ಇಂಧನ ಇಲಾಖೆ ಅಧಿಕಾರಿಗಳಿಗೆ ದಾಖಲೆ ತರುವಂತೆ ಹೆದರಿಸುತ್ತಿದ್ದಾರೆ: ಡಿಕೆಶಿ ಸ್ಫೋಟಕ ಆರೋಪ

By Suvarna NewsFirst Published Sep 15, 2022, 1:58 PM IST
Highlights

ಈ ಹಿಂದೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರಗಳನ್ನು ಬಯಲು ಮಾಡಲು ಆಡಳಿತರೂಢ ಬಿಜೆಪಿ ಸರ್ಕಾರ ಮುಂದಾಗಿದೆ.

ಮೈಸೂರು, (ಸೆಪ್ಟೆಂಬರ್.15): ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೇನು ಆರೇಳು ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ.

ಬಿಜೆಪಿ ಸರ್ಕಾರದ ಒಂದೊಂದೇ ಭ್ರಷ್ಟಾಚಾರಗಳನ್ನು ವಿರೋಧ ಪಕ್ಷ ಕಾಂಗ್ರೆಸ್ ಬಯಲು ಮಾಡುತ್ತಿದ್ದು, ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಿಳಿಸುವ ಕೆಲಸಕ್ಕೆ ಮುಂದಾಗಿದೆ. ಇದಕ್ಕೆ ಇದೀಗ ತಿರುಗೇಟು ನೀಡಲು ಆಡಳಿತರೂಢ ಬಿಜೆಪಿ ಸರ್ಕಾರ ಸಹ  ಈ ಹಿಂದೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರಗಳನ್ನು ಬಯಲು ಮಾಡಲು ಮುಂದಾಗಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಡಿಕೆ ಶಿವಕುಮಾರ್ ಅವರು, ಇಂಧನ ಇಲಾಖೆ ಅಧಿಕಾರಿಗಳಿಗೆ ದಾಖಲೆ ತರುವಂತೆ ಹೆದರಿಸುತ್ತಿದ್ದಾರೆ ಎಂದು  ಗಂಭೀರ ಆರೋಪ ಮಾಡಿದ್ದಾರೆ.

Karnataka Politics: ತಾಕತ್ತಿದ್ದರೆ ಭ್ರಷ್ಟಾಚಾರ ತನಿಖೆ ಮಾಡಿ: ಸಿಎಂಗೆ ಪ್ರಿಯಾಂಕ್‌ ಖರ್ಗೆ ಸವಾಲ್‌

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಅವಧಿಯ ದಾಖಲೆ‌ ತರುವಂತೆ ಒತ್ತಡ ಹಾಕಲಾಗುತ್ತಿದೆ.ಈ‌ ಬಗ್ಗೆ ಕೆಲ ಅಧಿಕಾರಿಗಳು ನನಗೆ ಕರೆ ಮಾಡಿದ್ದರು. ನಾನು ಎಲ್ಲಾ ದಾಖಲೆಗಳ‌ನ್ನು ಕೊಡಿ ಎಂದು ಹೇಳಿದ್ದೇನೆ. ತಪ್ಪು ಮಾಡಿದ್ದರೆ ನಾವೇ ಹಗ್ಗ ಸಹ ಕಳುಹಿಸಿ ಕೊಡುತ್ತೇವೆ. ಬಿಜೆಪಿ ನನ್ನನ್ನು ಹೆದರಿಸಲು  ಮುಂದಾಗಿದೆ. ನಾನು ಯಾವುದಕ್ಕೂ ಹೆದರುವವನಲ್ಲ. ಏನು ಬೇಕಾದರೂ ತನಿಖೆ ಮಾಡಿಕೊಳ್ಳಲಿ ಎಂದು ಸ್ಪಷ್ಟಪಡಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಸಮಗ್ರ ತನಿಖೆ ಹೇಳಿಕೆಗೆ ವ್ಯಂಗ್ಯವಾಡಿದ ಅವರು, ಚಡ್ಡಿ ಪ್ಯಾಂಟು ಹಾಸಿಗೆ ಮೊಟ್ಟೆ ಇತ್ಯಾದಿ ಎಲ್ಲಾ ತನಿಖೆ ಮಾಡಲಿ. ನಾನು ಎಲ್ಲದಕ್ಕೂ ಸಿದ್ದನಾಗಿದ್ದೇನೆ . ಇದಕ್ಕೆ ಮೂರು ವರ್ಷ ಬೇಕಿತ್ತೇ ಎಂದು ಪ್ರಶ್ನಿಸಿದರು.

ದಾಖಲೆ ಮುಚ್ಚಿಟ್ಟಿದ್ದಾರೆ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ತಿರುಗೇಟು ನೀಡಿದ ಅವರು, ಉತ್ತು ಹಾರೆ ತೆಗೆದುಕೊಂಡು ಬುಲ್ಡೋಜರ್‌ ನಲ್ಲಿ ಅಗೆಯಲಿ, ಬೋರ್ ತೆಗೆಸಲಿ, ನಮಗೇನು ಸಮಸ್ಯೆ ಇಲ್ಲ ಎಂದು ಟಾಂಗ್ ಕೊಟ್ಟರು.

ಪರಿಷತ್‌ನಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಎಲ್ಲಿ ಮತಾಂತರ ನಡೆಯುತ್ತಿದೆ? ಪ್ರಚಾರಕ್ಕಾಗಿ ಬಿಜೆಪಿ ಮಂಡನೆ ಮಾಡುತ್ತಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಅಲ್ಪಸಂಖ್ಯಾತರಿಗೆ ಭಯ ಹುಟ್ಟಿಸಲು ಕಾಯ್ದೆ ಮಂಡಿಸಲಾಗುತ್ತಿದೆ. ಭಾವನಾತ್ಮಕ ವಿಚಾರವನ್ನು ಕೆರಳಿಸಲು ಮಂಡನೆ ಮಾಡಲಾಗುತ್ತಿದೆ. ಕಾಯ್ದೆ ಈ ಹಿಂದೆಯೇ ಇತ್ತು. ದೇಶ ರಾಜ್ಯ ವಿಭಜನೆ ಮಾಡಲು ಬಿಜೆಪಿ ಮುಂದಾಗಿದೆ. ಜಾತಿ ಧರ್ಮವನ್ನು ಒಡೆಯಲು ಹುನ್ನಾರ ಮಾಡಲಾಗುತ್ತಿದೆ, ಹಿಂದೂ ಧರ್ಮದ ಓಲೈಕೆ ಹಾಗೂ ಹೈ ಕಮಾಂಡ್ ಮೆಚ್ಚಿಸಲು ಮಂಡನೆ ಮಾಡುತ್ತಿದ್ದಾರೆ ಎಂದು ಹೇಳಿದರು.

click me!