
ಶಿವಮೊಗ್ಗ(ಅ.29): ಕಟೀಲು ಅವರ ಮನೆ ರಿಪೇರಿ ಮಾಡಿಕೊಳ್ಳಲಿ. ಅವರ ಮನೆ 12 ಬಾಗಿಲಾಗಿದೆ ಮೂರು ಬಾಗಿಲು ಅಲ್ಲ, ಅವರ ಸರ್ಕಾರವೇ ಸಮಿಶ್ರ ಸರ್ಕಾರ ಬಿಜೆಪಿ, ದಳ, ಕಾಂಗ್ರೆಸ್ ಸೇರಿರುವ ಸಮ್ಮಿಶ್ರ ಸರ್ಕಾರವಾಗಿದೆ. ಬಿಜೆಪಿಯಲ್ಲಿ ಏನೇನಾಗುತ್ತಿದೆ ಎಂಬ ದುಃಖ ದುಮ್ಮಾನ ಎಲ್ಲಾ ಈಶ್ವರಪ್ಪನವರ ಬಳಿ ಕೇಳಿ ಅವರೇ ಹೇಳ್ತಾರೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ನದು ಮನೆಯೊಂದು ಮೂರು ಬಾಗಿಲು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಭಾರತ್ ಜೋಡೋ ಕಾರ್ಯಕ್ರಮದಿಂದ ಇಡೀ ದೇಶದಲ್ಲಿ ಸಂಚಲನ ಮೂಡಿದೆ. ಪಾದಯಾತ್ರೆ ಹೇಗೆ ಮಾಡಬಹುದು ಎಂಬ ಮಾದರಿಯನ್ನು ಕರ್ನಾಟಕದಲ್ಲಿ ತೋರಿಸಿದ್ದೇವೆ. ಅದೇ ರೀತಿ ಈಗ ತೆಲಂಗಾಣದಲ್ಲೂ ನಡೆಯುತ್ತಿದೆ. 224 ಕ್ಷೇತ್ರಗಳಲ್ಲೂ ಭಾರತ್ ಜೋಡೋ ಯಾತ್ರೆಯ ಪರಿಣಾಮ ಬೀರಬೇಕು ಈ ಬಗ್ಗೆ ಆಲೋಚನೆ ನಡೆದಿದೆ ಅಂತ ಹೇಳಿದ್ದಾರೆ.
150 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ: ಕಟೀಲ್
ಶಿವಮೊಗ್ಗ ಜಿಲ್ಲೆಯಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ದೊಡ್ಡ ದೊಡ್ಡ ನಾಯಕರೆಲ್ಲ ಚುನಾವಣೆಯಲ್ಲಿ ಸೋತ ರೀತಿಯ ವಾತಾವರಣ ಈಗ ಉಂಟಾಗುತ್ತಿದೆ. ಗ್ಲೋಬಲ್ ಇನ್ವೆಸ್ಟರ್ ಮೀಟ್ ನಡೆಯುತ್ತಿದೆ. ಈಶ್ವರಪ್ಪ ಮತ್ತು ಯಡಿಯೂರಪ್ಪ ಸೇರಿ ಶಿವಮೊಗ್ಗದಲ್ಲಿ ಒಂದಿಷ್ಟು ಬಂಡವಾಳ ಶಾಹಿಗಳನ್ನು ಕರೆಸಿ ಬಂಡವಾಳ ಹೂಡಿಸಲಿ ನೋಡೋಣ. ಇಡೀ ಶಿವಮೊಗ್ಗ ಜಿಲ್ಲೆಗೆ ಕಪ್ಪು ಚುಕ್ಕೆ ತರುವಂತೆ ವಾತಾವರಣ ಮೂಡಿಸಿದ್ದಾರೆ. ಒಬ್ಬ ಬಂಡವಾಳ ಶಾಹಿ ಇಲ್ಲಿ ಐದು ಸಾವಿರ ಕೋಟಿ ಬಂಡವಾಳ ಹೂಡಲಿ ನೋಡೋಣ ಅಂತ ಬಿಜೆಪಿ ನಾಯಕರಿಗೆ ಡಿಕೆಶಿ ಸವಾಲ್ ಹಾಕಿದ್ದಾರೆ.
ಶರಾವತಿ ಮುಳುಗಡೆ ಸಂತ್ರಸ್ತರು ಅರಣ್ಯ ಭೂಮಿ ಬಗರು ಪಶ್ಚಿಮ ಘಟ್ಟದ ಸಮಸ್ಯೆಗಳು ಅಡಿಕೆ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಗಳ ಬಗ್ಗೆ ಒಂದು ತಿಂಗಳೊಳಗೆ ವರದಿ ನೀಡಲು ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆ ನೇತೃತ್ವದಲ್ಲಿ ಒಂದು ಸಮಿತಿ ಮಾಡಿದ್ದೇನೆ. ನಂತರ ಈ ರೈತರ ರಕ್ಷಣೆಗೆ ಯಾವ ರೀತಿಯ ಹೋರಾಟ ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ ಅಂತ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.