
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಫೆ.10): ಗುರುವಾರ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಚಿತ್ರದುರ್ಗದ ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚರಿಸಿತು. ಇದು ಎರಡನೇ ಹಂತವಾಗಿದ್ದು ಈ ಮೊದಲು ಸಹ ಡಿಕೆಶಿವಕುಮಾರ್ ನೇತೃತ್ವದಲ್ಲಿ ಯಾತ್ರೆ ಈ ಮೊದಲು ನಡೆದಿತ್ತು. ಆ ಕುರಿತ ಡಿಟೇಲ್ಸ್ ಇಲ್ಲಿದೆ ನೋಡಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ ಶಿವಕುಮಾರ್ ನೇತೃತ್ವದ ಪ್ರಜಾಧ್ವನಿ ಯಾತ್ರೆ ಇಂದಿನ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿನ ಸಂಚಾರದ ಮೂಲಕ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ತಗಳಲ್ಲೂ ಸಂಚರಿಸಿದಂತಾಯಿತು.
ಈ ಮೊದಲು ಪ್ರಥಮ ಹಂತದಲ್ಲಿ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಕ್ಷೇತ್ರಗಳಲ್ಲಿ ಪ್ರಜಾಧ್ವನಿ ಯಾತ್ರೆ ಸಂಚರಿಸಿತ್ತು. ಇಂದು ಎರಡನೇ ಹಂತದ ಮೊದಲ ಭಾಗವಾಗಿ ಪ್ರಜಾಧ್ವನಿ ಯಾತ್ರೆ ಹೊಸದುರ್ಗ ಪಟ್ಟಣದಲ್ಲಿ ನಡೆಯಿತು. ಈ ವೇಳೆ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಸೇರಿದಂತೆ ಇತರೆ ಸ್ಥಳೀಯ ನಾಯಕರು ಉಪಸ್ಥಿತರಿದ್ದರು. ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾವು ಜನರ ಪರ ಇದ್ದೇವೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಒಂದು ಭಾಗದಲ್ಲಿ ಯಾತ್ರೆ ನಡೆಯುತ್ತಿದೆ. ನನ್ನ ನೇತೃತ್ವದಲ್ಲಿ ಇನ್ನೊಂದು ಭಾಗದಲ್ಲಿ ಯಾತ್ರೆ ನಡೆಯುತ್ತಿದೆ.
ಫೆ.10ರಂದು ಯಾದಗಿರಿಗೆ ಪ್ರಜಾಧ್ವನಿ ಯಾತ್ರೆ ಆಗಮನ: ಬಿಜೆಪಿಗೆ ಟಕ್ಕರ್ ನೀಡಲು ಕಾಂಗ್ರೆಸ್ 'ಸಿದ್ಧು' ಅಸ್ತ್ರ!
ಬಿಜೆಪಿಯವರದು ಭ್ರಷ್ಟ ಸರಕಾರ. ವಿಧಾನಸೌಧದ ಕಂಬ ಕಂಬಗಳು ಸಹ ಬಾರಿಸಿದರೆ 40% ಪರ್ಸೆಂಟ್ ಪರ್ಸೆಂಟ್ ಎನ್ನುತ್ತವೆ. ಮುಂಬರುವ ಚುನಾವಣೆಯಲ್ಲಿ ನಾವು ಅಧಿಕಾರದ ಗದ್ದುಗೆ ಏರಲಿದ್ದೇವೆ ಎಂದರು. ಇನ್ನು ಹೊಸದುರ್ಗ ಕಾರ್ಯಕ್ರಮದ ನಂತರ ಯಾತ್ರೆಯು ಹೊಳಲ್ಕೆರೆ ಪಟ್ಟಣ ತಲುಪಿ ಅಲ್ಲಿಯೂ ಕಾರ್ಯಕ್ರಮ ನಡೆಸಲಾಯಿತು. ಹೊಳಲ್ಕೆರೆ ಪಟ್ಟಣದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಮಾಯಕರಾದ ಕೆ.ಎಚ್.ಮುನಿಯಪ್ಪ, ವಿ.ಎಸ್.ಉಗ್ರಪ್ಪ, ಎಚ್.ಎಂ.ರೇವಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಭಾಗವಹಿಸಿದ್ದರು.
ಇನ್ನು ಹೊಳಲ್ಕೆರೆ ಕಾರ್ಯಕ್ರಮ ಮುಗಿಸಿ ಚಿತ್ರದುರ್ಗ ನಗರದ ಕಾರ್ಯಕ್ರಮಕ್ಕೆ ಆಗಮಿಸುವಾಗ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜಾನುಕೊಂಡ ಗ್ರಾಮದ ಬಳಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಸ್ ಕೆ ಬಸವರಾಜನ್ ಬೆಂಬಲಿಗರು ಡಿಕೆಶಿಗೆ ಸೇಬಿನ ಹಾರ ಹಾಕಲು ಕ್ರೇನ್ ಜೊತೆಗೆ ನಿಂತಿದ್ದರು. ಇದರಿಂದ ಉಂಟಾದ ಟ್ರಾಫಿಕ್ ಜಾಂನಲ್ಲಿ ಎರಡು ಅಂಬುಲೆನ್ಸ್ ಗಳು ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ಸಿಲುಕಿದ್ದವು. ಈ ವೇಳೆ ಯುವ ಕಾಂಗ್ರೆಸ್ ಅಧ್ಯಕ್ಷ ನಲಪ್ಪಾಡ್ ಅವರೇ ರೋಡಿಗಿಳಿದು ಟ್ರಾಫಿಕ್ ಕ್ಲಿಯರ್ ಮಾಡಲು ಕೆಲ ಹೊತ್ತು ಪರದಾಡಿದರು.
ಪಂಚರತ್ನ ರಥಯಾತ್ರೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರದ ಜತೆ ಬಿಜೆಪಿ ಮೇಲೆ ಎಚ್ಡಿಕೆ ಅಟ್ಯಾಕ್!
ನಂತರ ಸುಮಾರು ಮೂರು ಗಂಟೆ ತಡವಾಗಿ ಚಿತ್ರದುರ್ಗದ ಕೊನೆಯ ಕಾರ್ಯಕ್ರಮ ನಡೆಯಿತು. ಈ ವೇಳೆ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದರು. ಇನ್ನು ಜಿಲ್ಲೆಯ ಆರು ವಿಧಾನಸಭಾ ಲ್ಷೇತ್ರಗಳಲ್ಲಿ ಕಾರ್ಯಕ್ರಮ ನಡೆದಾಗಲೂ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದವರು ಹಾಜರಿದ್ದರು. ಜೊತೆಗೆ ಈ ಎರಡನೇ ಹಂತದ ಯಾತ್ರೆ ಮೂಲಕ ಚಿತ್ರದುರ್ಗ ಜಿಲ್ಲೆಯಲ್ಲಿ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದವರನ್ನೆಲ್ಲ ಕೈಗೂಡಿಸಿ ಒಗ್ಗಟ್ಟು ಮೂಡಿಸುವ ಪ್ರಯತ್ನವನ್ನು ಸಹ ಕಾಂಗ್ರೆಸ್ ನಾಯಕರು ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.