ಮನೆಮನೆ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತ ಅಪಘಾತದಲ್ಲಿ ಸಾವು; ಬಿಜೆಪಿ ಆಕ್ರೋಶ

By Suvarna NewsFirst Published Apr 19, 2024, 8:54 PM IST
Highlights

ಗುರುವಾರ ರಾತ್ರಿ ಮನೆ ಮನೆ ಪ್ರಚಾರದಲ್ಲಿ ತೊಡಗಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ನುಗ್ಗಿದ ಕಾರು ಅಪಘಾತದಿಂದ ಓರ್ವ ಕಾರ್ಯಕರ್ತ ಸ್ಥಳದಲ್ಲಿಯೇ ಸಾವನ್ನಪಿದ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಏ.19) : ಗುರುವಾರ ರಾತ್ರಿ ಮನೆ ಮನೆ ಪ್ರಚಾರದಲ್ಲಿ ತೊಡಗಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ನುಗ್ಗಿದ ಕಾರು ಅಪಘಾತದಿಂದ ಓರ್ವ ಕಾರ್ಯಕರ್ತ ಸ್ಥಳದಲ್ಲಿಯೇ ಸಾವನ್ನಪಿದ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 

ವಾಲ್ನೂರಿನ ಬಿಜೆಪಿ ಕಾರ್ಯಕರ್ತ ರಾಮಪ್ಪ ಅವರು ಗುರುವಾರ ರಾತ್ರಿ ನಡೆದ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅನ್ಯಕೋಮಿನ ಯುವಕರು ಅಪಘಾತ ನಡೆಸಿ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಘಟನೆ ತಿಳಿಯುತ್ತಿದ್ದ ನಿನ್ನೆ ರಾತ್ರಿಯೇ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಮೃತ ರಾಮಪ್ಪ ಅವರ ಶವ ಸಿದ್ದಾಪುರ ಆಸ್ಪತ್ರೆಯಲ್ಲಿ ಇದ್ದಿದ್ದರಿಂದ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಬಿಜೆಪಿ ಕಾರ್ಯಕರ್ತರು ಹಿಂದೂಪರ ಸಂಘಟನೆಗಳು ಕಾರ್ಯಕರ್ತರು ಆಸ್ಪತ್ರೆ ಮುಂಭಾಗ ಜಮಾಯಿಸಿದ್ದರು. 

ಇದು ಆಕಸ್ಮಿಕವಾಗಿ ನಡೆದ ಅಪಘಾತವಲ್ಲ. ಬದಲಾಗಿ ಬಿಜೆಪಿ ಹಾಗೂ ಕೇಸರಿ ಶಾಲುಗಳನ್ನು ನೋಡಿ ಬೇಕೆಂದೇ ನಡೆಸಿದ ಹತ್ಯೆ ಇದು ಆರೋಪಿಸಿ ಸಿದ್ದಾಪುರ ಹಾಗೂ ಮಡಿಕೇರಿ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲಿ ಕುಳಿತ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರು ಕೂಡ ಇಂದು ಮಡಿಕೇರಿಯಲ್ಲಿ ನಡೆಯಬೇಕಾಗಿದ್ದ ಪ್ರಚಾರ ಮೆರವಣಿಗೆ ಬಿಟ್ಟು ಪ್ರತಿಭಟನೆಯಲ್ಲಿ ಭಾಗವಹಿಸಿದರು. 

ನೇಹಾ ಹಿರೇಮಠ ಕೊಲೆ ಪ್ರಕರಣ: ಮತಾಂತರ ಮಾಡಲೆಂದೇ ಲವ್ ಜಿಹಾದ್ -ಸಿಟಿ ರವಿ ಆಕ್ರೋಶ

ನೂರಾರು ಕಾರ್ಯಕರ್ತರು ಎರಡು ಗಂಟೆಗೂ ಅಧಿಕ ಸಮಯ ರಸ್ತೆ ತಡೆನಡೆಸಿದರು. ಸ್ಥಳದಲ್ಲಿಯೇ ಇದ್ದ ಕೊಡಗು ಎಸ್ಪಿ ಕೆ. ರಾಮರಾಜನ್ ಹಾಗೂ ಹತ್ತಾರು ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಪ್ರತಿಭಟನೆ ತಡೆಯಲಾಗಲಿಲ್ಲ. ಜಿಲ್ಲಾಧಿಕಾರಿ ವೆಂಕಟರಾಜಾ ಅವರು ನಿಷೇಧಾಜ್ಞೆ ಜಾರಿ ಮಾಡಿದರೂ ನೂರಾರು ಕಾರ್ಯಕರ್ತರು ಒಟ್ಟಿಗೆ ಸೇರಿ ಪ್ರತಿಭಟಿಸಿದರು. ಇದಕ್ಕೂ ಮುಂಚೆ ಶವಾಗಾರಕ್ಕೆ ಭೇಟಿ ನೀಡಿದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಶವಾಗಾರಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಜೊತೆಗೆ ತೀವ್ರ ಸಂತಾಪ ಸೂಚಿಸಿದರು. 

