
ಬೆಂಗಳೂರು(ಮಾ.07): ‘ನನ್ನ ಜನರು ಅಧಿಕಾರ ಹಾಗೂ ನೀತಿ ನಿರೂಪಣೆ ಕುರ್ಚಿಯಲ್ಲಿ ಇರಬೇಕು ಎಂದು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಆದರೆ ಈಗ ನಮ್ಮಿಂದ ಮತ ಪಡೆದವರೇ ನಮ್ಮನ್ನು ಆಳುತ್ತಿದ್ದಾರೆ. ಹೀಗಾಗಿ ಎಲ್ಲರೂ ಒಟ್ಟಾಗಬೇಕು ಎಂದಿದ್ದೇನೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಅಲ್ಲದೆ, ‘ಕಾಂಗ್ರೆಸ್ ಪಕ್ಷವು ಬೇಕಾದಷ್ಟು ದಲಿತರನ್ನು ದೇಶದಲ್ಲಿ ಮುಖ್ಯಮಂತ್ರಿಗಳನ್ನಾಗಿ ಮಾಡಿದೆ. ಬೇರೆ ಪಕ್ಷಗಳೂ ಸಹ ಈ ನಿಟ್ಟಿನಲ್ಲಿ ನಡೆದುಕೊಳ್ಳಬೇಕು ಎಂದು ಹೇಳಿದ್ದೇನೆ’ ಎಂದಿದ್ದಾರೆ. ತನ್ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಉದ್ದೇಶಿಸಿ ದಲಿತ ಮುಖ್ಯಮಂತ್ರಿ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಧರ್ಮ-ಜಾತಿ ಹೆಸರಿನಲ್ಲಿ ವಿಷಬೀಜ ಬಿತ್ತುವವರ ಬಗ್ಗೆ ಎಚ್ಚರ ಇರಲಿ: ಸಿಎಂ ಸಿದ್ದರಾಮಯ್ಯ
ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೀವು ಮತ ಹಾಕುತ್ತೀರ ಬಳಿಕ ಸುಮ್ಮನಾಗುತ್ತೀರಿ. ನಾವು ಮತ ಹಾಕಿ ಬೇರೆಯವರ ಮುಂದೆ ಕೈ ಜೋಡಿಸುವಂತಾಗಿದೆ. ಬಹುಜನ ಸಮಾಜ ಒಂದಾಗಿದೆ. ನಿಮಗೆ ಕಣ್ಣು ಕಾಣಲ್ಲವೇ? ಬಹುಜನರು ಒಂದಾಗಿದ್ದಕ್ಕೆ ಕಾಂಗ್ರೆಸ್ ಗೆಲ್ಲುತ್ತಿದೆ. ಆದರೆ ನಾನು ಪಕ್ಷದ ಬಗ್ಗೆ ಹೇಳಿಕೆ ನೀಡುತ್ತಿಲ್ಲ. ಬೇರೆಯವರೂ ನಮ್ಮಂತೆ ದಲಿತರಿಗೆ ಅವಕಾಶ ನೀಡಲಿ ಎಂಬುದು ನನ್ನ ಅಭಿಪ್ರಾಯ. ಇದನ್ನು ವಿವಾದ ಮಾಡಬೇಡಿ ಎಂದು ಎಚ್.ಸಿ. ಮಹದೇವಪ್ಪ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ದಲಿತರಲ್ಲಿ ಬಹಳಷ್ಟು ಜನರು ಪ್ರತಿಭಾವಂತರಿದ್ದಾರೆ. ದಲಿತ ಅನ್ನುವ ಕಾರಣಕ್ಕೆ ಅವಕಾಶ ಸಿಕ್ಕಿಲ್ಲ. ದಲಿತ ನಾಯಕತ್ವದ ಹಿಂದೆ ನಿಲ್ಲಬೇಕು ಎಂದು ಹೇಳಿದ್ದೇನೆ. ಇದು ಅಂಬೇಡ್ಕರ್ ಮಾತು. ನೀವೆಲ್ಲ ಸೇರಿ ನಮಗೆ ಮುಖ್ಯಮಂತ್ರಿ ಅವಕಾಶ ಕೊಡಿಸಿ ಎಂದು ಹೇಳಿದರು.
ಕಾಂಗ್ರೆಸ್ ಯಾವ ಸಮುದಾಯವನ್ನೂ ನಿರ್ಲಕ್ಷಿಸಿಲ್ಲ: ಖಂಡ್ರೆ
ದಲಿತ ಮುಖ್ಯಮಂತ್ರಿ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವ ಈಶ್ವರ್ ಖಂಡ್ರೆ, ಕಾಂಗ್ರೆಸ್ ಪಕ್ಷ ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡುತ್ತದೆ. ಮಲ್ಲಿಕಾರ್ಜುನ ಖರ್ಗೆ ನಮ್ಮ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಕಲ್ಯಾಣ ಕರ್ನಾಟಕ ಸೇರಿದಂತೆ ಇಡೀ ಕರ್ನಾಟಕದ ಕಾಂಗ್ರೆಸ್ಗೆ ಅವರೇ ಸರ್ವೋಚ್ಛ ನಾಯಕರು. ಹೀಗಾಗಿ ಕಾಂಗ್ರೆಸ್ ಯಾವ ಸಮುದಾಯವನ್ನೂ ನಿರ್ಲಕ್ಷ್ಯ ಮಾಡಿಲ್ಲ. ಎಲ್ಲ ಸಮುದಾಯಗಳಿಗೂ ಅವಕಾಶ ನೀಡಿದೆ ಎಂದಷ್ಟೇ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.