ಈಶ್ವರಪ್ಪ ಬಿಜೆಪಿ ಪ್ರಾಯೋಜಿತ ಡಮ್ಮಿ ಅಭ್ಯರ್ಥಿ: ಆಯನೂರು ಮಂಜುನಾಥ್ ಟೀಕೆ

By Kannadaprabha NewsFirst Published Mar 25, 2024, 6:23 AM IST
Highlights

ಹಿಂದುಳಿದ ನಾಯಕನ ಮುಖವಾಡ ಈಶ್ವರಪ್ಪನವರಿಗೆ ಹಾಕಿ ಬಂಡಾಯದ ಆಟ ಹೂಡಿರುವ ಬಿಜೆಪಿಯವರ ಈ ಆಟ ನಡೆಯಲ್ಲ. ಡಮ್ಮಿ ಅಭ್ಯರ್ಥಿ ಈಶ್ವರಪ್ಪನವರ ಮುಖವಾಡ ಕಳಚಿ ಬೀಳುತ್ತದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.

ಶಿವಮೊಗ್ಗ (ಮಾ.25): ಹಿಂದುಳಿದ ನಾಯಕನ ಮುಖವಾಡ ಈಶ್ವರಪ್ಪನವರಿಗೆ ಹಾಕಿ ಬಂಡಾಯದ ಆಟ ಹೂಡಿರುವ ಬಿಜೆಪಿಯವರ ಈ ಆಟ ನಡೆಯಲ್ಲ. ಡಮ್ಮಿ ಅಭ್ಯರ್ಥಿ ಈಶ್ವರಪ್ಪನವರ ಮುಖವಾಡ ಕಳಚಿ ಬೀಳುತ್ತದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಪ್ರಾಯೋಜಿತ ಡಮ್ಮಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಬಿಜೆಪಿಯ ಹೊಂದಾಣಿಕೆ ಅಭ್ಯರ್ಥಿಯಾಗಿ ಸ್ಪರ್ಧೆ ನೀಡಲಿದ್ದಾರೆ. 

ಈಶ್ವರಪ್ಪರಿಗೆ ಈ ಶಕ್ತಿ ಎಲ್ಲಿಂದ ಬಂತು ಎಂದು ಯೋಚಿಸಿದಾಗ ಆ ಪಕ್ಷದ ಮೂಲಗಳೇ ಹೇಳುವಂತೆ ಇದೊಂದು ಬಿಜೆಪಿಯವರ ಷಡ್ಯಂತ್ರ. ಈಶ್ವರಪ್ಪನವರಿಗೆ ಬೆನ್ನ ಹಿಂದೆಯೇ ಇಡಿ, ಐಟಿ ಬಂದೂಕಿನ ಗುರಿ ಇಡಲಾಗಿದೆ. ಈ ಬಂದೂಕು ಇಟ್ಟುಕೊಂಡೇ ಬಿಜೆಪಿ ವರಿಷ್ಠರು ಅವರನ್ನು ಆಟವಾಡಿಸುತ್ತಿದ್ದಾರೆ. ಕಾಂಗ್ರೆಸ್ ಮತಗಳ ಕಿತ್ತುಕೊಳ್ಳುವ ಕುತಂತ್ರ ಇದರಲ್ಲಿ ಅಡಗಿದೆ. ಹಿಂದುಳಿದ ವರ್ಗಗಳು ಇದಕ್ಕೆ ಮರುಳಾಗಲ್ಲ ಎಂದು ಕುಟುಕಿದರು.

ಬಿಎಸ್‌ವೈ, ಈಶ್ವರಪ್ಪ ಹೊಂದಾಣಿಕೆ: ಯಡಿಯೂರಪ್ಪನವರೇ ಗೀತಾರಿಗೆ ಟಿಕೆಟ್ ನೀಡುವಂತೆ ಮಾಡಿ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಈಶ್ವರಪ್ಪ ಕೂಡ ಯಡಿಯೂರಪ್ಪರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಆದರೆ, ಇದು ಈಶ್ವರಪ್ಪ, ಯಡಿಯೂರಪ್ಪನವರ ನಡುವಿನ ಹೊಂದಾಣಿಕೆ. ಇದಕ್ಕೆ ಪ್ರತಿಫಲವಾಗಿ ಈಶ್ವರಪ್ಪನವರಿಗೆ ಈಶಾನ್ಯದ ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರಾಗಿ ಮಾಡುತ್ತಾರೆ. ಇಲ್ಲ ಅವರ ಮಗನಿಗೆ ವಿಧಾನ ಪರಿಷತ್ ಸದಸ್ಯನಾಗಿ ಮಾಡುವುದಾಗಿ ಹೇಳುತ್ತಾರೆ. ಇದು ಬಿಜೆಪಿಯ ಹೊಸ ಕುತಂತ್ರವಷ್ಟೇ. ಈ ತಂತ್ರ, ಕುತಂತ್ರಗಳೆಲ್ಲಾ ಈ ಬಾರಿ ಚುನಾವಣೆಯಲ್ಲಿ ಫಲಿಸಲ್ಲ ಎಂದು ಕಿಚಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಪ್ರಮುಖರಾದ ಜಿ.ಡಿ.ಮಂಜುನಾಥ್, ಡಾ.ಟಿ.ನೇತ್ರಾವತಿ, ಶಿ.ಜು. ಪಾಶ, ಜಿ.ಪದ್ಮನಾಭ್, ತಿಮ್ಲಾಪುರ ಲೋಕೇಶ್, ಕೃಷ್ಣ, ಆಯನೂರು ಸಂತೋಷ್ ಇದ್ದರು.

ಕಾಂಗ್ರೆಸ್ ಸಂಸ್ಕೃತಿ ರಾಜ್ಯ ಬಿಜೆಪಿಗೂ ಬಂದಿದೆ: ಕೆ.ಎಸ್‌.ಈಶ್ವರಪ್ಪ ಕಿಡಿ

ಕಾಂಗ್ರೆಸ್ ಅಭ್ಯರ್ಥಿ ಗೀತಾ ನಿಸ್ಸಂದೇಹವಾಗಿ ಈ ಬಾರಿ ಗೆಲ್ಲುತ್ತಾರೆ. ಪಕ್ಷದ ವತಿಯಿಂದ ಬಿರುಸಿನ ಪ್ರಚಾರ ಆರಂಭವಾಗಿದೆ. ತಾಲೂಕು ಹೋಬಳಿ ಮಟ್ಟದಲ್ಲಿ ಕಾರ್ಯಕರ್ತರೊಂದಿಗೆ ಪ್ರಚಾರ ಸಭೆಗಳು ಆರಂಭವಾಗಿವೆ. ಬಿಜೆಪಿಯ ಯಾವ ಆಟಗಳು ನಡೆಯಲ್ಲ. ಬಿಜೆಪಿಯವರು ಧರ್ಮ ಮುಂದಿಟ್ಟು ರಾಜಕಾರಣ ಮಾಡುತ್ತಿರುವುದರಿಂದ ರಾಜಕಾರಣ ಅಪಾಯದ ಅಂಚು ತಲುಪುತ್ತಿದೆ. ಆದ್ದರಿಂದ ಮತದಾರರು ಎಲ್ಲವನ್ನು ಗಮನದಲ್ಲಿಟ್ಟು ಈ ಬಾರಿ ಗೀತಾರನ್ನು ಗೆಲ್ಲಿಸುತ್ತಾರೆ.
-ಆಯನೂರು ಮಂಜುನಾಥ್, ಕೆಪಿಸಿಸಿ ವಕ್ತಾರ

click me!