ಕಾಂಗ್ರೆಸ್‌ ಹುಟ್ಟಿಕೊಂಡಿರುವುದೇ ದೇಶದ ಸಂಪತ್ತು ಕೊಳ್ಳೆ ಹೊಡೆಯೋದಕ್ಕೆ: ವೇದವ್ಯಾಸ ಕಾಮತ್‌

By Kannadaprabha NewsFirst Published Jun 22, 2022, 12:37 PM IST
Highlights

*  ದೇಶದಲ್ಲಿ ಕಾಂಗ್ರೆಸ್‌ ಎ ಟು ಝಡ್‌ ಹಗರಣ
*  ರಾಜಕೀಯ ಲಾಭಕ್ಕಾಗಿ ಯುವ ಜನತೆಯ ಬದುಕನ್ನು ಬಲಿಗೊಡಲು ಕಾಂಗ್ರೆಸ್‌ ಹೇಸುವುದಿಲ್ಲ
*  ಕಾಂಗ್ರೆಸ್‌ ನಾಯಕರು ಸಂವಿಧಾನ ವಿರೋ​ಧಿ ಧೋರಣೆ ತಳೆಯುತ್ತಿದ್ದಾರೆ
 

ಮಂಗಳೂರು(ಜೂ.22): ಕಾಂಗ್ರೆಸ್‌ ಪಕ್ಷ ಹುಟ್ಟಿಕೊಂಡಿರುವುದೇ ಈ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುವುದಕ್ಕಾಗಿ. ದೇಶದಲ್ಲಿ ಕಾಂಗ್ರೆಸ್‌ ಎ ಟು ಝಡ್‌ ಹಗರಣಗಳನ್ನು ಮಾಡಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಹೇಳಿದ್ದಾರೆ.

ನ್ಯಾಷನಲ್‌ ಹೆರಾಲ್ಡ್‌ ಹಗರಣಗಳಲ್ಲಿ ಭಾಗಿಯಾಗದಿದ್ದರೆ ಕಾಂಗ್ರೆಸ್‌ ಪಕ್ಷ ಹಾಗೂ ರಾಹುಲ್‌ ಗಾಂಧಿ​ ಬೀದಿಗಿಳಿದು ಗಲಭೆ ಎಬ್ಬಿಸದೆ ತನಿಖೆಗೆ ಸಹಕಾರ ನೀಡಿ ದೋಷಮುಕ್ತರಾಗಬೇಕಿತ್ತು. ಆದರೆ ಅವರು ದೊಂಬಿ ಎಬ್ಬಿಸಿ ಸಾರ್ವಜನಿಕ ಸೊತ್ತುಗಳಿಗೆ ಬೆಂಕಿ ಹಚ್ಚುವ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ರಾಹುಲ್‌ ಮೇಲಿನ ಭಯದಿಂದ ಟಾರ್ಗೆಟ್‌ ಪಾಲಿಟಿಕ್ಸ್‌: ಖಾದರ್‌

ನ್ಯಾಷನಲ್‌ ಹೆರಾಲ್ಡ್‌ ಅಕ್ರಮ ಹಣ ವರ್ಗಾವಣೆ ಸಂಬಂಧಿ​ಸಿದಂತೆ ಜಾರಿ ನಿರ್ದೇಶನಾಲಯ ರಾಹುಲ್‌ ಗಾಂ​ಧಿಯವರನ್ನು ತನಿಖೆಗೆ ಒಳಪಡಿಸಿದ ಘಟನೆಯನ್ನು ವಿರೋಧಿ​ಸಿ ಕಾಂಗ್ರೆಸ್‌ ಕಾರ್ಯಕರ್ತರು ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಹೋರಾಡಬೇಕಿತ್ತು. ಅದರ ಬದಲು ಬೀದಿಗಿಳಿದು ಕಲ್ಲು ಹೊಡೆದು, ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಪಡಿಸಿದ್ದಾರೆ. ಕಾಂಗ್ರೆಸ್‌ ನಾಯಕರು ಸಂವಿಧಾನ ವಿರೋ​ಧಿ ಧೋರಣೆ ತಳೆಯುತ್ತಿದ್ದಾರೆ. ದೇಶದ ಆಸ್ತಿಯನ್ನು ಲೂಟಿ ಹೊಡೆಯುವ ಯಾರೇ ಆದರೂ ಕಾನೂನಾತ್ಮಕವಾಗಿ ಬಂಧಿ​ಸಲು ಸಂವಿಧಾನದಲ್ಲಿ ಅವಕಾಶವಿದೆ. ರಾಹುಲ್‌ ಗಾಂ​ಧಿ, ಸೋನಿಯಾ ಗಾಂ​ಧಿ ಇದರಿಂದ ಪ್ರಶ್ನಾತೀತರಲ್ಲ. ಹಗರಣವನ್ನೇ ಆಡಳಿತ ಮಂತ್ರವಾಗಿಸಿಕೊಂಡಿದ್ದ ಕಾಂಗ್ರೆಸ್‌ ಪರಿವಾರಕ್ಕೆ ಈಗ ಬಂಧನದ ಭೀತಿ ಎದುರಾಗಿದೆ. ಹಗರಣದಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಕಠಿಣ ಶಿಕ್ಷೆ ಅನುಭವಿಸಲೇ ಬೇಕು ಎಂದು ಶಾಸಕ ಕಾಮತ್‌ ಹೇಳಿದ್ದಾರೆ.

ತಮ್ಮ ರಾಜಕೀಯ ಲಾಭಕ್ಕಾಗಿ ಯುವ ಜನತೆಯ ಬದುಕನ್ನು ಬಲಿಗೊಡಲು ಕಾಂಗ್ರೆಸ್‌ ಹೇಸುವುದಿಲ್ಲ. ಗೂಂಡಾ ಪ್ರವೃತ್ತಿ ಪ್ರದರ್ಶಿಸಿ ದೇಶದ ಜನರ ಬದುಕನ್ನು ಬೀದಿಗೆಳೆದರೆ ಕಾಂಗ್ರೆಸ್‌ ನಾಮಾವಶೇಷವಾಗುವುದರಲ್ಲಿ ಎರಡು ಮಾತಿಲ್ಲ ಎಂದು ಶಾಸಕ ವೇದವ್ಯಾಸ್‌ ಕಾಮತ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 

click me!