MLC Election:ಹೊಂದಾಣಿಕೆ ಸುದ್ದಿ ಮಧ್ಯೆಯೇ ಮಂಡ್ಯ ಅಖಾಡಕ್ಕಿಳಿದ ಬಿಜೆಪಿ ದಂಡು

By Suvarna NewsFirst Published Dec 5, 2021, 5:17 PM IST
Highlights

* ಹೊಂದಾಣಿಕೆ ಸುದ್ದಿ ಮಧ್ಯೆಯೇ ಮಂಡ್ಯ ಅಖಾಡಕ್ಕಿಳಿದ ಬಿಜೆಪಿ ದಂಡು
* ಮಂಡ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಗ್ರಾಮ ಪಂಚಾಯಿತಿ ಸದಸ್ಯರ ಸಮಾವೇಶ
* ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಪರ ರಾಜ್ಯ ನಾಯಕರ ಪ್ರಚಾರ

ಮಂಡ್ಯ, (ಡಿ.05): ವಿಧಾನಪರಿಷತ್‌ ಚುನಾವಣೆಯಲ್ಲಿ (MLC Election) ಬಿಜೆಪಿ-ಜೆಡಿಎಸ್‌ (BJP-JDS) ಹೊಂದಾಣಿಕೆ ಮಾಡಿಕೊಂಡಿವೆ ಎಂಬ ಸುದ್ದಿಗಳು ಹರಿದಾಡುತ್ತಿರುವುದರ ನಡುವೆಯೂ ಮಂಡ್ಯ ಅಖಾಡಕ್ಕೆ ಬಿಜೆಪಿ ಧುಮುಕಿದೆ.

ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಭಾರೀ ಪ್ರಚಾರದಲ್ಲಿ ತೊಡಗಿದ್ದು, ಜೆಡಿಎಸ್‌-ಕಾಂಗ್ರೆಸ್‌ ತೀವ್ರ ಪೈಪೋಟಿ ನೀಡುವ ರಣೋತ್ಸಾಹ ಪ್ರದರ್ಶಿಸುತ್ತಿದ್ದಾರೆ. ಸಚಿವ ಕೆ.ಸಿ.ನಾರಾಯಣಗೌಡರು(KC Narayanagouda) ಚುನಾವಣಾ ಅಖಾಡದಲ್ಲಿ ಸಾರಥಿಯಾಗಿ ನಿಂತು ಮಂಜು ಅವರಿಗೆ ಬಲ ತುಂಬುತ್ತಿದ್ದಾರೆ.

ಕೆ.ಆರ್‌.ಪೇಟೆ ಉಪ ಚುನಾವಣೆಯ ನಂತರ ಮತ್ತೊಮ್ಮೆ ಜಿಲ್ಲೆಯಲ್ಲಿ ಕಮಲ ಅರಳಿಸಲು ಕಸರತ್ತು ನಡೆಸುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲೂ ಬಿಜೆಪಿ ತೃಪ್ತಿದಾಯಕ ಮತಗಳನ್ನು ಹೊಂದಿದ್ದು, ಬಿಜೆಪಿ ಪಕ್ಷ ಅಧಿಕಾರದಲ್ಲಿರುವುದರಿಂದ ಗ್ರಾಪಂ ಸದಸ್ಯರು ಪಕ್ಷವನ್ನು ಕೈಹಿಡಿಯುವರೆಂಬ ನಂಬಿಕೆ ಅವರಲ್ಲಿದೆ. ಈಗಾಗಲೇ ಬೂಕಹಳ್ಳಿ ಮಂಜು ಅವರು ಮೂರ್ನಾಲ್ಕು ಬಾರಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಭೇಟಿಯಾಗಿ ಬಂದಿರುವ ಅವರು ಮತದಾರರು ನನ್ನ ಪರವಾಗಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ.

