Haveri Politics: ಬೊಮ್ಮಾಯಿಗೆ ಸಿಎಂ ಪಟ್ಟ: ರಾಜಕೀಯದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ವರ್ಷ

Kannadaprabha News   | Asianet News
Published : Dec 29, 2021, 09:03 AM IST
Haveri Politics: ಬೊಮ್ಮಾಯಿಗೆ ಸಿಎಂ ಪಟ್ಟ: ರಾಜಕೀಯದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ವರ್ಷ

ಸಾರಾಂಶ

*  ರಾಜಕೀಯ ಭೀಷ್ಮ ಎನಿಸಿದ್ದ ಸಿ.ಎಂ. ಉದಾಸಿ ನಿಧನದ ಕಹಿ ಘಟನೆ *  ವರ್ಷವಿಡಿ ಚುನಾವಣಾ ರಂಗು *  ವರ್ಷವಿಡಿ ಚುನಾವಣೆ ಕಾವು  

ನಾರಾಯಣ ಹೆಗಡೆ

ಹಾವೇರಿ(ಡಿ.29):  ಕೊರೋನಾ ಎರಡನೇ ಅಲೆ, ಪ್ರವಾಹ, ಅತಿವೃಷ್ಟಿ ಇತ್ಯಾದಿ ಕಹಿ ಘಟನಾವಳಿಗಳ ನಡುವೆಯೂ ರಾಜಕೀಯವಾಗಿ 2021ನೇ ಇಸ್ವಿ ಜಿಲ್ಲೆಯ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದಿಡುವ ವರ್ಷ ಎನಿಸಿದೆ. ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ(Basavaraj Bommai) ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದ್ದು ಜಿಲ್ಲೆಯ ಪಾಲಿಗೆ ಮಹತ್ವದ್ದೆನಿಸಿದೆ. ಯಡಿಯೂರಪ್ಪನವರ(BS Yediyurappa) ಸಂಪುಟದಲ್ಲಿ ಗೃಹ ಸಚಿವರಾಗಿ ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಅರ್ಹವಾಗಿಯೇ ಸಿಎಂ ಪಟ್ಟಸಿಕ್ಕಿತು.

ಶಿಗ್ಗಾಂವಿ-ಸವಣೂರ(Shiggaon-Savanur) ಕ್ಷೇತ್ರದ ಶಾಸಕರು ಹಾಗೂ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಜು. 28ರಂದು ಮುಖ್ಯಮಂತ್ರಿಯಾಗಿ(Chief Minister Of Karnataka) ಪ್ರಮಾಣ ವಚನ ಸ್ವೀಕರಿಸಿದರು. ಇದು ಜಿಲ್ಲೆಯ ಜನರ ಪಾಲಿಗೆ ಸಂತಸ ತಂದಿತು.

BJP Meeting: ಬಿಜೆಪಿ ಕಾರ್ಯಕಾರಣಿ ಸಭೆ ಮಾಹಿತಿ ಬಿಚ್ಚಿಟ್ಟ ಯತ್ನಾಳ್, ಬೊಮ್ಮಾಯಿ ಸೇಫ್...!

ಶಿಗ್ಗಾಂವಿ ಕ್ಷೇತ್ರದಿಂದ 1967ರಲ್ಲಿ ಎಸ್‌. ನಿಜಲಿಂಗಪ್(S Nijalingappa) ಅವರು ಅವಿರೋಧ ಆಯ್ಕೆಯಾಗಿ ಸಿಎಂ ಆಗಿದ್ದರು. ಅವರ ನಂತರ ಜಿಲ್ಲೆಯವರಿಗೆ ಸಿಎಂ ಸ್ಥಾನ ದೊರಕಿರಲಿಲ್ಲ. 2ನೇ ಬಾರಿಗೆ ಸಿಎಂ ಸ್ಥಾನ ಒಲಿದು ಬಂದಿದ್ದು, ಜಿಲ್ಲೆಯ ರಾಜಕೀಯ(Politics) ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಾಗಿತ್ತು. ಸಿಎಂ ಸ್ಥಾನದ ಜೊತೆಗೆ ಜಿಲ್ಲೆಯ ಹಿರೇಕೆರೂರ ಶಾಸಕ ಬಿ.ಸಿ. ಪಾಟೀಲರು(BC Patil) ಮತ್ತೊಮ್ಮೆ ಕೃಷಿ ಸಚಿವರಾದರು.

ಉದಾಸಿ ನಿಧನದ ಕಹಿ ಘಟನೆ

ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ರಾಜಕೀಯ ಕ್ಷೇತ್ರ ಭೀಷ್ಮ ಎನಿಸಿದ್ದ, ಹಾನಗಲ್ಲ(Hanagl0 ಕ್ಷೇತ್ರದ ಶಾಸಕರಾಗಿದ್ದಾಗಲೇ ಸಿ.ಎಂ. ಉದಾಸಿ(CM Udasi) ಅವರು ಅಗಲಿದ ನೋವು ವರ್ಷದುದ್ದಕ್ಕೂ ಕಾಡುವಂತಾಯಿತು.

