ಸಾಲದ ಮೊತ್ತದ ಹಣ ಶಾಸಕರು ಶಿಫಾರಸು ಮಾಡಿದ ಕಾಮಗಾರಿಗೆ: ವಿಪಕ್ಷ ಕಾಂಗ್ರೆಸ್‌ ಗದ್ದಲ

By Kannadaprabha NewsFirst Published Dec 31, 2022, 2:31 PM IST
Highlights

ಮಹಾನಗರ ಪಾಲಿಕೆಯು ಕೋಟ್ಯಂತರ ರು. ಮೊತ್ತದ ಸಾಲ ಪಡೆದು ಅದನ್ನು ಶಾಸಕರು ಶಿಫಾರಸು ಮಾಡಿದ ಕಾಮಗಾರಿಗೆ ವಿನಿಯೋಗಿಸಲಾಗುತ್ತಿದೆ ಎಂದು ವಿಪಕ್ಷ ಕಾಂಗ್ರೆಸ್‌ ಮಾಡಿದ ಆರೋಪ ಪಾಲಿಕೆ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.

ಮಂಗಳೂರು (ಡಿ.31) : ಮಹಾನಗರ ಪಾಲಿಕೆಯು ಕೋಟ್ಯಂತರ ರು. ಮೊತ್ತದ ಸಾಲ ಪಡೆದು ಅದನ್ನು ಶಾಸಕರು ಶಿಫಾರಸು ಮಾಡಿದ ಕಾಮಗಾರಿಗೆ ವಿನಿಯೋಗಿಸಲಾಗುತ್ತಿದೆ ಎಂದು ವಿಪಕ್ಷ ಕಾಂಗ್ರೆಸ್‌ ಮಾಡಿದ ಆರೋಪ ಪಾಲಿಕೆ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ಮೇಯರ್‌ ಜಯಾನಂದ ಅಂಚನ್‌ ಅವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಮಂಗಳಾ ಸಭಾಂಣಗದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಾಲದ ವಿಚಾರದ ಚರ್ಚೆಯು ಆಡಳಿತ ಹಾಗೂ ಪ್ರತಿಪಕ್ಷಗಳ ಮಧ್ಯೆ ಮಾತಿನ ವರಸೆಗೆ ಸಾಕ್ಷಿಯಾಯಿತು.

ಮಂಗಳೂರು(Mangaluru) ದಕ್ಷಿಣ ಹಾಗೂ ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ(Infrastructure development) ಹಾಗೂ ಹಣಕಾಸು ನಿಗಮ(Financial Corporation) (ಕೆಯುಐಡಿಎಫ್‌ಸಿ) ಮುಖಾಂತರ ಸಾಲ ಪಡೆದು ಹಾಗೂ ನಗರ ಪಾಲಿಕೆ ನಿಧಿ ಸೇರಿ ಒಟ್ಟು 39.89 ಕೋ.ರು.ಗಳಿಗೆ ಶಾಸಕರು ಸಲ್ಲಿಸಿದ ಕಾಮಗಾರಿ ಯೋಜನೆಗೆ ಅನುಮೋದನೆ ವಿಚಾರ ದೀರ್ಘ ಮಾತಿನ ಚಕಮಕಿಯನ್ನು ಸೃಷ್ಟಿಸಿತು.

Mangaluru crime: ಸೌದಿಯಲ್ಲಿ ಅಪಘಾತ: ಮಂಗಳೂರಿನ ಯುವಕ ಮೃತ

ಕಾಂಗ್ರೆಸ್‌(Congress) ಸದಸ್ಯರು ಮೇಯರ್‌(mayor) ಪೀಠದ ಎದುರು ಪ್ರತಿಭಟನೆ ನಡೆಸಿ ಕೋಟಿ ಕೋಟಿ ಲೂಟಿ ಎಂದು ಘೋಷಣೆ ಕೂಗಿದರು. ‘ಎರಡೂ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುವುದನ್ನು ಕಂಡು ಸಹಿಸಲಾಗದೆ ಆರೋಪ ಮಾಡಲಾಗುತ್ತಿದೆ’ ಎಂದು ಬಿಜೆಪಿ ಸದಸ್ಯರು ವಾಗ್ವಾದ ನಡೆಸಿದರು. ಮಾತಿನ ಚಕಮಕಿ ತೀವ್ರಗೊಳ್ಳುತ್ತಿದ್ದಂತೆ ಮೇಯರ್‌ ಸೂಚನೆ ಮೇರೆಗೆ ಮುಖ್ಯಸಚೇತಕ ಪ್ರೇಮಾನಂದ ಶೆಟ್ಟಿಅವರು ಕಾರ್ಯಸೂಚಿ ಮಂಡಿಸಿ ಗಂಟೆಯೊಳಗೆ ಸಭೆ ಮುಕ್ತಾಯಗೊಂಡಿತು.

