Viral video: ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಮತ ಹಾಕಿ: ಎಚ್ಡಿಕೆಗೆ ಶಾಕ್ ನೀಡಿದ ಪರಮಾಪ್ತ ಬೋಜೇಗೌಡ!

By Ravi JanekalFirst Published Apr 24, 2023, 10:54 PM IST
Highlights

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣದಲ್ಲಿರುವಾಗಲೇ ಆ ಪಕ್ಷದ ಎಂಎಲ್ಸಿ ಎಸ್.ಎಲ್.ಬೋಜೇಗೌಡ ಅವರು ಕಾಂಗ್ರೆಸ್ಗೆ ಮತ ಹಾಕುವಂತೆ ತಮ್ಮದೇ ಕಾರ್ಯಕರ್ತರಿಗೆ ತಾಕೀತು ಮಾಡುವ ಮೂಲಕ ಅಧಿಕೃತ ಅಭ್ಯರ್ಥಿ ತಿಮ್ಮಶೆಟ್ಟಿ ಅವರಿಗೆ ಶಾಕ್ ನೀಡಿದ್ದಾರೆ. 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.24): ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣದಲ್ಲಿರುವಾಗಲೇ ಆ ಪಕ್ಷದ ಎಂಎಲ್ಸಿ ಎಸ್.ಎಲ್.ಬೋಜೇಗೌಡ ಅವರು ಕಾಂಗ್ರೆಸ್ಗೆ ಮತ ಹಾಕುವಂತೆ ತಮ್ಮದೇ ಕಾರ್ಯಕರ್ತರಿಗೆ ತಾಕೀತು ಮಾಡುವ ಮೂಲಕ ಅಧಿಕೃತ ಅಭ್ಯರ್ಥಿ ತಿಮ್ಮಶೆಟ್ಟಿ ಅವರಿಗೆ ಶಾಕ್ ನೀಡಿದ್ದಾರೆ. 

Latest Videos

ಬೋಜೇಗೌಡ(Bojegowda MLC) ಅವರು ತಮ್ಮ ನಿವಾಸದಲ್ಲೇ ಜೆಡಿಎಸ್ ಕಾರ್ಯಕರ್ತರನ್ನು ಕರೆಸಿ ಈ ಬಾರಿ ಎಲ್ಲರೂ ಸೇರಿ ಕಾಂಗ್ರೆಸ್ ಗೆಲ್ಲಿಸಿ ಎಂದು ಕರೆ ನೀಡುವ ವೀಡಿಯೋ ಸಾಮಾಜಿಕ ತಾಣಗದಲ್ಲಿ ವೈರಲ್ ಆಗಿದೆ. ಇದನ್ನು ವೀಕ್ಷಿಸಿದ ಬಹಳಷ್ಟು ಮಂದಿ ಬೋಜೇಗೌಡ ಅವರ ನಡೆಯನ್ನು ಖಂಡಿಸಿದ್ದಾರೆ.

ಶೃಂಗೇರಿ: ಹಿಂದೂ ಬ್ರಿಗೇಡ್ ಪ್ರಮುಖರು ಬಿಜೆಪಿ ಸೇರ್ಪಡೆ, ಡಿಎನ್‌ ಜೀವರಾಜ್‌ಗೆ ಆನೆಬಲ!

