
ನವದೆಹಲಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಬಜೆಟ್ ಮೇಲಿನ ಚರ್ಚೆ ವೇಳೆ ಮಹಾಭಾರತದ ಚಕ್ರವ್ಯೂಹದ ಕಥೆಯನ್ನು ಹೇಳಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶವನ್ನು ಚಕ್ರವ್ಯೂಹದ ಬಂಧನದಲ್ಲಿರಿಸಲಾಗುತ್ತಿದೆ. ಯುವಕರು ಮತ್ತು ರೈತರನ್ನು ಚಕ್ರವ್ಯೂಹದ ಬಂಧನದಲ್ಲಿ ಇರಿಸಲಾಗುತ್ತಿದೆ. ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಮಂತ್ರಿಗಳು ಹೆದರುತ್ತಿದ್ದಾರೆ. ಮಹಾಭಾರತದಲ್ಲಿ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿ ಕೊಲ್ಲಲಾಯ್ತು. ಈಗ 21ನೇ ಶತಮಾನದಲ್ಲಿ ಹೊಸ ಚಕ್ರವ್ಯೂಹ ರಚನೆಯಾಗಿದೆ. ಆರು ಜನರು ಸೇರಿ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿ ಕೊಂದಿದ್ದರು. ಇಂದಿನ ಹೊಸ ಚಕ್ರವ್ಯೂಹ ಆರು ಜನರ ನಿಯಂತ್ರಣದಲ್ಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಇಡೀ ದೇಶವನ್ನು ಹೊಸ ಚಕ್ರವ್ಯೂಹದಲ್ಲಿ ಬಂಧಿಸಲಾಗಿದೆ. ಇಬ್ಬರು ದೇಶದ ಅರ್ಥ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ. ಉದ್ಯೋಗ ನೀಡುವ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳನ್ನು ನಾಶ ಮಾಡುತ್ತಿರೋದು ಈ ಚಕ್ರವ್ಯೂಹ ಮಾಡಿದ ಮೊದಲ ಕೆಲಸವಾಗಿದೆ. ನೋಟ್ ಬ್ಯಾನ್, ಜಎಸ್ಟಿ ಮತ್ತು ತೆರಿಗೆಯ ಭಯೋತ್ಪಾದನೆಗೆ ಸಣ್ಣ ಉದ್ದಿಮೆದಾರರನ್ನು ಟಾರ್ಗೆಟ್ ಮಾಡಲಾಯ್ತು. ಈ ತೆರಿಗೆ ಭಯೋತ್ಪಾದನೆ ನಿಯಂತ್ರಣಕ್ಕಾಗಿ ಬಜೆಟ್ನಲ್ಲಿ ಯಾವುದೇ ಕೆಲಸಗಳು ನಡೆದಿಲ್ಲ. ಸಣ್ಣ ಪ್ರಮಾಣದ ಉದ್ದಿಮೆಗಳು ನಾಶವಾಗುತ್ತಿರೋದರಿಂದ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
"ಮೊದಲು ನಾನು ಏನು ಹೇಳುತ್ತಿದ್ದೇನೆ ಅನ್ನೋದು ಕೇಳಿಸಿಕೊಳ್ಳಿ" ಸುದ್ದಿಗೋಷ್ಠಿಯಿಂದ ಹೊರ ನಡೆದ ರಾಹುಲ್ ಗಾಂಧಿ
ಚಕ್ರವ್ಯೂಹದ ಮತ್ತೊಂದು ಹೆಸರು ಪದ್ಮವ್ಯೂಹ ಅಂದ್ರೆ ಕಮಲ ವ್ಯೂಹ ರಚನೆಯಾಗಿದೆ. ಚಕ್ರವ್ಯೂಹ ಕಮಲದ ಮಾದರಿಯಲ್ಲಿರುತ್ತದೆ. 21ನೇ ಶತಮಾನದಲ್ಲಿ ಹೊಸ ಚಕ್ರವ್ಯೂಹ ರಚನೆಯಾಗಿದ್ದು, ಅದು ಸಹ ಕಮಲದ ಶೇಪ್ನಲ್ಲಿದೆ. ಆ ಚಕ್ರವ್ಯೂಹದ ಚಿಹ್ನೆಯನ್ನು ನಮ್ಮ ಪ್ರಧಾನಿಗಳು ತಮ್ಮ ಎದೆ ಮೇಲೆ ಹಾಕಿಕೊಂಡಿರುತ್ತಾರೆ. ದ್ರೋಣಾಚಾರ್ಯ, ಕರ್ಣ, ಕೃಪಚಾರ್ಯ, ಕೃತವರ್ಮಾ, ಅಶ್ವಥಾಮ್ ಮತ್ತು ಶಕುನಿ ಈ ಆರು ಜನರು ಸೇರಿ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿ ಕೊಂದರು. ಇಂದು ಸಹ ಚಕ್ರವ್ಯೂಹದ ನಡುವೆ ಆರು ಜನರಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಗವತ್, ಅಜಿತ್ ದೋವಲ್, ಅದಾನಿ ಹಾಗೂ ಅಂಬಾನಿ ಈ ಆರು ಜನರು ಚಕ್ರವ್ಯೂಹವನ್ನು ನಿಯಂತ್ರಿಸುತ್ತಿದ್ದಾರೆ ಎಂದರು.