Karnataka MLC Poll: ಜೆಡಿಎಸ್‌ ಭದ್ರಕೋಟೆಗೆ ನುಗ್ಗಿದ 'ಗೂಳಿ'ಗೌಡ!

ಇನ್ನು ಇಂದು(ಡಿ.05) ಬಿಜೆಪಿ ದಂಡು ಮಂಡ್ಯ ಅಖಾಡಕ್ಕಿಳಿದಿದೆ. ಸಚಿವರಾದ, ಎಸ್. ಟಿ. ಸೋಮಶೇಖರ್,  ನಾರಾಯಣಗೌಡ, ಮಂಡ್ಯ ಡಿಸಿಸಿ  ಬ್ಯಾಂಕ್ ಅಧ್ಯಕ್ಷ ಉಮೇಶ, ಸ್ಥಳೀಯ ಮುಖಂಡರು ಹಾಗೂ ಪಕ್ಷದ ಪ್ರಮುಖರು  ತಮ್ಮ ಮಂಜು ಪರವಾಗಿ ಭರ್ಜರಿ ಪ್ರಚಾರ ಮಾಡಿದರು. 

 ಜಿಲ್ಲೆಯಲ್ಲಿ ವಿಶ್ವೇಶ್ವರಯ್ಯ ನಾಲೆಯನ್ನು ಅಭಿವೃದ್ಧಿಗೊಳಿಸಿ ನೀರು ತಲುಪದಿರುವ ಭಾಗಗಳಿಗೆ ನೀರು ಹರಿಯುವಂತೆ ಮಾಡಲು ಸರ್ಕಾರವು ಕ್ರಮ ವಹಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಬಿಜೆಪಿ ಮುಖಂಡ ಡಾ.ಸಿ.ಎನ್.ಅಶ್ವತ್ಥನಾರಾಯಣ ಭಾನುವಾರ ಹೇಳಿದರು. 

ನಗರದಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರಾರ್ಥವಾಗಿ ನಡೆದ ಸ್ಥಳೀಯ ಸಂಸ್ಥೆಗಳ ಗ್ರಾಮ ಪಂಚಾಯಿತಿ ಸದಸ್ಯರ ಸಮಾವೇಶದಲ್ಲಿ ಮಾತನಾಡಿದ ಅವರು, ಬೇರೆ ಪಕ್ಷಗಳು ಮಂಡ್ಯ ಜಿಲ್ಲೆಯ ಅಭಿವೃದ್ಧಿ ಅವಕಾಶಗಳನ್ನು ನಾಶ ಮಾಡಿವೆ ಎಂದರು. 

ಪಕ್ಷದ ಅಭ್ಯರ್ಥಿ ಬಿ.ಸಿ.ಮಂಜು ಅವರ ಪರವಾಗಿ ಪ್ರಚಾರ ಭಾಷಣ ಮಾಡಿದ ಅವರು,”ಉಸ್ತುವಾರಿ ಸಚಿವರಾದ ನಾರಾಯಣ ಗೌಡರ ಮುಂದಾಳತ್ವದಲ್ಲಿ ಜಿಲ್ಲೆಯಲ್ಲಿ ಶೈಕ್ಷಣಿಕ, ಆರೋಗ್ಯ, ಕೈಗಾರಿಕೆ ಸೇರಿದಂತೆ ಸರ್ವಾಂಗೀಣ ಪ್ರಗತಿಗಾಗಿ ಕೆಲಸಗಳನ್ನು ಮಾಡಲಾಗುತ್ತದೆ. ಯಾವ ಭಾಗಗಳಿಗೆ ನೀರಾವರಿ ಸೌಲಭ್ಯ ಇಲ್ಲವೋ ಅಲ್ಲಿಗೆ ಅದನ್ನು ಒದಗಿಸಲಾಗುತ್ತದೆ. ಜೊತೆಗೆ, ಏತ ನೀರಾವರಿ ಸೌಲಭ್ಯವನ್ನು ಹೆಚ್ಚಿಸಲಾಗುವುದು. ಷುಗರ್ ಮಿಲ್ ವಿಚಾರ ಸೇರಿದಂತೆ ಜಿಲ್ಲೆಯ ಪ್ರತಿಯೊಂದು ವಿಷಯದ ಬಗ್ಗೆಯೂ ನಾರಾಯಣ ಗೌಡರು ಪ್ರಬಲ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ” ಎಂದರು. 

