ಗ್ಯಾರಂಟಿ ಅನುಷ್ಠಾನದಲ್ಲಿ ಗದಗ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿರಲಿ: ಸಚಿವ ಎಚ್‌.ಕೆ.ಪಾಟೀಲ್‌

By Kannadaprabha NewsFirst Published Jul 2, 2023, 2:00 AM IST
Highlights

ರಾಜ್ಯ ಸರ್ಕಾರದ ಆಶಯಕ್ಕನುಸಾರವಾಗಿ ಆಡಳಿತ ವರ್ಗ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೆಕು. ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಮುಖ ಐದು ಗ್ಯಾರಂಟಿಗಳ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಗದಗ ಜಿಲ್ಲೆ ಪ್ರಥಮ ಸ್ಥಾನದಲ್ಲಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು. 

ಗದಗ (ಜು.02): ರಾಜ್ಯ ಸರ್ಕಾರದ ಆಶಯಕ್ಕನುಸಾರವಾಗಿ ಆಡಳಿತ ವರ್ಗ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೆಕು. ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಮುಖ ಐದು ಗ್ಯಾರಂಟಿಗಳ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಗದಗ ಜಿಲ್ಲೆ ಪ್ರಥಮ ಸ್ಥಾನದಲ್ಲಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು. ಅವರು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ರಾತ್ರಿ ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳ ಅನುಷ್ಠಾನ ಕುರಿತಂತೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳು ಸಮಾಜದ, ನಿರ್ಗತಿಕರ, ಕೆಳವರ್ಗದ ಕಲ್ಯಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. 

ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಸದಾ ಬದ್ಧ, ಈ ದಿಸೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಗದಗ ಜಿಲ್ಲೆ ಮುಂಚೂಣಿಯಲ್ಲಿ ಇರಲೇ ಬೇಕು. ಆಡಳಿತ ವರ್ಗ ಸರ್ಕಾರದ ಆಶಯಕ್ಕನುಗುಣವಾಗಿ ಕಾರ್ಯಪ್ರವೃತ್ತರಾಗುವಂತೆ ತಿಳಿಸಿದರು. ಮಹಿಳಾ ಸಬಲೀಕರಣದಲ್ಲಿ ಶಕ್ತಿ ಯೋಜನೆ ಪ್ರಮುಖ ಪಾತ್ರ ವಹಿಸುವುದು. ಜಿಲ್ಲೆಯಲ್ಲಿ ಈ ಮೊದಲು 1.75 ಲಕ್ಷ ಪ್ರಯಾಣಿಕರು ದಿನಂಪ್ರತಿ ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿಯಾದಾಗಿನಿಂದ ದಿನಂಪ್ರತಿ ಸಂಚರಿಸುವವರ ಸಂಖ್ಯೆ 2.46 ಲಕ್ಷಕ್ಕೆ ಎರಿಕೆಯಾಗಿದೆ. ಪ್ರತಿ ತಿಂಗಳು ಸಂಚರಿಸುವ ಪ್ರಯಾಣಿಕರಿಂದ ಸರಾಸರಿ . 15 ಕೊಟಿ ನಗದು ಸಂಗ್ರಹಿಸಲಾಗುತ್ತಿತ್ತು. 

