
ಮುಂಬೈ(ಜು.04) ಮಹಾರಾಷ್ಟ್ರದಲ್ಲಿ ರಾಜಕೀಯ ತಲ್ಲಣ ಸೃಷ್ಟಿಯಾಗಿದೆ. ಎನ್ಸಿಪಿಯ ಅಜಿತ್ ಪವಾರ್ ಸೇರಿ 8 ಶಾಸಕರು ಏಕಾಏಕಿ ಶಿಂಧೆ-ಫಡ್ನವಿಸ್ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ ಕೋಲಾಹಲವನ್ನೇ ಸೃಷ್ಟಿಸಿದ್ದಾರೆ. ಎನ್ಸಿಪಿ ಮುಖ್ಯಸ್ಥ ಶರದವ್ ಸಂಬಂಧಿ, ಎನ್ಸಿಪಿ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದ ಅಜಿತ್ ಪವಾರ್ ಇದೀಗ ಎನ್ಡಿಎ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಎರಡೇ ದಿನಕ್ಕೆ ಮತ್ತೆ ರಾಜಕೀಯದಲ್ಲಿ ಸುಂಟರಗಾಳಿ ಬೀಸಿದೆ. ಇದೀಗ ಅಜಿತ್ ಪವಾರ್ ಜೊತೆ ಬಿಜೆಪಿ ಶಿವಸೇನೆ ಸರ್ಕಾರಕ್ಕೆ ಬೆಂಬಲ ಸೂಚಿಸಿದ ಎನ್ಸಿಪಿ ನಾಯಕರ ಪೈಕಿ ಇಬ್ಬರು ಯೂ ಟರ್ನ್ ಹೊಡೆದಿದ್ದಾರೆ. ಅಜಿತ್ ಪವಾರ್ ಪ್ರಮಾಣವಚನ ಸಮಾರಂಭದಲ್ಲಿ ರಾಜಭವನದಲ್ಲಿ ಕಾಣಿಸಿಕೊಂಡ ಇಬ್ಬರು ಎನ್ಸಿಪಿ ನಾಯಕರು ಇದೀಗ ಮರಳಿ ಶರದ್ ಪವಾರ್ ಬಣ ಸೇರಿಕೊಂಡಿದ್ದಾರೆ.
ಸತಾರ ಶಾಸಕ ಮಕರಂದ್ ಪಾಟೀಲ್ ಹಾಗೂ ಉತ್ತರ ಕರಡ್ ಶಾಸಕ ಬಾಳಾಸಾಹೇಬ್ ಪಾಟೀಲ್ ಇದೀಗ ಮರಳಿ ಗೂಡು ಸೇರಿದ್ದಾರೆ. ಎನ್ಸಿಪಿಯ ಎರಡು ಬಣಗಳು ಅನರ್ಹತೆ ಅಸ್ತ್ರ ಪ್ರಯೋಗಿಸಿದ ಬೆನ್ನಲ್ಲೇ ಇಬ್ಬರು ಶಾಸಕರು ಮರಳಿ ಶರದ್ ಪವಾರ್ ಬಣ ಸೇರಿದ್ದಾರೆ. ಶಿರೂರ್ ಸಂಸದ ಅಮೋಲ್ ಕೊಲ್ಹೆ ಇದೀಗ ಶರದ್ ಪವಾರ್ ಬಣ ಸೇರಿಕೊಳ್ಳುವುದಾಗಿ ಹೇಳಿದ್ದಾರೆ. ಈ ಮೂಲಕ ಮೂರನೇ ನಾಯಕ ಅಜಿತ್ ಪವಾರ್ ಬಣದಿಂದ ವಾಪಸ್ ಬರಲು ಮನಸ್ಸು ಮಾಡಿದ್ದಾರೆ. ಇಬ್ಬರು ಶಾಸಕರಿಗೆ ಖುದ್ದು ಶರದ್ ಪವಾರ್ ಬೊಕ್ಕೆ ನೀಡಿ ಸ್ವಾಗತ ನೀಡಿದ್ದಾರೆ.
ಶರದ್ ಪವಾರ್ ಎನ್ಸಿಪಿ ಬಣ ಅಜಿತ್ ಪವಾರ್ ಹಾಗೂ ಇತರ 8 ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಿದ್ದಾರೆ. ಇದರಿಂದ ಬೆದರಿದ ಇಬ್ಬರು ನಾಯಕರು ಈಗಾಗಲೇ ಮರಳಿ ಶರದ್ ಪವಾರ್ ಬಣ ಸೇರಿದ್ದಾರೆ. ಮೂರನೇ ಶಾಸಕ ಕೂಡ ಶರದ್ ಪವಾರ್ ಬಣ ಸೇರಲು ಸಜ್ಜಾಗಿದ್ದಾರೆ.
