ಈಶ್ವರಪ್ಪ ಬಂಡಾಯದಿಂದ ನಮಗೇನು ನಷ್ಟ ಉಂಟಾಗಲಾರದು: ಬಿ.ವೈ.ರಾಘವೇಂದ್ರ

By Kannadaprabha NewsFirst Published May 8, 2024, 1:47 PM IST
Highlights

ಈ ಬಾರಿ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. 

ಶಿವಮೊಗ್ಗ (ಮೇ.08): ಈ ಬಾರಿ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಶಿಕಾರಿಪುರದಲ್ಲಿ ಮತ ಚಲಾವಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಂತಹ ಸಂದರ್ಭದಲ್ಲಿ ಆ ಸರ್ಕಾರ ಮಾಡಿದ ತಪ್ಪನ್ನು ಸರಿಪಡಿಸಲು ಮೋದಿ ಸರ್ಕಾರಕ್ಕೆ ಒಂದು ಅವಧಿ ಬೇಕಾಯಿತು. ಎರಡನೇ ಅವಧಿಯಲ್ಲಿ ದೇಶದ ಅಭಿವೃದ್ಧಿ ಸಾಕಷ್ಟು ನಡೆದಿದೆ. 

ಕೋವಿಡ್ ಸಂಕಷ್ಟ ಸಂದರ್ಭವನ್ನು ಸವಾಲಾಗಿ ಸ್ವೀಕರಿಸಿದ್ದು ನಮ್ಮೆಲ್ಲರಿಗೂ ಗೊತ್ತಿದೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯ ಜೊತೆಗೆ ನಮ್ಮ ಕಾರ್ಯಕರ್ತರ ಶ್ರಮ ಕೂಡ ಗೆಲುವಿಗೆ ಕಾರಣವಾಗಲಿದೆ ಎಂದರು. ಕಳೆದ ಎರಡು ಮೂರು ತಿಂಗಳುಗಳಿಂದ ನಮ್ಮ ಕಾರ್ಯಕರ್ತರ ಪಡೆ ನಮ್ಮ ಪರವಾಗಿ ಕೆಲಸ ಮಾಡಿದ್ದಾರೆ. ಈ ರೀತಿ ಕಾರ್ಯಕರ್ತರನ್ನು ಬೇರೆ ಯಾವ ಪಕ್ಷದಲ್ಲೂ ನೋಡಲು ಸಾಧ್ಯವಿಲ್ಲ. ಅವರ ಹಾರೈಕೆಯಿಂದ ಈ ಬಾರಿ ತುಂಬಾ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಳೆದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿ ಯೋಜನೆಗಳಿಗೆ ಜನರು ಬೇಸತ್ತಿ ಹೋಗಿದ್ದಾರೆ. ಕಾಂಗ್ರೆಸ್ ನುಡಿದಂತೆ ನಂತರ ನಡೆಯಲಿಲ್ಲ ಎಂಬ ಬೇಸರ ಜನರಲ್ಲಿದೆ. ನಮ್ಮ ಜೇಬಿನಿಂದ ದುಡ್ಡನ್ನು ಕಿತ್ತುಕೊಂಡು ನಮಗೆ ನೀಡುತ್ತಿದ್ದಾರೆ ಎಂದು ಜನರು ಅಕ್ರೋಶಗೊಂಡಿದ್ದಾರೆ. ಈ ಆಕ್ರೋಶವೇ ಬಿಜೆಪಿಗೆ ವರದಾನ ವಾಗಲಿದೆ. ರಾಜ್ಯ ಸರ್ಕಾರದ ಆಡಳಿತ ಕಂಡು ಭ್ರಮನಿರಸನಗೊಂಡಿರುವ ಮತದಾರರು ಈ ಬಾರಿ ಬಿಜೆಪಿಗೆ ಮತ ಹಾಕುತ್ತಾರೆ ಎಂದರು.

3 ಲಕ್ಷ ಮತಗಳ ಅಂತರದಲ್ಲಿ ರಾಘವೇಂದ್ರ ಗೆಲುವು ನಿಶ್ಚಿತ: ಬಿ.ವೈ.ವಿಜಯೇಂದ್ರ ವಿಶ್ವಾಸ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ. ಚುನಾವಣೆಗೆ 16 ರಿಂದ 17 ಜನ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕ್ಷೇತ್ರದ ಮತದಾರರು ಬುದ್ಧಿವಂತರಿದ್ದು ಯೋಚಿಸಿ ತಮ್ಮ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಆಗಬಾರದು ಎಂದು ಅರಿತು ಮತ ಚಲಾವಣೆ ಮಾಡಲಿದ್ದಾರೆ. ಬಂಡಾಯದಿಂದ ನಮಗೇನು ಅಂತಹ ನಷ್ಟ ಉಂಟಾಗಲಾರದು ಎಂದರು.

click me!