ಗ್ಯಾರಂಟಿ ಯೋಜನೆ ವಿಫಲಗೊಳಿಸಲು ಅಕ್ಕಿ ನೀಡದ ಕೇಂದ್ರ ಸರ್ಕಾರ: ಸಚಿವ ತಿಮ್ಮಾಪುರ

ಈಗ ಆ ಮೊತ್ತ 22 ಕೋಟಿಗೆ ತಲುಪಿದೆ ಎಂದು ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಪ್ಪ ಮಾಹಿತಿ ಒದಗಿಸಿದರು. ಗೃಹಜ್ಯೋತಿ ಪ್ರತಿ ಮನೆಗೆ 200 ಯುನಿಟ್‌ಗಳ ವರೆಗಿನ ಉಚಿತ ವಿದ್ಯುತ್‌ ಒದಗಿಸಲಿದ್ದು, ಪ್ರತಿ ದಿನ ಜಿಲ್ಲೆಯಲ್ಲಿ 20 ಸಾವಿರ ನೋಂದಣಿ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ ಒಟ್ಟು 3,15,756 ಸಂಪರ್ಕಗಳಿದ್ದು, ಈ ಪೈಕಿ ಈಗಾಗಲೇ ಶೇ. 50ರಷ್ಟುನೋಂದಣಿ ಕಾರ್ಯ ಪೂರ್ಣಗೊಂಡಿದೆ. ಜುಲೈ 15ರೊಳಗಾಗಿ ನೋಂದಣಿ ಕಾರ್ಯವು ಸಂಪೂರ್ಣಗೊಳ್ಳಲಿದೆ ಎಂದು ಹೆಸ್ಕಾಂ ರೋಣ ವಿಭಾಗದ ಅಧಿಕಾರಿ ಚೇತನ ಮಾಹಿತಿ ನೀಡಿದರು. 

ಯುವನಿಧಿ ಯೋಜನೆಯಡಿ 2022-23ರಲ್ಲಿ ವೃತ್ತಿಪರ ಕೋರ್ಸುಗಳು ಸೇರಿದಂತೆ ಎಲ್ಲ ವಿಧದ ಪದವೀಧರರಿಗೆ ಈ ಯೋಜನೆ ಅನ್ವಯವಾಗುತ್ತದೆ. ಪದವಿ ಪಡೆದು 180 ದಿನಗಳಾದರೂ ಉದ್ಯೋಗ ದೊರೆಯದ ಪದವೀಧರರಿಗೆ 24 ತಿಂಗಳವರೆಗೆ ನಿರುದ್ಯೋಗ ಭತ್ಯೆ ನೀಡಲಾಗುವುದು. ಜಿಲ್ಲೆಯಲ್ಲಿ 5144 ಜನ ಅಭ್ಯರ್ಥಿಗಳು ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿ ಬಸವರಾಜ ಮಲ್ಲೂರ ಮಾಹಿತಿ ಒದಗಿಸಿದರು. ಗೃಹಲಕ್ಷ್ಮೀ ಯೋಜನೆಯಡಿ ಸಿಟಿಜನ್‌ ಆ್ಯಪ್‌ ಮೂಲಕ ಅಥವಾ ಖುದ್ದಾಗಿ ಕಚೇರಿಗೆ ದಾಖಲಾತಿಗಳೊಂದಿಗೆ ಆಗಮಿಸಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟಪ್ಪನವರ ಮಾಹಿತಿ ನೀಡಿದರು.

ರಾಜ್ಯ ಸರ್ಕಾರದಿಂದ ಶಿಕ್ಷಣಕ್ಕೆ ಪ್ರಥಮ ಆದ್ಯತೆ: ಸಚಿವ ಮಂಕಾಳು ವೈದ್ಯ

ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿಯನ್ನು ಹಾಗೂ ಬಾಕಿ 5 ಕೆ.ಜಿ. ಅಕ್ಕಿಯ ಖರೀದಿಗಾಗಿ 170 ರು.ಗಳನ್ನು ಪಡಿತರ ಚೀಟಿ ಕುಟುಂಬಕ್ಕೆ ನೇರವಾಗಿ ನಗದು ವರ್ಗಾಯಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನ ಕುರಿತಂತೆ ಸರ್ಕಾರ ನೀಡುವ ಸೂಚನೆಗಳನ್ವಯ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಗಂಗಪ್ಪ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ., ಉಪವಿಭಾಗಾಧಿಕಾರಿ ಅನ್ನಪೂರ್ಣ, ಸಮಾಜ ಕಲ್ಯಾಣ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

click me!