ಸಂಕಲ್ಪ ಸಮಾವೇಶದಲ್ಲಿ ಪಕ್ಷ ಸಂಘಟನೆಗೆ ಕಾಂಗ್ರೆಸ್ ಪಣ..!

By Kannadaprabha NewsFirst Published Jan 7, 2021, 1:02 PM IST
Highlights

ಸಂಕಲ್ಪ ಸಮಾವೇಶದ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಮುಂದಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಮಂಗಳೂರು(ಜ.07): ಕಾಂಗ್ರೆಸ್‌ಗೆ 2021 ಹೋರಾಟದ ಮತ್ತು ಪಕ್ಷ ಸಂಘಟನೆಯ ವರ್ಷವೆಂದು ತೀರ್ಮಾನಿಸಿದ್ದೇವೆ. ಸ್ಥಳೀಯ ನಾಯಕತ್ವಕ್ಕೆ ಆದ್ಯತೆ ನೀಡುವ ಮೂಲಕ ಪಕ್ಷವನ್ನು ಕೇಡರ್‌ ಬೇಸ್ಡ್‌ ಆಗಿ ಬಲಿಷ್ಠಗೊಳಿಸಲಾಗುವುದು. ರಾಜ್ಯ ಮಟ್ಟದ ಜನರ ಸಮಸ್ಯೆಗಳಿಗಿಂತ ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಮುಂದಿಟ್ಟು ಹೋರಾಟ ರೂಪಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಕಟಿಸಿದ್ದಾರೆ. ಪಕ್ಷ ಸಂಘಟನೆಗೆ ಸಮಯ ಮೀಸಲಿರಿಸಲು ಸಾಧ್ಯವಾಗದವರು ಬೇರೆಯವರಿಗೆ ಅವಕಾಶ ನೀಡಿ ಎಂದು ಸ್ಥಳೀಯ ನಾಯಕರಿಗೆ ವಾರ್ನಿಂಗ್‌ ನೀಡಿದ ಅವರು, ಪಕ್ಷ ಬಿಟ್ಟು ಹೋದವರನ್ನು ಮರಳಿ ಪಕ್ಷಕ್ಕೆ ಕರೆತರುವ ಘೋಷಣೆಯನ್ನೂ ಮಾಡಿದ್ದಾರೆ.

ಕೆಪಿಸಿಸಿ ವತಿಯಿಯಂದ ರಾಜ್ಯದ ಪ್ರಥಮ, ಮೈಸೂರು ವಿಭಾಗೀಯ ಪ್ರತಿನಿಧಿಗಳ ‘ಸಂಕಲ್ಪ ಸಮಾವೇಶ’ವನ್ನು ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿರುವ ಸಾಗರ್‌ ಅಡಿಟೋರಿಯಂನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಅಧಿಕಾರ ಸುಮ್ಮನೆ ಬರಲ್ಲ. ಬಿಜೆಪಿ, ಜೆಡಿಎಸ್‌ ವಿಚಾರ ಮತ್ತೆ ಚರ್ಚೆ ಮಾಡೋಣ. ಈಗ ಮೊದಲು ಪಕ್ಷ ಸಂಘಟನೆಗಾಗಿ ಹೋರಾಟ ರೂಪಿಸಬೇಕಾಗಿದೆ. ಚುನಾವಣೆ ಬಂದಾಗ ಮಾತ್ರ ಹೋರಾಡುವುದಲ್ಲ, ಈಗಿನಿಂದಲೇ ಸಜ್ಜಾಗಬೇಕು. ಹಾಗಾಗಿ ಯಾರು ಪಕ್ಷಕ್ಕಾಗಿ ಸಮಯ ನೀಡುತ್ತಾರೆ ಎನ್ನುವುದನ್ನು ವಿಮರ್ಶೆ ಮಾಡುವ ಸಮಯ ಬಂದಿದೆ ಎಂದು ಪಕ್ಷದ ಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದರು.

ಸ್ಥಳೀಯ ಹೋರಾಟಕ್ಕೆ ರಾಜ್ಯ ನಾಯಕರು: ಮುಂದಿನ ದಿನಗಳಲ್ಲಿ ಜನರು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಕಾಂಗ್ರೆಸ್‌ ಹೋರಾಟ ರೂಪಿಸಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಅಂತಹ ಸಮಸ್ಯೆಗಳನ್ನು ಗುರುತಿಸಿದ್ದೇವೆ. ಇನ್ನು ತಾಲೂಕು ಮಟ್ಟದ ಜನರ ಸಮಸ್ಯೆಗಳನ್ನು ಪಟ್ಟಿಮಾಡಲಿದ್ದು, ಅಲ್ಲೂ ಹೋರಾಟ ನಡೆಯಲಿದೆ. ಸ್ಥಳೀಯ ಹೋರಾಟಗಳಿಗೆ ನಾನೂ, ಸಿದ್ದರಾಮಯ್ಯ ಸೇರಿದಂತೆ ಪಕ್ಷದ ರಾಜ್ಯ ಮಟ್ಟದ ನಾಯಕರು ಬರಲಿದ್ದಾರೆ. ಹೋರಾಟಗಳನ್ನು ರೂಪಿಸುವಾಗ ಅದು ಭಾವನಾತ್ಮಕವಾಗಿ ಜನರನ್ನು ತಲುಪುವಂತಿರಲಿ ಎಂದು ಡಿ.ಕೆ. ಶಿವಕುಮಾರ್‌ ಸಲಹೆ ನೀಡಿದರು.

