Kalaburagi Politics: ಸಂಸದ ಜಾಧವ್‌ ವಿರುದ್ಧ ಕ್ರಿಮಿನಲ್‌ ಖಟ್ಲೆ: ಪ್ರಿಯಾಂಕ್‌ ಗುಡುಗು

By Kannadaprabha NewsFirst Published Dec 29, 2021, 11:13 AM IST
Highlights

*  ರಾಮರಾವ ಮಹಾರಾಜರ ನಕಲಿ ಸಹಿ ವಿಚಾರ
*  ಸಹಿ ನಕಲಿ ಎಂದು ಗೊತ್ತಾದ ಮೇಲೆ ಜಾಧವ ಯಾಕೆ ಸುಮ್ಮನೆ ಕುಳಿತಿದ್ದರು?
*  ಇದು ಮಹಾರಾಜ ಒಳ್ಳೆಯತನ ದುರಪಯೋಗ ಮಾಡಿದಂತೆ ಅಲ್ಲವೇ?
 

ಕಲಬುರಗಿ(ಡಿ.29):  ಬಂಜಾರ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವಂತೆ ಪ್ರಧಾನಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಸಮುದಾಯದ ಆರಾಧ್ಯದೈವ ರಾಮರಾವ್‌ ಮಹಾರಾಜ್‌ ಅವರ ಸಹಿ ನಕಲಿ ಎಂದು ಕಲಬುರಗಿ ಎಂಪಿ ಉಮೇಶ್‌ ಜಾಧವ್‌(Umesh Jadhav) ಹೇಳಿದ್ದಾರೆ. ನಕಲಿ ಸಹಿ ಮಾಡಿದವರು ಯಾರು? ಯಾಕೆ ಮಾಡಿದರು? ಎನ್ನುವುದನ್ನು ಸಂಸದರು ಬಹಿರಂಗಪಡಿಸದಿದ್ದರೆ ಅವರ ವಿರುದ್ಧವೇ ಕ್ರಿಮಿನಲ್‌ ಖಟ್ಲೆ ಹೂಡೋದಾಗಿ ಚಿತ್ತಾಪುರ ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್‌ ಖರ್ಗೆ(Priyank Kharge) ಗುಡುಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಮರಾಜ್‌ ಮಹರಾಜರ ಸಹಿ ನಕಲಿ ಎಂದು ಗೊತ್ತದ ಮೇಲೆ ಜಾಧವ ಯಾಕೆ ಸುಮ್ಮನೆ ಕುಳಿತಿದ್ದರು, ಅವಾಗಲೇ ಹೇಳಬಹುದಿತ್ತು. ನಕಲಿ ಸಹಿ ಎಂದು ಗೊತ್ತದ ಮೇಲೂ ಪ್ರಧಾನಿಗೆ ಅದೇ ಪತ್ರ ಯಾಕೆ ಕೊಟ್ಟರು ? ಅವರನ್ನೇ ವಂಚಿಸಲು ಹೋದರಾ? ಇದು ಮಹಾರಾಜ ಒಳ್ಳೆಯತನ ದುರಪಯೋಗ ಮಾಡಿದಂತೆ ಅಲ್ಲವೇ? ಈ ಕುರಿತು ನಾನು ಪಂಚ ಪಶ್ನೆ ಕೇಳಿದ್ದೆ ಅದಕ್ಕೆ ಇನ್ನೂ ಉತ್ತರ ಬಂದಿಲ್ಲ. ಜಾಧವ ಅವರು ನಕಲಿ ಸಹಿ ಯಾರು ಮಾಡಿದ್ದು? ಯಾಕೆ ಮಾಡಿದರು ? ಉದ್ದೇಶವೇನು ಎನ್ನುವುದ ಬಗ್ಗೆ ಹೊರಗಡೆ ಬಂದು ಸತ್ಯ ಹೇಳದೇ ಹೋದರೆ ಅವರ ಮೇಲೆ ಕ್ರಿಮಿನಲ್‌(Criminal) ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದರು.

Kalaburagi: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ಆಪತ್ತು: ಖರ್ಗೆ ಆತಂಕ

ಎಂಪಿ ಚುನಾವಣೆ(Election) ನಂತರ ಪ್ರಿಯಾಂಕ್‌ ಹತಾಶೆರಾಗಿದ್ದಾರೆ ಎಂದು ಉಮೇಶ್‌ ಜಾಧವ ಹೇಳುತ್ತಾರೆ. ಅದು ಸರಿ ಚುನಾವಣೆ ಗೆದ್ದ ಮೇಲೆ ಅವರಿಗೆ ಹುಚ್ಚು ಹಿಡಿದಿದೆಯಾ.? ಪ್ರಿಯಾಂಕ್‌ಗೆ ಬ್ಯಾನರ್‌ ಇದೆ ಎನ್ನುತ್ತಾರೆ. ನಾನು ಖರ್ಗೆ ಅವರ ಮಗ ಎನ್ನುವ ಹೆಮ್ಮೆ ಇದೆ. ನೀವೂ ಕೂಡಾ ಅದೇ ಬ್ಯಾನರ್‌ ನಿಂದಲೇ ಮೊಟ್ಟಮೊದಲ ಬಾರಿಗೆ ಚುನಾವಣೆ ಗೆದ್ದಿರುವುದು ಇದು ನೆನಪಿರಲಿ ಎಂದು ಕುಟುಕಿದರು.

