
ಮಾಗಡಿ (ಜ.19): ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅವರಿಗೆ ಎಲ್ಲಿ ಉತ್ತರ ಕೊಡಬೇಕು ಅಲ್ಲಿ ಕೊಡುತ್ತೀವಿ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದರು. ತಾಲೂಕಿನ ಬೆಳಗುಂಬ ಗ್ರಾಪಂ ವ್ಯಾಪ್ತಿಯಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರ ನಾಲಿಗೆ ಅವರ ಕುಲ ಹೇಳುತ್ತದೆ. ಆ ರೀತಿ ಕೆಟ್ಟದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದಾರೆ. ಅದಕ್ಕೆ ತಕ್ಕ ಉತ್ತರ ನೀಡುವ ಶಕ್ತಿ ನಮಗಿದೆ. ನಾವು ಕೂಡ ತೀಕ್ಷ್ಣವಾಗಿ ಉತ್ತರ ನೀಡಬಹುದು. ಆದರೆ ನಮ್ಮ ಸಂಸ್ಕೃತಿ ಅವರ ಸಂಸ್ಕೃತಿ ಬೇರೆ, ಬೇರೆ ಇದೆ ಅದಕ್ಕೆ ತಕ್ಕ ಉತ್ತರ ಮುಂದಿನ ದಿನಗಳಲ್ಲಿ ನೀಡಲಾಗುವುದು.
ಈ ರಾಜ್ಯ ಕಂಡಂತಹ ಅಪರೂಪದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಲ್ಲಿಯವರೆಗೂ ಆದಂತಹ ಮುಖ್ಯಮಂತ್ರಿಗಳಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುವರು ಅವರು. ಬಡವರ ಬಗ್ಗೆ ಕಾಳಜಿ ಇದ್ದು, ಜಾತಿ ವ್ಯವಸ್ಥೆ ಧಿಕ್ಕರಿಸಿ, ಮತಕ್ಕಾಗಿ ಇಟ್ಟುಕೊಂಡಿರುವ ಆಚಾರ ವಿಚಾರಗಳನ್ನು ಧಿಕ್ಕರಿಸಿ ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಉಪಮುಖ್ಯಮಂತ್ರಿಗಳು ಸಾಥ್ ನೀಡುತ್ತಿದ್ದಾರೆ ಎಂದು ಹೇಳಿದರು. ಬೆಂಗಳೂರು ಶಿಕ್ಷಣ ಕ್ಷೇತ್ರ ಉಪಚುನಾವಣೆಗೆ ಪುಟ್ಟಣ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಅವರು ಶಿಕ್ಷಕರ ಬಗ್ಗೆ ಪ್ರೀತಿ, ಒಲವು ಹೊಂದಿದ್ದಾರೆ. 20 ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡ ತಂದು ಶಿಕ್ಷಕರಿಗೆ ಅನುಕೂಲ ಮಾಡಿಕೊಂಡು ಬಂದಿದ್ದು ಗೆಲುವಿಗೆ ಇದೇ ಅವರ ಮಾನದಂಡವಾಗಿದೆ.
ಹಿಂದೂ ಅವಹೇಳನ ಕಾಂಗ್ರೆಸ್ ಅವನತಿಗೆ ಅಡಿಗಲ್ಲು: ಆರ್.ಅಶೋಕ್
ಸರ್ಕಾರ ಮತ್ತು ನಾವು ಇರುವುದರಿಂದ ಮತ್ತಷ್ಟು ಅನುಕೂಲವಾಗಲಿದೆ ಎಂದರು. ಸಂಸದರು ನೀಡಿದ ಆದೇಶದಂತೆ ಕೆಲಸ ಮಾಡಲಾಗುತ್ತಿದೆ. ಕಳೆದ ಬಾರಿ 5 ವರ್ಷ ಶಾಸಕರಾದವರು ಹಳ್ಳಿಗಳನ್ನೇ ನೋಡಿಲ್ಲ. ನಾವು ಪ್ರತಿ ಗ್ರಾಮಗಳಿಗೆ ಬೇಟಿ ನೀಡಿ ಕಷ್ಟ, ಸುಖ ಕೇಳುತ್ತಿದ್ದೇವೆ ಜನಸಂಪರ್ಕ ಸಭೆಗೆ ಭಾಗವಹಿಸದ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. ಪ್ರತಿ ರೈತರಿಗೆ ಬರ ಪರಿಹಾರದ ಹಣ 2 ಸಾವಿರ ತಮ್ಮ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಬರವನ್ನು ಸಮರ್ಪಕವಾಗಿ ಎದುರಿಸಲು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಮತ್ತು ನಮಗೆ ಆದೇಶ ನೀಡಿದೆ ಎಂದು ತಿಳಿಸಿದರು.
