
ಬೆಂಗಳೂರು/ತಿರುವನಂತಪುರಂ(ಜೂ.04): ನೆರೆಯ ಕೇರಳ ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಹೊರಡಿಸಿರುವ ಶ್ವೇತಪತ್ರವು ಇಡೀ ದೇಶದ ಗಮನ ಸೆಳೆದಿದೆ. ರಾಜ್ಯದ ಬೊಕ್ಕಸಕ್ಕೆ ಬರುವ ಆದಾಯದ ಶೇ. 80ರಷ್ಟು ಭಾಗ ಕೇವಲ ಸಂಬಳ, ಪಿಂಚಣಿ ಮತ್ತು ಸಾಲದ ಬಡ್ಡಿ ಪಾವತಿಗೇ ವ್ಯಯವಾಗುತ್ತಿದೆ ಎಂಬ ಆತಂಕಕಾರಿ ಅಂಶ ಈ ವರದಿಯಿಂದ ಹೊರಬಿದ್ದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕರ್ನಾಟಕದಲ್ಲೂ ಹಣಕಾಸಿನ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂಬ ಕೂಗು ಕೇಳಿಬಂದಿದೆ.
ಕೇರಳ ಸರ್ಕಾರ ಬಿಡುಗಡೆ ಮಾಡಿರುವ ಶ್ವೇತಪತ್ರದ ಪ್ರಕಾರ, ರಾಜ್ಯವು ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಬರುವ ಆದಾಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಉಳಿಯುವುದು ಕೇವಲ ಶೇ. 20ರಷ್ಟು ಮಾತ್ರ. ಈ ಪರಿಸ್ಥಿತಿಯಿಂದ ಹೊರಬರಲು ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಕೇಂದ್ರ ಸರ್ಕಾರದ ಮಾದರಿಯಲ್ಲಿ ಹೆಚ್ಚಿಸಬೇಕು ಎಂದು ವರದಿ ಶಿಫಾರಸು ಮಾಡಿದೆ. ನಿವೃತ್ತಿ ವಯಸ್ಸನ್ನು ಕೇವಲ ಒಂದು ವರ್ಷ ಹೆಚ್ಚಿಸಿದರೂ ರಾಜ್ಯದ ಬೊಕ್ಕಸಕ್ಕೆ ಸುಮಾರು 6,000 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಪ್ರತಿ 5 ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸುವ ಬದಲು, ಕೇಂದ್ರದಂತೆ 10 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುವಂತೆ ಸಲಹೆ ನೀಡಲಾಗಿದೆ.
ಡಿಜಿಟಲೀಕರಣದ ಹೆಸರಿನಲ್ಲಿ ಕೇವಲ ಕಡತಗಳನ್ನು ಆನ್ಲೈನ್ಗೆ ವರ್ಗಾಯಿಸುವುದಷ್ಟೇ ಅಲ್ಲದೆ, ಸಂಪೂರ್ಣ ಆಡಳಿತ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಕೇರಳ ನೂತನ ಮುಖ್ಯಮಂತ್ರಿ ಸತೀಶನ್ ಆದೇಶಿಸಿದ್ದಾರೆ.
ಕೇರಳ ಸರ್ಕಾರದ ಈ ಪಾರದರ್ಶಕ ನಡೆಯನ್ನು ಶ್ಲಾಘಿಸಿರುವ ಕರ್ನಾಟಕದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನೇರ ಸವಾಲು ಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೇರಳದ ಸಿಎಂ ಸತೀಶನ್ ಅವರು ತಮ್ಮ ರಾಜ್ಯದ ನೈಜ ಸ್ಥಿತಿಯನ್ನು ಜನರ ಮುಂದಿಟ್ಟಿದ್ದಾರೆ. ಅದೇ ರೀತಿ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಅವರೂ ಕೂಡ ರಾಜ್ಯದ ಹಣಕಾಸಿನ ಸ್ಥಿತಿಗತಿಯ ಕುರಿತು ತಕ್ಷಣವೇ ಶ್ವೇತಪತ್ರ ಮಂಡಿಸಲಿ" ಎಂದು ಆಗ್ರಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ನೀಡಿರುವ ಆರ್ಥಿಕ ಕೊಡುಗೆ ಅಥವಾ 'ಬಳುವಳಿ' ಏನು ಎಂಬುದು ಜನರಿಗೆ ತಿಳಿಯಬೇಕು. ಸಿದ್ದರಾಮಯ್ಯ ಅವರ ಅವಧಿಯಲ್ಲಿ ರಾಜ್ಯದ ಸಾಲ ಎಷ್ಟು ಹೆಚ್ಚಾಗಿದೆ? ಅವೈಜ್ಞಾನಿಕ ಯೋಜನೆಗಳು ಮತ್ತು ಮತಬ್ಯಾಂಕ್ ರಾಜಕಾರಣದಿಂದ ರಾಜ್ಯದ ಬೊಕ್ಕಸಕ್ಕೆ ಎಷ್ಟು ಹಾನಿಯಾಗಿದೆ? ಮುಂದಿನ ಪೀಳಿಗೆಯ ಮೇಲೆ ಎಷ್ಟು ಸಾಲದ ಹೊರೆ ಹೊರಿಸಲಾಗಿದೆ? ಎಂಬ ಸತ್ಯಾಂಶಗಳು ಹೊರಬರಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.
'ಮುಚ್ಚಿಡಲು ಅಥವಾ ಮರೆಮಾಚಲು ಏನೂ ಇಲ್ಲದಿದ್ದರೆ ಕಾಂಗ್ರೆಸ್ ಸರ್ಕಾರ ಕೂಡಲೇ ವಿಧಾನಸಭೆಯಲ್ಲಿ ಆರ್ಥಿಕ ಶ್ವೇತಪತ್ರ ಮಂಡಿಸಲಿ. ಕನ್ನಡಿಗರಿಗೆ ಸರ್ಕಾರದ ಉತ್ತರದಾಯಿತ್ವ ಬೇಕು. ಸಿದ್ದರಾಮಯ್ಯ ಸರ್ಕಾರ ರಾಜ್ಯಕ್ಕೆ ಬಿಟ್ಟುಹೋಗಿರುವ ನಿಜವಾದ 'ಸಾಕ್ಷಿಗುಡ್ಡೆ' ಏನು ಎಂಬುದು ರಾಜ್ಯದ ಜನತೆಗೆ ತಿಳಿಯಲಿ' ಎಂದು ಅಶೋಕ್ ಕಿಡಿಖಾರಿದ್ದಾರೆ. ಒಟ್ಟಾರೆಯಾಗಿ, ಕೇರಳದ ಆರ್ಥಿಕ ಶ್ವೇತಪತ್ರವು ಈಗ ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.