಕ್ಷ ರು.ಗಳ ಚೆಕ್ಕನ್ನು ಆರೋಗ್ಯ ಇಲಾಖೆ ಪರವಾಗಿ ವಿತರಿಸಿದ್ದು, ಹಣವನ್ನು ನಿಶ್ಚಿತ ಠೇವಣಿ ಇಡಲಾಗುವುದು. ತಾಯಿ ಮತ್ತು ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರುಗಳ ಕರ್ತವ್ಯ ಲೋಪ ಕುರಿತು ಆರೋಗ್ಯ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಸಚಿವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
108 ಸಿಬ್ಬಂದಿಗಳ ಮನವೊಲಿಕೆ: ಇದೇ ವೇಳೆ, 108 ಸಿಬ್ಬಂದಿಗಳ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಭೆ ನಡೆಸಿ ಡಿಸೆಂಬರ್ವರೆಗೂ ಕೆಲಸ ನಡೆಸುವಂತೆ ಅವರ ಮನವೊಲಿಸುತ್ತೇನೆ. ಡಿಸೆಂಬರ್ ನಂತರ ಹೊಸ ಸಂಸ್ಥೆ ಬರುತ್ತದೆ. ಆಗ ಶಾಶ್ವತವಾಗಿ ಯಾವುದೇ ಸಮಸ್ಯೆ ಬರುವುದಿಲ್ಲ. ಜೊತೆಗೆ, ಈಗಿರುವ ಸಿಬ್ಬಂದಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಅವರಿಗೆ ವೇತನ ಬಾಕಿ ಕೊಡಿಸುವ ಜವಾಬ್ದಾರಿ ನಮ್ಮ ಸರ್ಕಾರದ್ದು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುತ್ತೇವೆ. ಇನ್ನು ಮುಂದೆ ಜಿವಿಕೆ ಸಂಸ್ಥೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದರು.
ಕೋಲಾರದಲ್ಲಿ ಸಿದ್ದರಾಮಯ್ಯಗೆ ಗೆಲುವು ಸುಲಭವಿಲ್ಲ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದರೆ ಅವರ ಗೆಲುವು ಸುಲಭವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಗಳು, ಅವರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಆದರೆ ನನಗಿರುವ ರಾಜಕೀಯ ಅನುಭವದಲ್ಲಿ ಹೇಳುವುದಾದರೆ ಅವರಿಗೆ ಕೋಲಾರ ವಿಧಾನಸಭಾ ಕ್ಷೇತ್ರ ಸುಲಭ ತುತ್ತಲ್ಲ. ಅಲ್ಲಿ ಅವರ ಗೆಲುವು ಕಠಿಣವಾಗಿರಲಿದೆ ಎಂದರು. ಸಿದ್ದರಾಮಯ್ಯ ಸ್ಪರ್ಧೆಯಿಂದ ಬಿಜೆಪಿಗೆ ರಾಜಕೀಯವಾಗಿ ಏನಾದರೂ ನಷ್ಟ ಆಗಬಹುದಾ ಎಂಬ ಪ್ರಶ್ನೆಗೆ, ಅವರಾಗಿಯೇ ಕಣಕ್ಕಿಳಿಯುತ್ತಿರುವುದರಿಂದ ಕೋಲಾರದಲ್ಲಿ ಏನಾಗುತ್ತದೆ ಎಂಬುದನ್ನು ನೀವೇ ಕಾದು ನೋಡಿ ಎಂದರು.
ಮುಂದಿನ ದಿನಗಳಲ್ಲಿ ಇನ್ನೂ 500 ಜನೌಷಧಿ ಮಳಿಗೆ ಸ್ಥಾಪನೆ: ಸಚಿವ ಸುಧಾಕರ್
ಹೈಕಮಾಂಡ್ ಘೋಷಣೆ ಮಾಡಲಿ: ನಾನು ಮುಖ್ಯಮಂತ್ರಿಯಾಗಬೇಕಿದ್ದರೆ ಕಾಂಗ್ರೆಸ್ಗೆ ಮತ ಹಾಕಬೇಕೆಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸುಧಾಕರ್, ಸಿದ್ದರಾಮಯ್ಯ ಕಾಂಗ್ರೆಸ್ನ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಆ ಪಕ್ಷದ ಹೈಕಮಾಂಡ್ ಅಥವಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು. ಯಾರೂ ತನ್ನನ್ನು ತಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಲು ಆಗುವುದಿಲ್ಲ. ಇಂದು ನಮ್ಮ ಪಕ್ಷದಲ್ಲೂ ಹೈಕಮಾಂಡ್ ಘೋಷಿಸಿದವರಷ್ಟೇ ಮುಖ್ಯಮಂತ್ರಿ ಅಭ್ಯರ್ಥಿ ಆಗುತ್ತಾರೆ. ಪಕ್ಷದ ಹೈಕಮಾಂಡ್ ಘೋಷಣೆ ಮಾಡುವವರೆಗೂ ಸ್ವಯಂ ಘೋಷಣೆ ಮಾಡಿಕೊಂಡರೆ ಅದಕ್ಕೆ ಮಾನ್ಯತೆ ಇಲ್ಲ ಎಂದು ಟಾಂಗ್ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.