ಚಿತ್ತಾಪುರ ತಾಲೂಕಿನ ಬೆಳಗೇರಾ ಗ್ರಾಮದ ಭೀಮನಳ್ಳಿ ಪಂಚಾಯತಿ ಅಡಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಮಾಡಲಾರದ ಕೆಲಸಕ್ಕೆ ಬಿಲ್‌ ಪಾಸು ಮಾಡುವಂತೆ ಪಿಡಿಓ ಎಂಪಿಯವರು ಒತ್ತಾಯಿಸಿದ್ದಾರೆ ಇದು ಅಧಿಕಾರದ ದುರಪಯೋಗವಲ್ಲವೇ?

ಮಲ್ಲಿಕಾರ್ಜುನ ಖರ್ಗೆ ಅವರು ಎಂಪಿ ಇದ್ದಾಗ ಎಸ್‌ಸಿಪಿ- ಟಿಎಸ್‌ಪಿ ಅಡಿ ಕೆಬಿಜೆಎನ್‌ಎಲ್‌ ಅಡಿಯಲ್ಲಿ 7 ಕಾಮಗಾರಿಗಳನ್ನು ತಂದಿದ್ದರು. ಅವುಗಳಲ್ಲಿ ರೂ 66.22 ಲಕ್ಷದಿಂದ ರೂ 1.79 ಕೋಟಿಯವರೆ ಇವೆ. ಟೆಂರ್ಡ ಕರೆದು ತಾಂತ್ರಿಕ ಬಿಡ್‌ ತೆರೆಯಲು ಜಾಧವ ಅವರು ತಡೆಹಿಡಿದು ಮತ್ತೊಂದು ಬಾರಿ ಟೆಂಡರ್‌ ಕರೆಯುವಂತೆ ಮೌಖಿಕ ಸೂಚನೆ ನೀಡಿರುವುದಾಗಿ ಅಧಿಕಾರಿಗಳು ಅಧಿಕೃತವಾಗಿ ಬರೆದ ಪತ್ರದಲ್ಲಿ ಹೇಳಿದ್ದಾರೆ. ಜಾಧವ ಅವರು ಯಾಕೆ ಈ ರೀತಿ ಅಡ್ಡಿ ಮಾಡುತ್ತಾರೆ? ಉದ್ದೇಶವೇನು ? ಎಂದು ಪ್ರಶ್ನಿಸಿದರು.

Karnataka Politics: ಕಲಬುರಗಿ ಸಂಸದ ಜಾಧವ್‌ ವಿರುದ್ಧ ಶರಣಪ್ರಕಾಶ ವಾಗ್ದಾಳಿ

ಕೆಕೆಆರ್‌ಡಿಬಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಶಾಸಕರು, ಸಿಎಂ ಅವರು ಕಲ್ಯಾಣ ಕರ್ನಾಟಕ ಉತ್ಸವ(Kalyana-Karnataka) ದಿನಾಚರಣೆ ಸಂದರ್ಭದಲ್ಲಿ ನೀಡಿದ ಭರವಸೆಗಳು ಈಡೇರಿಲ್ಲ. ರೂ 3000 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು ಅದೂ ಕೂಡ ಬಿಡುಗಡೆಯಾಗಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆಯ ಹಂತದ ಕಾಮಗಾರಿ ಬಗ್ಗೆ ಹೇಳಿದ್ದರು, 1000 ಎಕರೆ ಪ್ರದೇಶದಲ್ಲಿ ಕಲಬುರಗಿ(Kalaburagi)ಯಲ್ಲಿ ಟೆಕ್ಸಟೈಲ್‌ ಪಾರ್ಕ್ ಸ್ಥಾಪಿಸುವುದಾಗಿ ಹೇಳಿದ್ದರು ಅದೂ ಕೂಡಾ ರದ್ದಾಗಿದೆ. ಕಲಬುರಗಿ ಹೂಡಿಕೆದಾರರ ಸಭೆಯೂ ನಡೆದಿಲ್ಲವೆಂದು ದೂರಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌(Congress) ಮುಖಂಡ ಸುಭಾಷ್‌ ರಾಠೋಡ್‌ ಅವರು ಚಿಂಚೋಳಿ ತಾಲೂಕಿನಲ್ಲಿ ರಸ್ತೆ ನಿರ್ಮಾಣದಲ್ಲಿ ಕೋಟಿಗಟ್ಟಲೇ ಭ್ರಷ್ಟಾಚಾರ ನಡೆದಿದೆ. ಡಾಂಬರು ಇರುವ ರಸ್ತೆಯ ಮೇಲೆ ಮುರಮ್‌ ಹಾಕಿರುವುದಾಗಿ ಹೇಳಿ ಕೋಟಿಗಟ್ಟಲೇ ಲೂಟಿ ಮಾಡಲಾಗಿದೆ ಉದಾಹರಣೆಗೆ ಐನಾಪುರದಿಂದ ಬಿಕ್ಕು ನಾಯಕ ತಾಂಡವರೆಗೆ ಡಾಂಬರು ಇರುವ ರಸ್ತೆಯ ಮೇಲೆ ಮುರುಮ್‌ ಹಾಕಿರುವುದಾಗಿ ರೂ 3.50 ಕೋಟಿ ಹಣ ಎತ್ತಲಾಗಿದೆ ಎಂದು ಆರೋಪಿಸಿ ಈ ಕುರಿತು ತನಿಖೆ ನಡೆಸಲು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುತ್ತದೆ ಎಂದರು.
 

click me!