Karnataka Politics: ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವತ್ಥ್‌ ಯಾಕೆ ಹೆಗಲು ಮುಟ್ಟಿಕೊಳ್ತಾರೆ?: ಡಿಕೆಶಿ ಪ್ರಶ್ನೆ

By Girish GoudarFirst Published May 3, 2022, 7:41 AM IST
Highlights

*  ಎಸ್‌ಐ ಹಗರಣ ತಮ್ಮತ್ತ ತಿರುಗುತ್ತಿದೆ ಎಂದು ಏಕೆ ಗಾಬರಿಯಾಗುತ್ತಾರೆ? 
*  ಸದ್ಯದಲ್ಲೇ ಸಚಿವರ ಹೆಸರು ಬಹಿರಂಗ
*  ನಾನು ಗಡ, ಗಡನೆ ನಡಗುತ್ತಿದ್ದೇನೆ 

ಬೆಂಗಳೂರು(ಮೇ.03): ‘ಕುಂಬಳಕಾಯಿ ಕಳ್ಳ ಎಂದರೆ ಸಚಿವ ಅಶ್ವತ್ಥನಾರಾಯಣ ಏಕೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳುತ್ತಿದ್ದಾರೆ? ಪಿಎಸ್‌ಐ ಅಕ್ರಮ ಪ್ರಕರಣ ಅವರ ಮೇಲೆ ತಿರುಗುತ್ತಿದೆ ಎಂದು ಏಕೆ ಗಾಬರಿ ಆಗುತ್ತಿದ್ದಾರೆ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಅವರು ಅಶ್ವತ್ಥನಾರಾಯಣ್‌(CN Ashwathnarayan) ಅವರಿಗೆ ತಿರುಗೇಟು ನೀಡಿದ್ದಾರೆ.

‘ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ(PSI Recruitment Scam) ಪ್ರಭಾವಿ ಸಚಿವರ ಪಾತ್ರ ಇದೆ ಎಂದು ಮಾಧ್ಯಮಗಳು ಬಿಚ್ಚಿಟ್ಟಿದ್ದವು. ನಾನು ಅದರ ಬಗ್ಗೆ ಹೆಸರು ಹೇಳದೆ ಮಾತನಾಡಿದ್ದೆ. ಆದರೆ, ಕುಂಬಳಕಾಯಿ ಕಳ್ಳ ಎಂದರೆ ಅಶ್ವತ್ಥನಾರಾಯಣ್‌ ಹೆಗಲು ಮುಟ್ಟಿನೋಡಿಕೊಂಡಿದ್ದೇಕೆ?’ ಎಂದು ಪ್ರಶ್ನಿಸಿದ್ದಾರೆ.

Latest Videos

PSI recruitment Scam: ಪಿಎಸ್‌ಐ ನೇಮಕಾತಿ ಕರ್ಮಕಾಂಡ: ಅಡಿಕೆ ತೋಟ ಮಾರಿ 60 ಲಕ್ಷ ರು. ಲಂಚ..!

ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಮಕಾತಿಗೆ ಸಂಬಂಧಿಸಿದಂತೆ ದರ್ಶನ್‌ಗೌಡಗೆ ನೋಟಿಸ್‌ ಜಾರಿ ಮಾಡಿದ್ದೀರಿ. ಆದರೆ ಅವನ ವಿಚಾರಣೆ ಮಾಡಿದ ವರದಿ ಬಂದಿಲ್ಲ. ಆತ ಏಕಾಏಕಿ ಬಿಡುಗಡೆಯಾದ ಎಂದರೆ ಆತ ನಿರ್ದೋಷಿ ಎಂದು ಸಾಬೀತಾಯಿತೇ? ಆತ ವಿಚಾರಣೆ ಮುಕ್ತನಾಗಲು ಯಾರು ಕಾರಣ? ಅವರ ಬಿಡುಗಡೆಗೆ ಒತ್ತಡ ಹಾಕಿದ್ದು ಯಾರು? ಎಲ್ಲವೂ ಬಹಿರಂಗವಾಗಬೇಕಲ್ಲವೇ ಎಂದು ಪ್ರಶ್ನಿಸಿದರು.

ನಾನು ಗಡ, ಗಡನೆ ನಡಗುತ್ತಿದ್ದೇನೆ:

ನನಗೆ ಗೊತ್ತಿರುವ ಪ್ರಕಾರ ಸಚಿವರ ಸಹೋದರ ಅಲ್ಲ ಸಚಿವರ ಸಂಬಂಧಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಇದು ಸತ್ಯವಾಗಿರಬಹುದು ಅಥವಾ ಸುಳ್ಳಾಗಿರಬಹುದು. ತನಿಖೆಯಿಂದಷ್ಟೇ ಗೊತ್ತಾಗಬೇಕು ಎಂದರು. ಈ ವೇಳೆ ಅಶ್ವತ್ಥನಾರಾಯಣ್‌ ಹೆಸರು ಏಕೆ ನೇರವಾಗಿ ಪ್ರಸ್ತಾಪಿಸುತ್ತಿಲ್ಲ ಎಂಬ ಪ್ರಶ್ನೆಗೆ, ಅವರು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು. ಅಲ್ಲಿ ಯಾರೂ ಗಂಡಸರಿಲ್ಲ ಎಂದು ಸವಾಲು ಹಾಕುತ್ತಾರೆ. ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು. ಹೀಗಾಗಿ ನಮಗೆ ಭಯ ಆಗುತ್ತಿದೆ. ಅವರ ಹೆಸರು ಹೇಳಿದ ತಕ್ಷಣ ಗಡಗಡನೆ ನಡುಗುತ್ತಿದ್ದೇವೆ ಎಂದು ವ್ಯಂಗ್ಯವಾಡಿದರು.