ಸತತ 45 ವರ್ಷಗಳ ಕಾಲ ರಾಜಕೀಯ ಜೀವನದಲ್ಲಿದ್ದ ಸಿ.ಎಂ. ಉದಾಸಿಯವರು 6 ಬಾರಿ ಶಾಸಕರಾಗಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌, ಜವಳಿ ಸಚಿವರು, ಅರಣ್ಯ ನಿಗಮ, ಸಂಗೂರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರು, ರಾಯಚೂರ ಹಾಗೂ ಹಾವೇರಿ(Haveri) ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ನಿರ್ವಹಿಸಿದ್ದ ಅವರು 85ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ನಿಧನರಾದರು. ಹಾವೇರಿ ಮಾಜಿ ಶಾಸಕ ಚಿತ್ತರಂಜನ ಕಲಕೋಟಿ, ಶಿಗ್ಗಾಂವಿ-ಸವಣೂರ ಮಾಜಿ ಶಾಸಕ ರಾಜಶೇಖರ ಸಿಂಧೂರ ಅವರು ನಿಧನ ಹೊಂದಿದರು.

ವರ್ಷವಿಡಿ ಚುನಾವಣೆ ಕಾವು

2021 ಜಿಲ್ಲೆಯಲ್ಲಿ ರಾಜಕೀಯವಾಗಿ ಸದ್ದು ಮಾಡುವುದು ವರ್ಷಾಂತ್ಯದವರೆಗೂ ಮುಂದುವರೆಯಿತು. ಅಕ್ಟೋಬರ್‌ನಲ್ಲಿ ಸಿ.ಎಂ. ಉದಾಸಿಯವರ ನಿಧನದಿಂದ ತೆರವಾದ ಹಾನಗಲ್ಲ ಕ್ಷೇತ್ರಕ್ಕೆ ಉಪಚುನಾವಣೆ(Byelection) ಘೋಷಣೆಯಾಯಿತು. ಈ ಚುನಾವಣೆ ರಾಜ್ಯಮಟ್ಟದಲ್ಲಿ ಸದ್ದು ಮಾಡಿತು. ಸಿಎಂ ತವರು ಜಿಲ್ಲೆಯಲ್ಲಿ ನಡೆದ ಉಪ ಚುನಾವಣೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದ ಕಾವು ಮತ್ತಷ್ಟು ಏರಿತ್ತು.

ಆಡಳಿತ, ವಿಪಕ್ಷಗಳ ನಡುವೆ ಮಾತಿನ ಯುದ್ಧವೇ ನಡೆಯಿತು. ಆದರೆ, ಮತದಾರ ಪ್ರಭುಗಳು ಕಾಂಗ್ರೆಸ್‌ನ(Congress) ಶ್ರೀನಿವಾಸ ಮಾನೆಯವರನ್ನು ಗೆಲ್ಲಿಸಿದರು. ಇದರೊಂದಿಗೆ ಮತದಾರರು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ಮಣೆ ಹಾಕುವ ಸಂದೇಶ ರವಾನಿಸಿದರು. ಫಲಿತಾಂಶವು ಬಿಜೆಪಿಗೆ(BJP) ದೊಡ್ಡ ಶಾಕ್‌ ನೀಡಿದ್ದರೆ, ಕಾಂಗ್ರೆಸ್‌ಗೆ ಬೂಸ್ಟ್‌ ನೀಡಿದಂತಾಯಿತು. ಇದಾದ ನಂತರ ದ್ವಿಸದಸ್ಯ ಕ್ಷೇತ್ರದ ಧಾರವಾಡ ವಿಪ ಚುನಾವಣೆ ಘೋಷಣೆಯಾಗಿ ಹಾವೇರಿಯನ್ನು ಕರ್ಮಭೂಮಿಯನ್ನಾಗಿಸಿಕೊಂಡಿದ್ದ ಸಲೀಂ ಅಹ್ಮದ್‌ ಅವರನ್ನು ಕಾಂಗ್ರೆಸ್‌, ಹುಬ್ಬಳ್ಳಿಯ ಪ್ರದೀಪ ಶೆಟ್ಟರ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಹಾವೇರಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಅಖಾಡಕ್ಕಿಳಿದು ಚುನಾವಣಾ ಕಣವನ್ನು ರಂಗೇರಿಸಿದ್ದರು. ಕೊನೆಗೆ ಸಲೀಂ ಅಹ್ಮದ್‌, ಪ್ರದೀಪ ಶೆಟ್ಟರ ಗೆಲುವು ಸಾಧಿಸಿದರು. ವರ್ಷಾಂತ್ಯದಲ್ಲಿ ಬಂಕಾಪುರ ಪುರಸಭೆ, ಗುತ್ತಲ ಪಪಂ ಚುನಾವಣಾ ನಡೆದಿದ್ದು, ಡಿ. 30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಹೀಗಾಗಿ ಈ ವರ್ಷವನ್ನು ರಾಜಕೀಯ ನಾಯಕರು ಚುನಾವಣೆಯೊಂದಿಗೆ ವಿದಾಯ ಹೇಳುವಂತಾಗಿದೆ.

