ನಾನೇ ಮತ್ತೆ ಸ್ಪರ್ಧಿಸಿದರೆ ದೇವರು ಒಪ್ಪಲ್ಲ: ಸಂಸದ ಅನಂತ ಕುಮಾರ್ ಹೆಗಡೆ

By Kannadaprabha NewsFirst Published Dec 27, 2023, 4:52 AM IST
Highlights

ಆರು ಬಾರಿ ನನ್ನನ್ನು ಗೆಲ್ಲಿಸಿದ್ದೀರಿ, ನನಗೆ ಇನ್ನೇನು ಬೇಕು? ರಾಜಕೀಯದಿಂದ ದೂರ ಆಗಬೇಕು ಎಂದು ಕಳೆದ ಮೂರು ಅವಧಿಯಿಂದ ಹೇಳಿಕೊಂಡು ಬಂದಿದ್ದೇನೆ. ಜನ ನನ್ನನ್ನು ತಿರಸ್ಕರಿಸಿ ಹೊಸಬರ ಹೆಸರು ಹೇಳಲಿ ಎಂದು ಮೂರು ವರ್ಷಗಳಿಂದ ಸಾರ್ವಜನಿಕರ ಭೇಟಿ ಸಹ ಮಾಡಿರಲಿಲ್ಲ. ನಾನೇ ಮತ್ತೆ ಮತ್ತೆ ಸ್ಪರ್ಧೆ ಮಾಡುವುದನ್ನು ಭಗವಂತನೂ ಒಪ್ಪುವುದಿಲ್ಲ. ಜಿಲ್ಲೆಯಲ್ಲಿ ಸಾಮರ್ಥ್ಯ ಉಳ್ಳವರು, ಆಕಾಂಕ್ಷಿತರು ಜಾಸ್ತಿ ಇದ್ದಾರೆ. ಅವರಿಗೂ ಅವಕಾಶ ಸಿಗಬೇಕು ಎಂದರು.

ಶಿರಸಿ (ಉತ್ತರ ಕನ್ನಡ) (ಡಿ.27): ಸಂಸದ ಅನಂತಕುಮಾರ್ ಹೆಗಡೆ ಅವರ ಮನೆಗೆ ತೆರಳಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಗೆ ಸೂಚಿಸುವಂತೆ ಬೆಂಬಲಿಗರು ಮತ್ತು ಕಾರ್ಯಕರ್ತರ ಆಗ್ರಹ ಮಂಗಳವಾರವೂ ನಡೆಯಿತು. 

ನಗರ ಮತ್ತು ಗ್ರಾಮೀಣ ಘಟಕದ ಇನ್ನೂರಕ್ಕೂ ಅಧಿಕ ಕಾರ್ಯಕರ್ತರು ಮಂಗಳವಾರ ಅವರ ಮನೆಗೆ ತೆರಳಿ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಗೆ ಸೂಚಿಸದಿದ್ದರೆ ನಾವು ಸ್ಥಳದಲ್ಲೇ ಉಪವಾಸ ಕೂರುತ್ತೇವೆ ಎಂದು ಪಟ್ಟುಹಿಡಿದರು. ಆದರೆ ಅನಂತ ಕುಮಾರ್‌ ಮಾತ್ರ ಇನ್ನೂ ಸ್ಪರ್ಧಿಸಿದರೆ ಭಗವಂತ ಒಪ್ಪುವುದಿಲ್ಲ. ನಿಮ್ಮ ಪ್ರೀತಿ, ವಿಶ್ವಾಸ ತಿರಸ್ಕರಿಸುವಂಥ ಮೂರ್ಖತನವನ್ನು ಭಗವಂತ ನನಗೆ ನೀಡದಿರಲಿ ಎಂದು ಮಾರ್ಮಿಕವಾಗಿ ನುಡಿದರು.

Latest Videos

ಬಿಜೆಪಿ ಕಾರ್ಯಕರ್ತ ರಾಜೇಶ್‌ ಶೆಟ್ಟಿ ಮಾತನಾಡಿ, ನಮ್ಮನ್ನು ಬಿಜೆಪಿಗೆ ಕರೆದುಕೊಂಡು ಬಂದವರೇ ನೀವು. ಮುಂದಿನ ೫ ವರ್ಷ ಲೋಕಸಭೆ ಪ್ರತಿನಿಧಿಯಾಗಿ ನೀವು ಇರಬೇಕು. ಒಂದೊಮ್ಮೆ ಸ್ಪರ್ಧಿಸಲು ನಿರಾಕರಿಸಿದರೆ ಆಮರಣಾಂತ ಉಪವಾಸ ಮಾಡುತ್ತೇವೆ ಎಂದು ಆಗ್ರಹಿಸಿದರು.

ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ ಮಾತನಾಡಿ, ಕಾಡಿನಲ್ಲಿ ಹುಲಿ ಇದ್ದರೆ ಗತ್ತು ಇರುತ್ತದೆ. ಸಂಸತ್ತಲ್ಲಿ ನಮ್ಮ ಉತ್ತರಕನ್ನಡದ ಹುಲಿ ಇರಬೇಕು ಎಂದು ಆಗ್ರಹಿಸಿದರು. ಭಟ್ಕಳದಲ್ಲಿ ಒಂದು ಹೆಣ್ಣು ಮಗಳು ನಿರ್ಭಯವಾಗಿ ಓಡಾಡುವ ಇಂದಿನ ಸ್ಥಿತಿಗೆ ಅನಂತಕುಮಾರ್‌ ಹೆಗಡೆ ಕಾರಣ. ನೀವು ಸ್ಪರ್ಧಿಸಲೇಬೇಕು ಎಂದು ಜಿಪಂ ಮಾಜಿ ಸದಸ್ಯೆ ರೇಖಾ ಹೆಗಡೆ ಆಗ್ರಹಿಸಿದರು.

ಬಳಿಕ ಮಾತನಾಡಿದ ಅನಂತಕುಮಾರ್‌ ಹೆಗಡೆ, ಆರು ಬಾರಿ ನನ್ನನ್ನು ಗೆಲ್ಲಿಸಿದ್ದೀರಿ, ನನಗೆ ಇನ್ನೇನು ಬೇಕು? ರಾಜಕೀಯದಿಂದ ದೂರ ಆಗಬೇಕು ಎಂದು ಕಳೆದ ಮೂರು ಅವಧಿಯಿಂದ ಹೇಳಿಕೊಂಡು ಬಂದಿದ್ದೇನೆ. ಜನ ನನ್ನನ್ನು ತಿರಸ್ಕರಿಸಿ ಹೊಸಬರ ಹೆಸರು ಹೇಳಲಿ ಎಂದು ಮೂರು ವರ್ಷಗಳಿಂದ ಸಾರ್ವಜನಿಕರ ಭೇಟಿ ಸಹ ಮಾಡಿರಲಿಲ್ಲ. ನಾನೇ ಮತ್ತೆ ಮತ್ತೆ ಸ್ಪರ್ಧೆ ಮಾಡುವುದನ್ನು ಭಗವಂತನೂ ಒಪ್ಪುವುದಿಲ್ಲ. ಜಿಲ್ಲೆಯಲ್ಲಿ ಸಾಮರ್ಥ್ಯ ಉಳ್ಳವರು, ಆಕಾಂಕ್ಷಿತರು ಜಾಸ್ತಿ ಇದ್ದಾರೆ. ಅವರಿಗೂ ಅವಕಾಶ ಸಿಗಬೇಕು ಎಂದರು.

ಸಿದ್ದು ವಿರುದ್ಧ ಗುಡುಗಿದ ಅನಂತ್ ಕುಮಾರ್ ಹೆಗಡೆ: 7ನೇ ಬಾರಿ ಸಂಸತ್ತು ಪ್ರವೇಶಿಸ್ತಾರಾ ಹಿಂದೂ ಹುಲಿ..?

ನಾನು ನಿಲ್ಲುತ್ತೇನೆ ಎಂದಾದರೆ ವಿರೋಧ ಮಾಡುವವರು ಯಾರೂ ಇಲ್ಲ. ಆದರೆ ನಾನೇ ತುಂಬಾ ದಿನಗಳಿಂದ ರಾಜಕೀಯದಿಂದ ದೂರ ಆಗಬೇಕು ಎಂದು ನಿರ್ಣಯ ಮಾಡಿದ್ದೇನೆ, ಪಕ್ಷದ ಹಿರಿಯರಿಗೂ ಹೇಳಿದ್ದೇನೆ. ಈಗ ಎಲ್ಲರೂ ಒತ್ತಾಯ ಮಾಡುತ್ತಿದ್ದು, ನನಗೂ ಸಮಯಾವಕಾಶ ನೀಡಿ ಎಂದರು. ಆದರೆ ಅಭಿಮಾನಿಗಳು, ಕಾರ್ಯಕರ್ತರು ಪಟ್ಟು ಬಿಡದೆ ಸ್ಪರ್ಧಿಸುತ್ತೇನೆ ಎಂದು ನೀವು ಹೇಳುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದರು.

ಹಿಂದುತ್ವದ ಬಗ್ಗೆ ಕಮಂಗಿಗಳಿಗೆ ಏನ್ರೀ ಗೊತ್ತು: ಸಿದ್ದರಾಮಯ್ಯ ವಿರುದ್ದ ಅನಂತ ಕುಮಾರ್ ಹೆಗಡೆ ವಾಗ್ದಾಳಿ!

ಬಳಿಕ ಮಾತನಾಡಿದ ಅನಂತಕುಮಾರ ಹೆಗಡೆ, ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ನಾನು ಖಂಡಿತ ತಲೆಬಾಗುತ್ತೇನೆ. ಈ ಪ್ರೀತಿ, ವಿಶ್ವಾಸವನ್ನು ತಿರಸ್ಕರಿಸುವಂತ ಮೂರ್ಖತನವನ್ನು ಭಗವಂತ ನನಗೆ ನೀಡದಿರಲಿ ಎಂದರು.

ಸೋಮವಾರ ಕೂಡ ನೂರಾರು ಬಿಜೆಪಿ ಕಾರ್ಯಕರ್ತರು ಅನಂತ ಕುಮಾರ್‌ ಅವರ ಮನೆಗೆ ತೆರಳಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸುವಂತೆ ಆಗ್ರಹಿಸಿದ್ದರು.

click me!