ನಾನು ಶಾಸಕನಾದ ಮೇಲೆ ತಾಲೂಕು ಆಡಳಿತದಲ್ಲಿ ಬದಲಾವಣೆ ಮಾಡಲಾಗಿದೆ. ಹಳೆಯ ರೆಕಾರ್ಡ್ ಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ಸ್ಥಳದಲ್ಲೆ ಸಂಬಂಧ ಪಟ್ಟ ದಾಖಲೆಗಳನ್ನು ನೀಡಲು ಫೆ.1ರಿಂದ ಚಾಲನೆ ನೀಡಲಾಗುವುದು. ಜಲಜೀವನ್ ಮಿಷನ್ ಯೋಜನೆಯಡಿ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಮಾಹಿತಿ ನೀಡಿದರೆ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು. ಮಾನಗಲ್ಲು-ಮತ್ತಿಕೆರೆ ರಸ್ತೆ ಕಾಮಗಾರಿ ಕಳಪೆ ಎಂದು ಮಾಧ್ಯಮಗಳಲ್ಲಿ ಕಂಡು ಬಂದರೆ ಸಂಬಂಧಪಟ್ಟವರನ್ನು ಮನೆಗೆ ಕಳುಹಿಸಲಾಗುವುದು.
ಕಡಿಮೆ ವಿದ್ಯುತ್ ಬಳಕೆದಾರರಿಗೆ ಗೃಹಜ್ಯೋತಿ ಅಡಿ ಹೆಚ್ಚು ಯುನಿಟ್: ಸಚಿವ ಎಚ್.ಕೆ.ಪಾಟೀಲ್
ರಸ್ತೆ ಕಾಮಗಾರಿ ಮಾಡುವ ಮುನ್ನಾ ಯಾರಿಂದಲೂ 10ರಿಂದ 20ರಷ್ಟು ಕಮಿಷನ್ ಪಡೆದಿಲ್ಲ ಸಮರ್ಪಕವಾಗಿ ಕೆಲಸ ಮಾಡದಿದ್ದರೆ ಗುತ್ತಿಗೆದಾರನಿಗೆ ಬಿಲ್ಲು ಕೊಡಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ವಿಜಯ್ ಕುಮಾರು, ತಾಪಂ ಮಾಜಿ ಉಪಾಧ್ಯಕ್ಷ ನಾಗರಾಜು, ಅರಣ್ಯ ಇಲಾಖೆ ಚೈತ್ರ, ಮಂಜುನಾಥ್, ಸಿಡಿಪಿಓ ಬಿ.ಎಲ್. ಸುರೇಂದ್ರ, ಬೆಸ್ಕಾಂ ಶಿವರಾಜು, ಟಿಎಚ್ಒ ಡಾ.ಎಂ.ಸಿ.ಚಂದ್ರಶೇಖರ್, ಬಾಚೇನಹಟ್ಟಿ ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಜಯರಾಮು, ಪಿಡಿಒ ಕೃಷ್ಣ, ಗ್ರಾಪಂ ಮಾಜಿ ಸದಸ್ಯ ಜಯರಾಮು, ವನಜಾ, ಪುಷ್ಪ ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.