ಗ್ರಾಮ ಮಟ್ಟದಲ್ಲಿ ಕೇಡರ್‌ಗಳು: ಪಕ್ಷವನ್ನು ಕೇಡರ್‌ ಬೇಸ್ಡ್‌ ಆಗಿ ಪರಿವರ್ತಿಸಲು ಸಮಯ ಬಂದಿದೆ. ಅದಕ್ಕಾಗಿ ಪಂಚಾಯ್ತಿ, ವಾರ್ಡ್‌, ಬೂತ್‌ ಮಟ್ಟದಲ್ಲಿ ನಾಯಕರನ್ನು ತಯಾರು ಮಾಡಲಿದ್ದೇವೆ. ಬೂತ್‌ ಮಟ್ಟದಲ್ಲೂ ಸಾಮಾಜಿಕ ಜಾಲತಾಣ ಸಕ್ರಿಯವಾಗಬೇಕು. ಗ್ರಾಮ ಮಟ್ಟದ ಸಮಿತಿಗಳು ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ಸಮುದಾಯವನ್ನು ಪ್ರತಿನಿಧಿಸುವಂತೆ ಮಾಡಲಿದ್ದೇವೆ. ಒಂದು ಸಮಿತಿಯಲ್ಲಿದ್ದವರು ಇನ್ನೊಂದು ಸಮಿತಿಯಲ್ಲಿರಬಾರದು. ಇದು ಪಕ್ಷ ಸಂಘಟನೆಯ ಮೂಲ ತಳಹದಿ ಎಂದರು.

ವಾಷಿಂಗ್ಟನ್ ಹಿಂಸಾಚಾರದಿಂದ ದುಃಖವಾಯ್ತು, ಶಾಂತಿಯುತವಾಗಿ ಅಧಿಕಾರ ಹಸ್ತಾಂತರವಾಗಲಿ: ಮೋದಿ!

ಸೋತ ಕ್ಷೇತ್ರಗಳಿಗೆ ಆದ್ಯತೆ: ಪಕ್ಷ ಸಂಘಟನೆ ಮತ್ತು ಹೋರಾಟಕ್ಕಾಗಿ ಮುಂದಿನ ದಿನಗಳಲ್ಲಿ ರಾಜ್ಯದ 100-150 ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ಹಮ್ಮಿಕೊಳ್ಳಲಿದ್ದೇನೆ. ಕಳೆದ ಚುನಾವಣೆಯಲ್ಲಿ ಯಾವುದೆಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಸೋಲಾಗಿದೆಯೋ ಆ ಕ್ಷೇತ್ರಗಳನ್ನು ಆದ್ಯತೆಯ ನೆಲೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ರಾಜ್ಯದ ಕಾರ್ಯಕರ್ತರ ಧ್ವನಿ ನನ್ನ ಧ್ವನಿಯಾಗಬೇಕು. ಈ ರೀತಿ ಪಕ್ಷವನ್ನು ಕಟ್ಟಿಎಂದು ಕರೆ ನೀಡಿದರು.

ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್‌, ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌, ಮುಖಂಡರಾದ ಎಸ್‌.ಆರ್‌. ಪಾಟೀಲ್‌, ತನ್ವೀರ್‌ ಸೇಠ್‌, ಪುಷ್ಪಾ ಅಮರನಾಥ್‌, ತಾರಾದೇವಿ, ಮಾಜಿ ಸಚಿವ ರಮಾನಾಥ ರೈ, ಶಾಸಕ ಯು.ಟಿ. ಖಾದರ್‌, ದ.ಕ. ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಸೇರಿದಂತೆ ಅನೇಕ ರಾಜ್ಯ ನಾಯಕರು, ಮಾಜಿ ಸಚಿವರು, ಮಾಜಿ ಶಾಸಕರು, ಮೈಸೂರು ವಿಭಾಗ ವ್ಯಾಪ್ತಿಗೆ ಬರುವ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಬ್ಲಾಕ್‌ ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರು ಭಾಗವಹಿಸಿದ್ದರು.
 

click me!