
ಚಾಮರಾಜನಗರ (ಡಿ.24): ದಂಗೆ ಆಗಲಿ, ಗಲಭೆ ಆಗಲಿ ಎಂದು ಬಿಜೆಪಿ ಬಯಸುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಂಗೆ ಆಗಲಿ ಎನ್ನುವವರೇ ಬಿಜೆಪಿಯವರು, ಕೋಮು ಗಲಭೆ ಬಯಸುವವರು, ಇಬ್ಬರು-ಮೂರು ಜನ ಸತ್ತರೆ ರಾಜಕೀಯ ಲಾಭ ಸಿಗಲಿದೆ ಎಂದು ಯೋಚಿಸುವವರೇ ಬಿಜೆಪಿಯವರು, ಇದೇ ಬಿಜೆಪಿಯವರ ಯೋಜನೆ ಎಂದು ಹಿಜಾಬ್ ವಿಚಾರದಲ್ಲಿ ದಂಗೆ ಆಗಲಿದೆ ಎಂಬ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದರು.
ಹಿಜಾಬ್ ನಿಷೇಧದ ಆದೇಶ ಹಿಂಪಡೆಯುವ ಬಗ್ಗೆ ಮಾತನಾಡಿ, ಇದು ಜಾತ್ಯತೀತ ರಾಷ್ಟ್ರ. ಎಲ್ಲರನ್ನೂ ಗೌರವಿಸಿ ಅವಕಾಶ ನೀಡಬೇಕು. ವಾತಾವರಣವನ್ನು ಹಾಳು ಮಾಡುವುದಕ್ಕೆ ಚಕ್ರವರ್ತಿ ಸೂಲಿಬೆಲೆ ಅಂತಹ ವ್ಯಕ್ತಿಗಳಿದ್ದಾರೆ, ಇಷ್ಟು ವರ್ಷ ಇಲ್ಲದೆ ಇರುವ ವಿಚಾರಗಳು ಈಗ ಏಕೆ ತಲೆ ಎತ್ತುತ್ತಿವೆ, ಈ ವಿಚಾರವನ್ನು ಬೆಳೆಸಲು ಹೋದರೆ ಅವರಿಗೂ ಒಳ್ಳೆದಾಗುವುದಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಆರೆಸ್ಸೆಸ್ಸಿಗರು ಈ ಹಿಂದೆ ಚಡ್ಡಿ ಹಾಕುತ್ತಿದ್ದರು, ಈಗ ಪ್ಯಾಂಟ್ ಹಾಕುತ್ತಿದ್ದಾರೆ: ಸಚಿವ ತಂಗಡಗಿ
ಚಾಮರಾಜನಗರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 8 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ, ಕನಿಷ್ಠ ಮೂರು ಹೆಸರುಗಳನ್ನು ಕಳುಹಿಸಿಕೊಡುವಂತೆ ಹೈಕಮಾಂಡ್ ತಿಳಿಸಿದ್ದು ಎಲ್ಲವನ್ನೂ ಪರಾಮರ್ಶಿಸಿ ಪಟ್ಟಿಯನ್ನು ಕಳುಹಿಸಲಾಗುವುದು ಎಂದರು. ಕೊರೋನಾ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಯಾವುದನ್ನು ನಿರ್ಬಂಧ ಮಾಡಿಲ್ಲ, ಗಡಿಯಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೇವೆ, ಜನರು ಆತಂಕ ಪಡಬಾರದು, ಮುನ್ನೆಚ್ಚರಿಕೆಯಿಂದ ಇರಬೇಕು ಎಂದರು.
ಸಿಎಂ ನಿರ್ಧಾರ ಒಪ್ಪಿಕೊಂಡ ಸಚಿವ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹಿಜಾಬ್ ನಿಷೇಧ ವಾಪಾಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಯಾವ ವ್ಯವಸ್ಥೆಯಲ್ಲಿ ಇಷ್ಟು ದಿನ ನಮ್ಮ ದೇಶ, ರಾಜ್ಯ ನಡೆದುಕೊಂಡು ಬಂದಿದೆ, ಅದನ್ನು ಮುಂದುವರೆಸಿಕೊಂಡು ಹೋಗಬೇಕು, ಬಿಜೆಪಿ ಕೋಮು ದ್ವೇಷ ಹೆಚ್ಚಾಗಲಿ ಎಂದು ಇದನ್ನೆಲ್ಲಾ ಮಾಡಿಸಿದ್ದಾರೆ, ಇದೀಗ ಸಿದ್ದರಾಮಯ್ಯ ಸರಿಯಾದ ನಿರ್ಧಾರ ಮಾಡಿದ್ದಾರೆ’ ಎಂದು ಹೇಳಿದರು.
ಟಿಪ್ಪು ಬಳಿಕ 2ನೇ ಅವತಾರವೇ ಸಿದ್ದರಾಮಯ್ಯ: ಶಾಸಕ ಬಸನಗೌಡ ಯತ್ನಾಳ
‘ನಮ್ಮ ಸಮಾಜ ಎಲ್ಲರ ಒಟ್ಟಿಗೆ ಸಾಗಬೇಕು, ಗೌರವ ಇರಬೇಕು, ಎಲ್ಲರ ಪದ್ಧತಿಗೆ ಮರ್ಯಾದೆ ಕೊಡಬೇಕು, ಸ್ವಾತಂತ್ರ್ಯ ಬಂದು 75 ವರ್ಷ ಆಯ್ತು, ಇಷ್ಟು ವರ್ಷ ಈ ವಿಷಯ ಇತ್ತಾ? ಸಮಾಜದಲ್ಲಿ ಸಂವೇದನಾಶೀಲತೆ, ಸೌಹಾರ್ದತೆ ಇರಬೇಕು. ಇತಿಹಾಸವನ್ನು ಕೆದಕಲು ಹೋಗುವುದು ಒಳ್ಳೆಯದಲ್ಲ, ಬಿಜೆಪಿಯವರದು ಸರ್ವಾಧಿಕಾರಿ ಧೋರಣೆ, ಸಂವಿಧಾನ ಹೇಳುವುದು ಎಲ್ಲಾ ಧರ್ಮ, ಜಾತಿ, ಭಾಷೆ ಒಂದೇ ಎಂದು, ನಾವೇ ಬೇರೆ ದಾರಿ ಹಿಡಿದರೆ ದೇಶಕ್ಕೆ ಒಳ್ಳೆಯದಾಗುವುದಿಲ್ಲ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.