ಮುಂದಿನ ಸಿಎಂ ಆಗುವವರು: ಡಿಕೆಶಿ ವ್ಯಂಗ್ಯ

ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ವ್ಯಂಗ್ಯವಾಡಿದ ಡಿ.ಕೆ.ಶಿವಕುಮಾರ್‌, ‘ನನಗೂ ಅನೇಕರು ಫೋನ್‌ ಕರೆ ಮಾಡಿ ಅವರು ಮುಂದೆ ಮುಖ್ಯಮಂತ್ರಿ ಆಗುವವರು, ಅವರ ಹೆಸರು ಎಳೆದು ತರಬೇಡಿ, ಮುಚ್ಚಿಹಾಕಿ ಎಂದು ಹೇಳುತ್ತಿದ್ದಾರೆ ಎಂದರು. ಬೇಕಾದರೆ ನನ್ನ ಫೋನ್‌ ಕರೆ ವಿವರ ಪರಿಶೀಲಿಸಿ. ಮಂಡ್ಯದ ನಾಯಕರೊಬ್ಬರು ನನಗೆ ಕರೆ ಮಾಡಿ ಈ ವಿಚಾರದ ಬಗ್ಗೆ ಮಾತನಾಡಬೇಡಿ’ ಎಂದು ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.

NewsHour ನೇಮಕಾತಿ ಅಕ್ರಮದಲ್ಲಿ ಅಶ್ವತ್ ನಾರಾಯಣ್ ಹೆಸರು, ಕಾಂಗ್ರೆಸ್ ಆರೋಪಕ್ಕೆ ಸಚಿವರು ಕೆಂಡಾಮಂಡಲ!

ಸದ್ಯದಲ್ಲೇ ಸಚಿವರ ಹೆಸರು ಬಹಿರಂಗ

ಪ್ರಕರಣದಲ್ಲಿ ವಿಚಾರಣೆಗೆ ವಶಕ್ಕೆ ಪಡೆದ ಆರೋಪಿಯನ್ನು ಪ್ರಭಾವಿ ಸಚಿವರೊಬ್ಬರು ಫೋನ್‌ ಮಾಡಿ ಬಿಡಿಸಿದ್ದಾರೆ. ಈ ಬಗ್ಗೆ ಸದ್ಯದಲ್ಲೇ ಹೆಸರು ಬಹಿರಂಗಪಡಿಸುತ್ತೇನೆ. ನಮಗೂ ಇಲಾಖೆಯಲ್ಲಿರುವ ಕೆಲವರು ಮಾಹಿತಿ ಕೊಡುತ್ತಾರೆ. ಯಾರು ಕೊಟ್ಟಿದ್ದಾರೆ ಎಂದು ಹೇಳಲಾಗುವುದಿಲ್ಲ. ಸದ್ಯದಲ್ಲೇ ಸಚಿವರ ಹೆಸರೂ ಬಹಿರಂಗಪಡಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

‘ನನ್ನ ವಿರುದ್ಧ ದಾಖಲೆ ಇದ್ದರೆ ಶಿವಕುಮಾರ್‌ ಪ್ರಕಟಿಸಲಿ ಎಂದು ಅಶ್ವತ್ಥನಾರಾಯಣ್‌ ಹೇಳಿದ್ದಾರೆ. ಅವರು ದೊಡ್ಡವರು, ದೊಡ್ಡವರಾಗಬೇಕು ಎಂದುಕೊಂಡಿರುವವರು. ಅವರ ವಿಚಾರವನ್ನು ನಾನು ಬಿಚ್ಚಿಡಲಿಲ್ಲ. ಮಾಧ್ಯಮಗಳು(Media) ಮಾಗಡಿಯ ಮೂವರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಹೇಳಿದಾಗ ಸಂತೋಷವಾಗಿತ್ತು. ಅನಂತರ ನಮ್ಮ ಪಕ್ಷದಲ್ಲಿದ್ದ ಕಾರ್ಯಕರ್ತರ ಕುಟುಂಬದವರು ಆಗಿದ್ದಾರೆ ಎಂದು ಹೇಳಿದ್ದು ಕೇಳಿ ಖುಷಿ ಹೆಚ್ಚಾಯಿತು. ಹೀಗಿರುವಾಗ ಪ್ರಕರಣ ತಮ್ಮ ವಿರುದ್ಧ ತಿರುಗುತ್ತಿದೆ ಎಂದು ಅಶ್ವತ್ಥ ನಾರಾಯಣ ಏಕೆ ಭಾವಿಸಬೇಕು?’ ಎಂದು ಪ್ರಶ್ನಿಸಿದರು.
 

click me!