ವಿಧಾನ ಪರಿಷತ್ ಚುನಾವಣೆ: ಪಟ್ಟಿ ಅಂತಿಮಗೊಳಿಸಲು ಬಿಜೆಪಿ ಕಸರತ್ತು

By Suvarna NewsFirst Published Nov 12, 2021, 5:08 PM IST
Highlights

* ರಂಗೇರಿದ ವಿಧಾನ ಪರಿಷತ್ ಚುನಾವಣೆ
* ಪಟ್ಟಿ ಅಂತಿಮಗೊಳಿಸಲು ಬಿಜೆಪಿ ಕಸರತ್ತು
* ದೆಹಲಿಯಲ್ಲಿ ಹೈಕಮಾಡ್‌ಗೆ ಮನವಿ ಮಾಡಿಬಂದ ಬೊಮ್ಮಾಯಿ

ಬೆಂಗಳೂರು, (ನ.12): ಕರ್ನಾಟಕದಲ್ಲಿ ವಿಧಾನಪರಿಷತ್ ಚುನಾವಣೆಯ (Karnataka Legislative Council) ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. 

ಬಿಜೆಪಿ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಚರ್ಚೆ ಆರಂಭವಾಗಿವೆ. ಕೂಡಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಹೈಕಮಾಂಡ್​ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು‌ ಮನವಿ ಮಾಡಿ ಬಂದಿದ್ದಾರೆ.  ದೆಹಲಿ ಹೋಗಿದ್ದ ವೇಳೆ  ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

Karnataka MLC Election:ಪರಿಷತ್‌ ಚುನಾವಣೆ ಟಿಕೆಟ್‌ಗಾಗಿ ಪೈಪೋಟಿ, ಮೂರು ಪಕ್ಷದಲ್ಲಿ ಶುರುವಾಯ್ತು ಜಟಾಪಟಿ!

 ಅಭ್ಯರ್ಥಿಯನ್ನು ಶೀಘ್ರ ಘೋಷಣೆ ಮಾಡಿದರೆ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಅಭ್ಯರ್ಥಿ ಘೋಷಣೆ ವಿಳಂಬ ಮಾಡಬೇಡಿ ಎಂದು ವಿನಂತಿಸಿದರು. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ನಡೆದಿರುವ ಚರ್ಚೆಯ ಬಗ್ಗೆಯೂ ನಡ್ಡಾ ಅವರಿಗೆ ಬೊಮ್ಮಾಯಿ ವಿವರಿಸಿದರು. ಇನ್ನೆರೆಡು ದಿನಗಳೊಳಗೆ ದೆಹಲಿಯಲ್ಲಿ ವರಿಷ್ಠರ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆಯಿದೆ ತಿಳಿದುಬಂದಿದೆ.

25 ಸ್ಥಾನಗಳಲ್ಲಿ 15 ಸ್ಥಾನ ಗೆಲ್ಲುವ ವಿಶ್ವಾಸ
ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿರುವ ಮೇಲ್ಮನೆ ಚುನಾವಣೆಯ 25 ಸ್ಥಾನಗಳಲ್ಲಿ ಬಿಜೆಪಿಯು 15 ಸ್ಥಾನ ಗೆಲ್ಲುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ವಿಶ್ವಾಸ ವ್ಯಕ್ತಪಡಿಸಿದರು.

ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನ. 20 ರಂದು ಬಿಎಸ್ ವೈ ನೇತೃತ್ವದಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಸಮಾವೇಶ ನಡೆಯಲಿದೆ. ಗ್ರಾ.ಪಂ‌. ಸದಸ್ಯರಿಂದ ಸಂಸದರವರೆಗೂ ಮತದಾನ ಅರ್ಹತೆ ಇರುವ ಬಹುತೇಕ ಸದಸ್ಯರು ಬಿಜೆಪಿ ಪಕ್ಷದವರೇ ಇದ್ದು, ಇತರರೂ ಬೆಂಬಲ ನೀಡಲಿದ್ದಾರೆ. ಹೀಗಾಗಿ ಗೆಲುವು ಸುಲಭವಾಗಲಿದೆ ಎಂದರು.