ಪ್ರತಿಪಕ್ಷ ನಾಯಕ ನವೀನ್‌ ಡಿಸೋಜ ಮಾತನಾಡಿ, ಕೆಯುಐಡಿಎಫ್‌ಸಿ ವತಿಯಿಂದ ಸಾಲ ತಂದು ಅಭಿವೃದ್ಧಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವ ಅಧಿಕಾರವನ್ನು ಬಳಸಿ ಸಾಲ ತರಲಾಗಿದೆ ಹಾಗೂ ಯಾವ ಕಾರಣದಿಂದ ಇದಕ್ಕೆ ಪೂರ್ವಭಾವಿ ಮಂಜೂರಾತಿ ನೀಡಲಾಗಿದೆ ಎಂದು ಪ್ರಶ್ನಿಸಿದರು. ಸದಸ್ಯ ಸುಧೀರ್‌ ಶೆಟ್ಟಿಕಣ್ಣೂರು ಉತ್ತರಿಸಿ, ಪಾಲಿಕೆಯ ಎಲ್ಲ ಸದಸ್ಯರು ನೀಡಿದ ಪ್ರಸ್ತಾವನೆಗೆ ಅನುಗುಣವಾಗಿ ಯೋಜನೆ ರೂಪಿಸಲಾಗಿದೆ. ಪೂರ್ವಭಾವಿ ಮಂಜೂರಾತಿ ನೀಡುವ ಅಧಿಕಾರ ಮೇಯರ್‌ ಅವರಿಗಿದೆ. ಎಡಿಬಿಯಲ್ಲಿ ಸಾಲ ತಂದು ಕಾಂಗ್ರೆಸ್‌ನವರು ಮರುಪಾವತಿಸಿಲ್ಲ ಎಂದರು. ಮೇಯರ್‌ ಪೀಠದೆದುರು ಆಗಮಿಸಿದ ಮಾಜಿ ಮೇಯರ್‌ ಭಾಸ್ಕರ್‌, ಸದಸ್ಯರಾದ ಎ.ಸಿ.ವಿನಯ್‌ರಾಜ್‌, ಪ್ರವೀಣ್‌ಚಂದ್ರ ಆಳ್ವ ಸಹಿತ ಕಾಂಗ್ರೆಸ್‌ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಮಾಜಿ ಮೇಯರ್‌ ಶಶಿಧರ ಹೆಗ್ಡೆ ಮಾತನಾಡಿ ‘ಪಾಲಿಕೆಯ ಆರ್ಥಿಕ ವಿಚಾರದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಜಲಸಿರಿ, ಕುಡ್ಸೆಂಪ್‌ ಸಹಿತ ನಗರಕ್ಕೆ ದೊಡ್ಡ ಯೋಜನೆ ಬರುವಾಗ ಸಾಲ ಮಾಡುವ ಕ್ರಮ ಇದೆ. ಆದರೆ, ಚರಂಡಿ ಕೆಲಸ ಸಹಿತ ಸಣ್ಣ ಕೆಲಸಕ್ಕೂ ಸಾಲ ಪಡೆಯುವುದು ಸರಿಯಲ್ಲ’ ಎಂದರು

 

Mangaluru News: ವಿದ್ಯಾರ್ಥಿಗಳು ಬರುವ ಮೊದಲೇ ಕುಡಿದು ಮಲಗಿದ್ದ ಸರ್ಕಾರಿ ಶಾಲಾ ಶಿಕ್ಷಕ ಅಮಾನತ್ತು

ಮಾತಿನ ಚಕಮಕಿ ತೀವ್ರಗೊಳ್ಳುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ಮೇಯರ್‌ ಪೀಠದೆದುರು ಮತ್ತೊಮ್ಮೆ ಆಗಮಿಸಿ ಪ್ರತಿಭಟನೆ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿಯ ಕದ್ರಿ ಮನೋಹರ ಶೆಟ್ಟಿ, ರೂಪಶ್ರೀ ಪೂಜಾರಿ, ಸಂಗೀತ ನಾಯಕ್‌, ಶ್ವೇತಾ ಸಹಿತ ಹಲವು ಸದಸ್ಯರು ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಭೆಯನ್ನು ಮೇಯರ್‌ ಐದು ನಿಮಿಷ ಮುಂದೂಡಿದರು. ಮತ್ತೆ ಸಭೆ ಆರಂಭವಾದಾಗಲೂ ಇದೇ ವಿಚಾರ ಚರ್ಚೆಗೆ ಬಂತು. ಕಾರ್ಯಸೂಚಿ ಓದುವಂತೆ ಮೇಯರ್‌ ಸೂಚಿಸಿದರು. ಕಾಂಗ್ರೆಸ್‌ ಸದಸ್ಯರ ಧರಣಿಯ ಮಧ್ಯೆಯೇ ಕಾರ್ಯಸೂಚಿ ಮಂಡಿಸಿ ಸಭೆ ಮುಕ್ತಾಯವಾಯಿತು.

click me!