ಜೊತೆಗೆ ಕೊಡಗಿನ ಇಬ್ಬರು ಮಾಜಿ ಶಾಸಕರಾದ ಕೆ.ಜಿ ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಸಹ ಭೇಟಿ ನೀಡಿದರು. ಈ ಸಂದರ್ಭ ಮಾತನಾಡಿದ ಯದುವೀರ್ ಒಡೆಯರ್ ನಮ್ಮ ಪರವಾಗಿ ಪ್ರಚಾರ ನಡೆಸುತ್ತಿರುವಾಗ ಈ ಘಟನೆ ನಡೆದಿರುವುದು ಸರಿಯಲ್ಲ. ಘಟನೆಯನ್ನು ನೋಡಿದರೆ ಮೇಲ್ನೋಟಕ್ಕೆ ಇದು ಉದ್ದೇಶಪೂರಕವಾಗಿಯೇ ನಡೆಸಿರುವ ಕೃತ್ಯ ಎನಿಸುತ್ತದೆ. ಕೂಡಲೇ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಈ ಕುರಿತು ಪ್ರತಿಕ್ರಿಯಿಸಿದ ಕೊಡಗು ಎಸ್ಪಿ ರಾಮರಾಜನ್, ಎಸ್ಟೀಂ ಕಾರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಒಬ್ಬ ಯುವಕನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಸದ್ಯ ಕೊಲೆ ಮತ್ತು ಕೊಲೆಗೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಅವರು ಮಾದಕ ವಸ್ತು ಸೇವಿಸಿದ್ರಾ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲಾ ಅಪರಾಧಿಗಳನ್ನು ಕೂಡಲೇ ಬಂಧಿಸಲಾಗುವುದು ಎಂದು ಹೇಳಿದರು. 

ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್, ರಾಜ ವಂಶದ ಕುಡಿಯಲ್ಲ; ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಟೀಕೆ

ಸುಮಾರು ಎರಡು ಗಂಟೆಗಳ ಕಾಲ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಯಾರು ಎಷ್ಟೇ ಮನವೊಲಿಸಿದರು. ಕಾರ್ಯಕರ್ತರು ಪ್ರತಿಭಟನೆಯನ್ನು ಕೈಬಿಡಲಿಲ್ಲ. ಕೊನೆಗೆ ಸುಮಾರು ಒಂದು ಗಂಟೆಯ ವೇಳೆಗೆ ಸ್ಥಳಕ್ಕೆ ಬಂದ ಬಿಜೆಪಿ ಮುಖಂಡ ಸಿ.ಟಿ ರವಿ. ಮನವಿ ಮಾಡಿ ಪ್ರತಿಭಟನೆಯನ್ನು ಕೈಬಿಡಿಸಿದರು. ಬಳಿಕ ಸಂಸ್ಕಾರಕ್ಕೆ ಶವವನ್ನು ಕೊಂಡೊಯ್ಯಲು ಅನುವುಮಾಡಿಕೊಟ್ಟರು. ಇನ್ನು ಸ್ಥಳಕ್ಕೆ ಆಗಮಿಸಿದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ರೀತಿ ಘಟನೆ ನಡೆಯಬಾರದಿತ್ತು, ಇದೊಂದು ಬಹಳ ದುಃಖದ ಸಂಗತಿ. ಸಂಪೂರ್ಣ ತನಿಖೆಯಾಗಿ ನ್ಯಾಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯಾರು ಈ ಕೃತ್ಯ ಮಾಡಿದ್ದಾರೊ ಅವರಿಗೆ ಸೂಕ್ತ ಶಿಕ್ಷೆಯಾಗಬೇಕು. ಕಾನೂನಿನ ಮೇಲೆ ನಮಗೆ ವಿಶ್ವಾಸ ಇದೆ ಅಪರಾಧಿಗೆ ಶಿಕ್ಷೆ ಆಗಲಿದೆ ಎಂದರು.
 

click me!