ಬಜೆಟ್ನಲ್ಲಿ ಇಂಟರ್ಶಿಪ್ ಪ್ರೋಗ್ರಾಂ ಬಗ್ಗೆ ಹೇಳಲಾಗಿದ್ದು ಒಂದು ಹಾಸ್ಯವಾಗಿದೆ. ನೀವು 500 ಪ್ರಮುಖ ಕಂಪನಿಗಳಲ್ಲಿ ತರಬೇತಿ ನೀಡುವದರಿಂದ ಶೇ.99ರಷ್ಟು ಯುವಕರಿಗೆ ಯಾವುದೇ ಲಾಭ ಸಿಗಲ್ಲ. ನೀವು ಮೊದಲು ಕಾಲು ಮುರಿದು, ನಂತರ ಅದಕ್ಕೆ ನೀವೇ ಬ್ಯಾಂಡೇಜ್ ಹಾಕುವ ಕೆಲಸ ಮಾಡುತ್ತಿದ್ದೀರಿ. ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಹಣಕಾಸು ಸಚಿವರು ಒಂದೇ ಒಂದು ಮಾತನ್ನು ಆಡಿಲ್ಲ. ಇಂದಿನ ಯುವ ಸಮುದಾಯಕ್ಕೆ ಸಂಬಂಧಿಸಿದ ದೊಡ್ಡ ವಿಷಯವಾಗಿದೆ. ಕಳೆದ 20 ವರ್ಷಗಳಲ್ಲಿ ಮೊದಲ ಬಾರಿ ಶಿಕ್ಷಣಕ್ಕೆ ಕಡಿಮೆ ಅನುದಾನ ನೀಡಲಾಗಿದೆ ಎಂದು ರಾಹುಲ್ ಗಾಂಧಿ ಗುಡುಗಿದರು.
ಮೂರು ಬಾರಿ ಸೋತರೂ, ಸೋಲು ಒಪ್ಪಿಕೊಳ್ಳಲು ಸಿದ್ಧರಿಲ್ಲ; ರಾಹುಲ್ ವರ್ತನೆ ವಿರುದ್ಧ ಅಮಿತ್ ಶಾ ವಾಗ್ದಾಳಿ
ಸೇನೆಯ ಸೈನಿಕರನ್ನು ಅಗ್ನಿವೀರ್ ಹೆಸರಿನ ಚಕ್ರವ್ಯೂಹದಲ್ಲಿ ಸಿಲುಕಿಸಲಾಯ್ತು. ಈ ಬಜೆಟ್ನಲ್ಲಿ ಅಗ್ನಿವೀರರ ಪಿಂಚಣಿಗಾಗಿ ಒಂದು ರೂಪಾಯಿಯನ್ನು ತೆಗೆದಿರಿಸಿಲ್ಲ. ನಿಮ್ಮನ್ನು ದೇಶಭಕ್ತರೆಂದು ಕರೆದುಕೊಳ್ಳುವ ನೀವು ಅಗ್ನಿವೀರರ ಪಿಂಚಣಿಗಾಗಿ ಅನುದಾನ ಘೋಷಣೆ ಮಾಡಿಲ್ಲ. ನಿಮ್ಮ ಚಕ್ರವ್ಯೂಹದಿಂದ ಹೊರಬರಲು ರೈತರು ಎಂಎಸ್ಪಿ ಲೀಗಲ್ ಗ್ಯಾರಂಟಿಯನ್ನು ಕೇಳಿದ್ದರು. ಆದ್ರೆ ನೀವು ರೈತರ ಜೊತೆ ಮಾತನಾಡಲು ಸಿದ್ಧವಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.