ರಾಜ್ಯದಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಕೋವಿಡ್ ಸವಾಲು ಎದುರಾಗಿದ್ದು, ಅದರ ನಡುವೆಯೂ ಸರ್ಕಾರ ಜನಪರ ಕೆಲಸಗಳನ್ನು ಮಾಡುತ್ತಿದೆ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಂತೆಯೇ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಜನಸ್ನೇಹಿ ಆಡಳಿತ ನೀಡಲು ಒತ್ತು ನೀಡಿದ್ದಾರೆ ಎಂದು ಅಶ್ವತ್ಥ ನಾರಾಯಣ ವಿವರಿಸಿದರು. 

ಈ ಸಮಾವೇಶಕ್ಕೆ ಅತ್ಯಧಿಕ ಜನಬೆಂಬಲ ಕಂಡುಬಂತು, ನಿಕಟಪೂರ್ವ ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪನವರು ದೀಪ ಬೆಳಗಿಸಿ, ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಮಾವೇಶವನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚಿಸಿದರು. 

ಎಲೆಚಾಕನಹಳ್ಳಿ ಬಸವರಾಜ ಸೇರಿದಂತೆ ‌ಹಲವರು‌ ಈ ಸಂದರ್ಭದಲ್ಲಿ ಬಿಜೆಪಿ ಸೇರಿದರು. 

ಜಿದ್ದಾಜಿದ್ದಿ
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ( MLC Election) ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್‌ (JDS) ಮತ್ತು ಕಾಂಗ್ರೆಸ್‌ (Congress) ಅಭ್ಯರ್ಥಿಗಳು ಮತಬೇಟೆಯಲ್ಲಿ ಜಿದ್ದಾ ಜಿದ್ದಿನ ಪೈಪೋಟಿಗಿಳಿದಿದ್ದಾರೆ. ಗ್ರಾಪಂ ಸದಸ್ಯರನ್ನೇ ಗುರಿಯಾಗಿಸಿಕೊಂಡು ಚುನಾವಣಾ (Election) ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಎರಡೂ ಪಕ್ಷಗಳು ಗೆಲುವಿಗೆ ಶತ ಪ್ರಯತ್ನ ನಡೆಸುತ್ತಿವೆ.ಜೆಡಿಎಸ್‌ , ಕಾಂಗ್ರೆಸ್‌ ಪಕ್ಷಗಳಿಗೆ ಸರಿಸಮನಾಗಿ ಪೈಪೋಟಿ ನೀಡುವುದಕ್ಕೆ ಮುಂದಾಗಿರುವ ಬಿಜೆಪಿ, ಅಬ್ಬರದ ಚುನಾವಣಾ ಪ್ರಚಾರದೊಂದಿಗೆ ಮುನ್ನಡೆಯುತ್ತಿದೆ. ಸಚಿವ ಕೆ.ಸಿ.ನಾರಾಯಣಗೌಡರು ಅಭ್ಯರ್ಥಿಯೊಂದಿಗೆ ಎಲ್ಲೆಡೆ ಪ್ರಚಾರಕ್ಕಿಳಿದಿದ್ದು ಹೆಚ್ಚಿನ ಮತಗಳನ್ನು ಕಮಲ (BJP) ಬುಟ್ಟಿಗೆ ಬೀಳಿಸಿಕೊಳ್ಳುವುದಕ್ಕೆ ತೀವ್ರ ಹೋರಾಟ ನಡೆಸುತ್ತಿದ್ದಾರೆ.
 

click me!