9 ಶಾಸಕರೊಂದಿಗೆ ಮಹಾರಾಷ್ಟ್ರದ ಎನ್ಡಿಎ ಸರ್ಕಾರ ಸೇರಿರುವ ಎನ್ಸಿಪಿ ನಾಯಕ ಅಜಿತ್ ಪವಾರ್ ಬಣ, ಪಕ್ಷದ 53 ಶಾಸಕರ ಪೈಕಿ ತಮಗೆ 40 ಶಾಸಕರ ಬೆಂಬಲ ಇದೆ ಎಂದು ಹೇಳಿಕೊಂಡಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆ ತಪ್ಪಿಸಿಕೊಳ್ಳದೇ ಒಟ್ಟು ಸದಸ್ಯರ ಬಲದಲ್ಲಿ ಮೂರನೇ ಎರಡು ಭಾಗದಷ್ಟುಜನರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವುದು ಅನಿವಾರ್ಯ. ಆ ಲೆಕ್ಕಾಚಾರದಲ್ಲಿ ಅಜಿತ್ ಪವಾರ್ ಬಣದ 40 ಶಾಸಕರು ಅನರ್ಹತೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಅಜಿತ್ ಬಣದಲ್ಲಿ ಭಾನುವಾರ ಬಹಿರಂಗವಾಗಿ ಕಾಣಿಸಿಕೊಂಡ ಶಾಸಕರ ಸಂಖ್ಯೆ 13. ಆದರೆ ಅಜಿತ್ ಬಣದ ಮುಖಂಡರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವನ್ಕುಳೆ ಅವರು ಎನ್ಸಿಪಿಯ 40 ಶಾಸಕರ ಬೆಂಬಲ ಸರ್ಕಾರಕ್ಕಿದೆ ಎಂದಿದ್ದಾರೆ.
ಸುನೀಲ್ ತಟ್ಕರೆ ಎನ್ಸಿಪಿ ನೂತನ ರಾಜ್ಯಾಧ್ಯಕ್ಷ, ಶರದ್ ಪವಾರ್ರಿಂದ ಪ್ರಫುಲ್ ಪಟೇಲ್, ಸುನೀಲ್ ತಟ್ಕರೆ ಉಚ್ಛಾಟನೆ
ಆದರೆ ಇದರ ಹೊರತಾಗಿಯೂ 40 ಶಾಸಕರ ವಿರುದ್ಧ ಶರದ್ ಪವಾರ್ ಬಣ ಅನರ್ಹತೆ ನೋಟಿಸ್ ಜಾರಿ ಮಾಡುವ ಅವಕಾಶ ಹೊಂದಿದೆ. ಕಾರಣ, ಇತ್ತೀಚಿನ ಸುಪ್ರೀಂಕೋರ್ಚ್ ತೀರ್ಪಿನ ಅನ್ವಯ, ಪಕ್ಷಾಂತರ ತಡೆ ಕಾಯ್ದೆ ಅನ್ವಯ ಆಗದೇ ಇರಲು ಮೂಲ ಪಕ್ಷವೇ ಮತ್ತೊಂದು ಪಕ್ಷದಲ್ಲಿ ವಿಲೀನ ಆಗುವುದು ಕಡ್ಡಾಯ. ಇಲ್ಲವೇ ಅಜಿತ್ ಪವಾರ್ ಅವರದ್ದು ತಮ್ಮದೇ ನಿಜವಾದ ಎನ್ಸಿಪಿ ಎಂಬ ಮಾನ್ಯತೆಯನ್ನು ಚುನಾವಣಾ ಆಯೋಗದಿಂದ ಪಡೆಯಬೇಕು. ಈಗ ಇದೇ ಅವಕಾಶ ಬಳಸಿಕೊಂಡು ಎನ್ಸಿಪಿ ಶೀಘ್ರದಲ್ಲೇ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಅಜಿತ್ ಸೇರಿ 9 ಶಾಸಕರ ಅನರ್ಹತೆಗೆ ಸ್ಪೀಕರ್ಗೆ ಕೋರಲಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.