
ದಾವಣಗೆರೆ(ಜ.10): ನಿಖಿಲ್ ಕುಮಾರಸ್ವಾಮಿ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿನಾಕಾರಣ ರಾಜ್ಯ ಸರ್ಕಾರದ ವಿರುದ್ಧ ಶೇ.60 ಕಮಿಷನ್ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ ಟೀಕಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿನಾಕಾರಣ ರಾಜ್ಯ ಸರ್ಕಾರದ ವಿರುದ್ಧ ಶೇ.60 ಕಮಿಷನ್ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
ಸಮಾಜದ ಯುವ ನಾಯಕ ಪ್ರಿಯಾಂಕ್ ಖರ್ಗೆ ವಿರುದ್ಧ ಷಡ್ಯಂತ್ರ; ಛಲವಾದಿ ಮಹಾಸಭಾ ಎಚ್ಚರಿಕೆ!
ರಾಜ್ಯ ಸರ್ಕಾರದ ವಿರುದ್ಧ ನಿರಾಧಾರ ಆರೋಪವನ್ನು ಕುಮಾರಸ್ವಾಮಿ ಮಾಡಿದ್ದಾರೆ. ಕಮಿಷನ್ ಬಗ್ಗೆ ಹೇಳಿಕೆಯು ಗಾಳಿಯಲ್ಲಿ ಗುಂಡು ಹಾರಿಸಿದಂತಿದೆ. ಸ್ವತಃ ಕುಮಾರಸ್ವಾಮಿಯವರೆ ಸಿಎಂ ಆಗಿದ್ದು, ಈಗ ಕೇಂದ್ರ ಸಚಿವರಾಗಿದ್ದಾರೆ. ಇಂತಹವರ ಮಾತು ಗಂಭೀರವಾಗಿರಬೇಕೆ ಹೊರತು, ಬಾಯಿಗೆ ಬಂದಂತೆ ಆರೋಪ ಮಾಡುವುದಲ್ಲ ಎಂದು ಹೇಳಿದ್ದಾರೆ.
ಹಿಂದೆ ಬಿಜೆಪಿ ಸರ್ಕಾರದ ವಿರುದ್ದ ಶೇ.40 ಕಮಿಷನ್ ಆರೋಪವನ್ನು ಕಾಂಗ್ರೆಸ್ ಮಾಡುವ ಮುನ್ನ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸ್ವತಃ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಅದೇ ರೀತಿ ಶೇ.60 ಕಮಿಷನ್ ಆರೋಪಕ್ಕೆ ಎಚ್.ಡಿ.ಕುಮಾರಸ್ವಾಮಿ ಬಳಿ ಪುರಾವೆಗಳಿದ್ದರೆ ಒದಗಿಸಲಿ. ಕಾಂಗ್ರೆಸ್ ಸರ್ಕಾರ ಅದರ ಬಗ್ಗೆ ತನಿಖೆ ನಡೆಸಲಿದೆ. ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಅದನ್ನು ಬಿಟ್ಟು ಸುಳ್ಳು ಆರೋಪ ಮಾಡಬಾರದು ಎಂದು ಹೇಳಿದ್ದಾರೆ.
ತಮ್ಮ ಪುತ್ರ ನಿಖಿಲ್ರ ಸತತ ಮೂರು ಸೋಲುಗಳು ಕುಮಾರಸ್ವಾಮಿಗೆ ಕಂಗೆಡಿಸಿವೆ. ತಮ್ಮ ಮಗನನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಮಾಡುವ ಪ್ರಯತ್ನ ಮಾಡುತ್ತಿದ್ದು, ಸ್ವತಃ ಜೆಡಿಎಸ್ನವರೆ ಅದಕ್ಕೆ ಅಡ್ಡಗಾಲಾಗುತ್ತಿದ್ದಾರೆ. ಜೆಡಿಎಸ್ ಪಕ್ಷದ ಸಾಕಷ್ಟು ಶಾಸಕರು ಕಾಂಗ್ರೆಸ್ ಪಕ್ಷದ ಬಾಗಿಲಲ್ಲಿ ನಿಂತಿರುವುದನ್ನು ತಿಳಿದು, ಕುಮಾರಸ್ವಾಮಿಗೆ ಮತಿಭ್ರಮಣೆಯಾಗಿದೆ. ಇದೇ ಕಾರಣಕ್ಕೆ ಹೀಗೆ ಹಿಟ್ ಅಂಡ್ ರನ್ ಆರೋಪ ಮಾಡುತ್ತಿದ್ದಾರೆ. ಹಿಂದೆ ತಮ್ಮ ಬಳಿ ಪೆನ್ ಡ್ರೈವ್ ಇದೆ ಎನ್ನುತ್ತಿದ್ದರು. ಕುಮಾರಸ್ವಾಮಿ ಮಾತಿಗೆ ಎಳ್ಳಷ್ಟೂ ಬೆಲೆ ಕೊಡಲಾಗದು ಎಂದು ಅವರು ವ್ಯಂಗ್ಯವಾಡಿದ್ದಾರೆ.
ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಉಕ್ಕು ಕಾರ್ಖಾನೆ ಅಥವಾ ಬೃಹತ್ ಕೈಗಾರಿಕೆಗಳನ್ನು ಕುಮಾರಸ್ವಾಮಿ ಮಂಜೂರು ಮಾಡಿಸಲಿ. ಹಿಂದೆ ಮೈಸೂರು ಮಹಾರಾಜರು ಸ್ಥಾಪಿಸಿದ್ದ ಭದ್ರಾವತಿ ಉಕ್ಕು ಕಾರ್ಖಾನೆ ಮುಚ್ಚುವ ಸ್ಥಿತಿಯಲ್ಲಿದೆ. ಬಹಳ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಕುಮಾರಸ್ವಾಮಿ ತಮ್ಮ ಪ್ರಭಾವ, ಅಧಿಕಾರ ಬಳಸಿ, ಕಾರ್ಖಾನೆ ಪುನರುಜ್ಜೀವನಗೊಳಿಸಲಿ. ಈ ಮೂಲಕ ರಾಜ್ಯದ ಶ್ರಮಿಕ ವರ್ಗಕ್ಕೆ ಉಪಕಾರ ಮಾಡಲಿ. ಇದರ ಹೊರತಾಗಿ ರಾಜಕೀಯವಾಗಿ ಆರೋಪ ಮಾಡುತ್ತಾ, ಕಾಲ ಕಳೆಯುವುದು ಕುಮಾರಸ್ವಾಮಿಯವಿಗೆ ಶೋಭೆ ತರದು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ನೀಡಿ, ಉತ್ತಮ ಆಡಳಿತವನ್ನು ಕೊಡುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಬಗ್ಗೆ ಟೀಕಿಸಲು ವಿಷಯಗಳಿಲ್ಲದೇ, ಆಧಾರವೇ ಇಲ್ಲದ ಆರೋಪಗಳನ್ನು ಮಾಡಿ ಜನರಿಗೆ ದಿಕ್ಕು ತಪ್ಪಿಸುವುದೇ ಬಿಜೆಪಿ, ಜೆಡಿಎಸ್ ಬಂಡವಾಳವಾಗಿದೆ. ರಾಜ್ಯವನ್ನು ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಸಲು ಕಾಂಗ್ರೆಸ್ ಸರ್ಕಾರ ಬದ್ಧವಿದೆ. ಗ್ಯಾರಂಟಿಯಿಂದ ಜನರ ಬದುಕಿನಲ್ಲಿ ಬದಲಾವಣೆಯಾಗಿದೆ. 3 ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸುವ ಮೂಲಕ ಮತದಾರರು ಬಿಜೆಪಿ-ಜೆಡಿಎಸ್ಗೆ ಪಾಠ ಕಲಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ ಜೆಡಿಎಸ್ ನಿರ್ನಾಮವಾಗಲಿದೆ. ಬಿಜೆಪಿಯೇ ಆ ಕೆಲಸ ಮಾಡಲಿದೆ ಎಂದು ಡಿ.ಬಸವರಾಜ ಹೇಳಿಕೆಯಲ್ಲಿ ಭವಿಷ್ಯ ನುಡಿದಿದ್ದಾರೆ.
ದಾವಣಗೆರೆ: ಕಳಪೆ ಆರ್ಎಲ್ ಸಲೈನ್ನಿಂದಾಗಿ ಒಬ್ಬ ಬಾಣಂತಿ ಸಾವು?
ಡಿ.ಬಸವರಾಜಗೆ ಎಂಎಲ್ಸಿ ಮಾಡಲು ಮನವಿ
ದಾವಣಗೆರೆ: ವಿಧಾನ ಪರಿಷತ್ನ ಖಾಲಿ ಸ್ಥಾನಕ್ಕೆ ಭೋವಿ ಸಮಾಜದ ಹಿರಿಯ ಮುಖಂಡ, ನಾಲ್ಕು ದಶಕದಿಂದ ಕಾಂಗ್ರೆಸ್ ಸಂಘಟನೆಯಲ್ಲಿ ತೊಡಗಿರುವ ಡಿ.ಬಸವರಾಜರಿಗೆ ನೇಮಿಸುವುದು ಸೂಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮನವಿ ಮಾಡಿದ್ದಾರೆ.
ದಾವಣಗೆರೆಯಲ್ಲಿ ರಾಜ್ಯಮಟ್ಟದ ಯುವಜನೋತ್ಸವ ಹಾಗೂ ಕನಕ ಜಯಂತಿ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಸಿಎಂ ಸಿದ್ದರಾಮಯ್ಯನವರಿಗೆ ಡಿ.ಬಸವರಾಜರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡಿ, ದಾವಣಗೆರೆ ಜಿಲ್ಲೆಯಲ್ಲಿ ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿರುವ ಹಿರಿಯ ಮುಖಂಡನಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಸಹ ಸಿಎಂ ಬಳಿ ಇದಕ್ಕಾಗಿ ಧ್ವನಿಗೂಡಿಸಿದರು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.