ವಿಜಯಪುರ-ಬಾಗಲಕೋಟ ಅವಳಿ ಜಿಲ್ಲೆಯಲ್ಲಿ ದ್ವಿಸದಸ್ಯತ್ವ ಕ್ಷೇತ್ರಗಳಿದ್ದು, ಒಂದು ಸ್ಥಾನಕ್ಕೆ ಮಾತ್ರ ಅಭ್ಯರ್ಥಿ ಹಾಕುವ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ಇಂದು ಅಥವಾ ನಾಳೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

1 ಸ್ಥಾನಕ್ಕೆ ವಾಟಳ್ ಮನವಿ
ವಿಧಾನ ಪರಿಷತ್ ಚುನಾವಣೆ (Karnataka MLC Election) ಸಮೀಪಿಸುತ್ತಿದ್ದು, ಪಕ್ಷಗಳಲ್ಲಿ , ರಾಜಕೀಯ (Politics) ಮುಖಂಡರಲ್ಲಿ ಪೈಪೋಟಿ ಹೆಚ್ಚಾಗಿದೆ. ಇನ್ನು ಕಾಂಗ್ರೆಸ್ (Congress) ನವರು ಮೈಸೂರು (Mysuru) ಭಾಗದಲ್ಲಿ ನನಗೆ ಒಂದು ಸ್ಥಾನ ಬಿಟ್ಟು ಕೊಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (vatal Nagaraj) ಮನವಿ ಮಾಡಿದ್ದಾರೆ.

 ಹಿಂದಿನಿಂದಲೂ ನಾನು ಕಾಂಗ್ರೆಸ್‌ಗೆ ಬೆಂಬಲಿಸುತ್ತಾ ಬಂದಿದ್ದೇನೆ.  ಎಸ್.ಎಂ ಕೃಷ್ಣ (SM Krishna), ರಾಜಶೇಖರ ಮೂರ್ತಿ, ಧೃವನಾರಾಯಣ್ ಅವರಿಗೆ ಮತ ಹಾಕಿದ್ದೇನೆ  ಎಂದಿದ್ದಾರೆ.

ಸಿದ್ದರಾಮಯ್ಯ (siddaramaiah) ಅಧಿಕಾರದಲ್ಲಿ ಇದ್ದಾಗ ನನ್ನನ್ನ ಪರಿಷತ್ ಗೆ ನಾಮನಿರ್ದೇಶನ ಮಾಡಲು ಮೈಸೂರು (mysuru) ಭಾಗದ ಜನರು ಒತ್ತಾಯ ಮಾಡಿದ್ದರು. ಹೀಗಾಗಿ  ಮೈಸೂರಿನ ಎರಡು ಸ್ಥಾನಗಳಲ್ಲಿ ನನಗೆ ಒಂದು ಸ್ಥಾನವನ್ನ ಕೊಟ್ಟು ಬೆಂಬಲಿಸಬೇಕು. ನಾನು 60 ವರ್ಷಗಳಿಂದ ಕನ್ನಡ ಪರ ಹೋರಾಟಗಾರ. ನಾನು ಕಾಂಗ್ರೆಸ್ ನಿಂದ ಟಿಕೇಟ್ ಕೇಳುವುದು ಸೂಕ್ತವಲ್ಲ ಎಂದು ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಹೇಳಿದರು. 

ಚುನಾವಣೆ ದಿನಾಂಕ
ರಾಜ್ಯ ಮೇಲ್ಮನೆಯ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಿಲಿದೆ. ನವೆಂಬರ್ 16ರಂದು ಮೇಲ್ಮನೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದೆ. 

ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ನವೆಂಬರ್ 26 ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿದೆ. ಡಿಸೆಂಬರ್ 10 ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಕೋಲಾರ, ಕೊಡಗು ಮತ್ತು ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳಿಂದ ಚುನಾವಣೆ ನಡೆಯಲಿದೆ.
 

click me!