ಏಯ್, ಅದೆಲ್ಲಾ ಗೊತ್ತಿಲ್ಲಾ ಕೇಳ್ರೋ.. ಈ ಸಾರಿ ನೀವೆಲ್ಲಾ ಸೇರಿ ಕಾಂಗ್ರೆಸ್ಗೆ ವೋಟ್ ಹಾಕಬೇಕು ಅರ್ಥವಾಯ್ತ ಎನ್ನುತ್ತಿದ್ದಂತೆ ಕಾರ್ಯರ್ತರೊಬ್ಬರು ಸಾರ್ ನಾವು ಇದುವರೆಗೆ ಜೆಡಿಎಸ್‌ಗೆ ವೋಟ್ ಹಾಕಿಕೊಂಡು ಬಂದಿದ್ದೇವೆ. ಈಗ ಬದಲಿಸಬೇಕು ಎಂದರೆ ಕೈ ಮುಂದೆ ಬರುವುದಿಲ್ಲ ಎಂದು ಹೇಳುತ್ತಾರೆ. ಆಯ್ತಪ್ಪ ಇದೊಂದು ಸಾರಿ ಹಾಕ್ರಪ್ಪ ಎಂದು ಬೋಜೇಗೌಡರು ಹೇಳುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಈ ವೇಳೆ ಪಕ್ಕದಲ್ಲೇ ಕಾಂಗ್ರೆಸ್ ಮುಖಂಡ ಈ ಬಾರಿ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಬಿ.ಹೆಚ್.ಹರೀಶ್ ಅವರೂ ಇರುವುದು ವೀಡಿಯೋದಲ್ಲಿ ಕಾಣುತ್ತದೆ. ಜೆಡಿಎಸ್ ಅಭ್ಯರ್ಥಿ ತಿಮ್ಮಶೆಟ್ಟಿ ಇನ್ನೂ ಕಣದಲ್ಲಿರುವಾಗಲೇ ಬೋಜೇಗೌರು ತಮ್ಮದೇ ಅಭ್ಯರ್ಥಿ ವಿರುದ್ಧ ಪ್ರಚಾರಕ್ಕಿಳಿದಿರುವ ಬಗ್ಗೆ ಸಾಮಾನ್ಯ ಕಾರ್ಯಕರ್ತರ ಅಸಮಾಧಾನಕ್ಕೂ ಕಾರಣವಾಗಿದೆ. ಕೆಲವರು ಸಾಮಾಜಿಕ ಜಾಲತಾಣದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಾರ್ವಜನಿಕ ವಲಯದಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಕಳೆದ ಎರಡು ತಿಂಗಳಿನಿಂದಲೂ ಟಿಕೆಟ್ ನೀಡುವ ವಿಚಾರದಲ್ಲಿ ಇನ್ನಿಲ್ಲದಂತೆ ಸತಾಯಿಸಿ, ಕಣ್ಣೀರು ಹಾಕಿಸಿ ಕೊನೇ ಘಳಿಗೆಯಲ್ಲಿ ಟಿಕೆಟ್ ಘೋಷಿಸಿದ ನಂತರವೂ ತಿಮ್ಮಶೆಟ್ಟರಿಗೆ ಪಕ್ಷದ ಮುಖಂಡರಿಂದಲೇ ಕಿರುಕುಳ ಮುಂದುವರಿದಿದೆ. ಇದು ಒಳ್ಳೆಯ ರಾಜಕಾರಣವಲ್ಲ ಎಂದು ಕಾರ್ಯಕರ್ತರು ಅಭಿಪ್ರಾಯಿಸಿದ್ದಾರೆ.

ಎಚ್‌ಡಿಕೆಗೆ ಅನಾರೋಗ್ಯ: ಮಣಿಪಾಲ್‌ ಆಸ್ಪತ್ರೆಗೆ ದಾಖಲು! ವೈದ್ಯರು ಹೇಳಿದ್ದೇನು?

ಚುನಾವಣೆ ಮಾಡಿಯೇ ಸಿದ್ಧ

ಬೋಜೇಗೌಡರು ಕಾಂಗ್ರೆಸ್ ಬೆಂಬಲಿಸುವಂತೆ ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ಕರೆಕೊಟ್ಟಿರುವ ಬಗ್ಗೆ ಹೊಸದಿಗಂತಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ಅಭ್ಯರ್ಥಿ ತಿಮ್ಮಶೆಟ್ಟಿ, ಅವರು ಏನು ಕರೆಕೊಟ್ಟಿದ್ದಾರೋ ಗೊತ್ತಿಲ್ಲ. ನಾನು ಈಗ ಅಧಿಕೃತ ಜೆಡಿಎಸ್ ಅಭ್ಯರ್ಥಿಯಾಗಿದ್ದೇನೆ. ಚುನಾವಣೆ ಮಾಡಿಯೇ ಸಿದ್ಧ ಎಂದು ಹೇಳಿದರು. ಕಳೆದ ಮೂರು ದಿನಗಳ ಹಿಂದೆಯೇ ಕಾಂಗ್ರೆಸ್ ಅಭ್ಯರ್ಥಿ ಸೇರಿ ಜೆಡಿಎಸ್ನ ಕೆಲವು ಚುನಾಯಿತ ಪ್ರತಿನಿಧಿಗಳು, ಮುಖಂಡರನ್ನು ತಮ್ಮ ಮನೆಯಲ್ಲೇ ಸಭೆ ಸೇರಿಸಿ ಕಾಂಗ್ರೆಸ್ ಪರ ಕೆಲಸ ಮಾಡಲು ಸೂಚಿಸಿದ್ದರು. ನಾನು ನಿನ್ನೆ ರಾತ್ರಿಯಷ್ಟೇ ಮಂತ್ರಾಲಯಕ್ಕೆ ಬಂದಿದ್ದೇನೆ. ನಂತರ ಈ ವೀಡಿಯೋ ವೈರಲ್(viral video) ಬೆಳವಣಿಗೆ ನಡೆದಿದೆ. ಅದಕ್ಕೆಲ್ಲ ನಾನು ಬಗ್ಗುವುದಿಲ್ಲ. ಚುನಾವಣೆ ಮಾಡಿ ತೋರಿಸುತ್ತೇನೆ. ಕ್ಷೇತ್ರಾದ್ಯಂತ ಪ್ರವಾಸ ಮಾಡಿದ್ದೇನೆ. ನನ್ನ ಜೊತೆಗೂ ಕಾರ್ಯಕರ್ತರಿದ್ದಾರೆ ಎಂದು ತಿಮ್ಮಶೆಟ್ಟಿ ಹೇಳಿದರು.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!