ಹಾನಗಲ್ಲ ಉಪಚುನಾವಣೆಯ ಮೂಲಕ ಹುಬ್ಬಳ್ಳಿ ಮೂಲದ ಶ್ರೀನಿವಾಸ ಮಾನೆ ಹಾನಗಲ್ಲಗೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಇದರೊಂದಿಗೆ ಕಳೆದ 5 ದಶಕಗಳ ಪ್ರತಿಸ್ಪರ್ಧಿಗಳಾಗಿದ್ದ ಸಿ.ಎಂ. ಉದಾಸಿ, ಮನೋಹರ ತಹಶೀಲ್ದಾರ್‌ ನಂತರ ಹಾನಗಲ್ಲ ಹೊಸ ಶಾಸಕರನ್ನು ನೋಡುವಂತಾಯಿತು. ಹಾವೇರಿ ಲೋಕಸಭೆ ಕ್ಷೇತ್ರದಿಂದ 2 ಬಾರಿ ಸ್ಪರ್ಧಿಸಿ ಸೋಲುಕಂಡಿದ್ದ ಸಲೀಂ ಅಹ್ಮದ್‌ ಕೊನೆಗೆ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿ ರಾಜಕೀಯವಾಗಿ ಜಿಲ್ಲೆಯಲ್ಲಿಯೇ ನೆಲೆ ಕಂಡುಕೊಂಡರು.

Basavaraj Bommai: ಸಿಎಂ ಬೊಮ್ಮಾಯಿ ಬದಲಾವಣೆ ಸುದ್ದಿ, ಅಚ್ಚರಿ ಹೇಳಿಕೆ ನೀಡಿದ ಬಿಜೆಪಿ ಶಾಸಕ

ಪ್ರತ್ಯೇಕ ಹಾಲು ಒಕ್ಕೂಟ

ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡುವ ಮೂಲಕ ಜಿಲ್ಲೆಯ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಿದೆ. ಅಲ್ಲದೇ . 90 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ಸ್ಥಾಪನೆಗೂ ಚಾಲನೆ ದೊರೆತಿದೆ. ಮೆಡಿಕಲ್‌ ಕಾಲೇಜು ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ.

ಹಿರೇಕೆರೂರು, ಬ್ಯಾಡಗಿ, ಹಾನಗಲ್ಲ ತಾಲೂಕಿನಲ್ಲಿ ವಿವಿಧ ನೀರಾವರಿ ಯೋಜನೆಗಳು ಲೋಕಾರ್ಪಣೆಗೊಂಡವು. ಕೊರೋನಾ ಎರಡನೇ ಅಲೆಯಲ್ಲಿ ಹೆಚ್ಚಿನ ಪ್ರಾಣ ಹಾನಿಯಾಯಿತು. ಕೊರೋನಾ ಮರಣ ಪ್ರಮಾಣ ಜಿಲ್ಲೆಯಲ್ಲಿ ಹೆಚ್ಚಿತ್ತು. ಪ್ರವಾಹ, ಅತಿವೃಷ್ಟಿಯಿಂದ ವರ್ಷವಿಡಿ ಜಿಲ್ಲೆಯ ಅನ್ನದಾತ ಸಂಕಷ್ಟವನ್ನು ಎದುರಿಸುವಂತಾಯಿತು. ಬೆಳೆ, ಮನೆ ಹಾನಿಯಾಗಿ ಸಾವಿರಾರು ಕುಟುಂಬಗಳು 2021ನೇ ಇಸ್ವಿಗೆ ಕಣ್ಣೀರ ವಿದಾಯ ಹೇಳುವಂತಾಯಿತು. ಹಲವು ಕಹಿ ಘಟನೆಗಳನ್ನು ಅನುಭವಿಸಿಯೂ ಅದನ್ನು ಮರೆತು 2022ನೇ ವರ್ಷದ ಸ್ವಾಗತಕ್ಕೆ ಜನತೆ ಸಜ್ಜಾಗಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫಾಕ್ಸ್‌ಕಾನ್ ಸಾಧನೆ ಕದಿಯಲು ಯತ್ನ: ಕೇಂದ್ರ ಸಚಿವ ಅಶ್ವಿನ್ ವೈಷ್ಣವ್‌ಗೆ ಸಿದ್ದರಾಮಯ್ಯ ತಿರುಗೇಟು
ಪಕ್ಷದಲ್ಲಿನ ಗೊಂದಲ ಸರಿಯಲ್ಲ, ಎಲ್ಲ ಹಂತದಲ್ಲೂ ಬಗೆಹರಿಯಬೇಕು: ಸಚಿವ ಪ್ರಿಯಾಂಕ್ ಖರ್ಗೆ