ಕಾಂಗ್ರೆಸ್ ಇಡೀ ದೇಶದಲ್ಲಿ ಸೋತಿದೆ. ರಾಜ್ಯದ ಆರ್ಥಿಕ ಸ್ಥಿತಿ ಹಾಳು ಮಾಡದೇ ಜನರ ಕಲ್ಯಾಣ ಮಾಡಲಿ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು (ಮೇ 14): ಕಾಂಗ್ರೆಸ್ ಇಡೀ ದೇಶದಲ್ಲಿ ಸೋತಿದೆ. ರಾಜ್ಯದ ಆರ್ಥಿಕ ಸ್ಥಿತಿ ಹಾಳು ಮಾಡದೇ ಜನರ ಕಲ್ಯಾಣ ಮಾಡಲಿ. ಮೋದಿಯವರು ಕೇವಲ ಇಲ್ಲಿ ಪ್ರಚಾರಕ್ಕೆ ಬಂದಿದ್ದರು, ಇದು ಅವರ ಸೋಲಲ್ಲ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಚೇರಿಯಲ್ಲಿ ಪ್ರಮುಖರು ಎಲ್ಲರು ಸೇರಿ, ಬಹಳ ದೀರ್ಘವಾಗಿ ಫಲಿತಾಂಶದ ಬಗ್ಗೆ ಚರ್ಚೆ ಮಾಡಿದ್ದೇವೆ. ಪಲಿತಾಂಶದ ಬಗ್ಗೆ ಬೇರೆ ಬೇರೆ ಕಡೆಯಿಂದ ಇನ್ನಷ್ಟು ಮಾಹಿತಿ ತರಿಸಿಕೊಂಡು ಚರ್ಚೆ ಮಾಡುತ್ತೇವೆ. ಒಟ್ಟಾರೆ ಪಲಿತಾಂಶದ ಬಗ್ಗೆ ಹಾಗೂ ವಿಧಾನಸಭೆ ಕ್ಷೇತ್ರವಾರು ಪರಾಮರ್ಶೆ ಮಾಡಬೇಕಿದೆ. ನಮ್ಮ ಬಿಜೆಪಿ ಅಧ್ಯಕ್ಷರು ಇನ್ನು ಮೂರು ನಾಲ್ಕು ದಿನಗಳೊಳಗೆ ಚುನಾಯಿತ ಪ್ರತಿನಿಧಿಗಳ ಸಭೆ ಕರೆಯುತ್ತಿದ್ದಾರೆ. ಮರುದಿನ ಎಲ್ಲಾ ಅಭ್ಯರ್ಥಿಗಳ ಸಭೆ ಕರೆದು ಚರ್ಚೆ ಮಾಡಲಿದ್ದು, ಅಲ್ಲಿ ಕೂಲಂಕುಷವಾಗಿ ಚರ್ಚೆ ಮಾಡಿ, ಯಾವ ರೀತಿ ಒಗ್ಗಟ್ಡಾಗಿ ಪಕ್ಷ ಬಲವರ್ಧನೆ ಮಾಡಬೇಕೆಂದು ಚರ್ಚೆ ಮಾಡುತ್ತೇವೆ. ನಮಗೆ ಪಕ್ಷ ಸಂಘಟನೆಗೆ ವಿಶ್ರಮ ಇರುವುದಿಲ್ಲ. ಲೋಕಸಭೆ ಚುನಾವಣೆಗೆ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಬಿಜೆಪಿಯ ಸೋಲು ಮೋದಿಯ ಸೋಲು ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಅವರು, ಕಾಂಗ್ರೆಸ್ ನ ನಾಯಕತ್ವ ಇಡೀ ದೇಶದಲ್ಲಿ ಸೋತಿದೆ. ಮೋದಿಯವರು ರಾಷ್ಟ್ರೀಯ ನಾಯಕರು. ಇಲ್ಲಿ ಮೋದಿಯವರು ಪ್ರಚಾರಕ್ಕಷ್ಟೇ ಬಂದಿದ್ದರು. ಇದು ಅವರ ಸೋಲು ಅನ್ನುವುದು ಸರಿಯಲ್ಲ. ಕಾಂಗ್ರೆಸ್ ನಲ್ಲಿ ಸಿಎಂಗಾಗಿ ಸಿದ್ದು ಡಿಕೆಶಿ ನಡುವೆ ಫೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರಿಗೂ ಶುಭಾಶಯ ಕೋರಿದ ಬೊಮ್ಮಾಯಿಯವರು, ನಗುತ್ತಲೇ ಅವರಿಬ್ಬರೂ ಆಲ್ ದಿ ಬೆಸ್ಟ್ ಎಂದರು.
ಪಕ್ಷಕ್ಕೆ ಹಿನ್ನೆಡೆ ಜವಬ್ದಾರಿ ನಾನೇ ಹೊರುತ್ತೇನೆ: ಬೆಂಗಳೂರು: ರಾಜ್ಯದ ಆರ್ಥಿಕ ಸ್ಥಿತಿ ಹಾಳು ಮಾಡದೇ ಜನರ ಕಲ್ಯಾಣ ಆಗಲಿ. ಪಕ್ಷಕ್ಕೆ ಆದ ಹಿನ್ನೆಡೆಯ ಜವಾಬ್ದಾರಿ ನಾನೇ ಹೊರುತ್ತೇನೆ. ವಿರೋಧ ಪಕ್ಷದಲ್ಲಿದ್ದು ಸಮರ್ಪಕವಾಗಿ ಕೆಲಸ ಮಾಡುತ್ತೇವೆ. ರಾಜ್ಯಪಾಲರ ಭೇಟಿ ಮಾಡಿ ರಾಜೀನಾಮೆ ನೀಡಿದ್ದೇನೆ. ಜನರ ತೀರ್ಪನ್ನು ಗೌರವಯುತವಾಗಿ ಒಪ್ಪಿಕೊಂಡಿದ್ದೇವೆ. ಪಕ್ಷಕ್ಕೆ ಆದ ಹಿನ್ನೆಡೆಯ ಜವಬ್ದಾರಿ ನಾನೇ ಹೊರುತ್ತೇನೆ. ಕಳೆದ ಬಾರಿ ನನಗೆ 104 ಸೀಟು ಬಂದಿತ್ತು. ಈ ಬಾರಿ ಪರ್ಸೆಂಟೇಜ್ ಜಾಸ್ತಿ ಬಂದರು, ಕಡಿಮೆ ಸೀಟು ಬಂದಿವೆ.ಏನೇ ಆಗಲಿ ಸೋಲು ಸೋಲು. ನಾವು ಇದರ ಬಗ್ಗೆ ಆತ್ಮವಲೋಕನ ಮಾಡಿ, ಎಲ್ಲಿ ತಪ್ಪು ಆಗಿದೆ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಮ್ಮದು ಒಂದು ರಾಷ್ಟ್ರೀಯ ಪಕ್ಷ. ನಾವು ಕೇವಲ ಚುನಾವಣಗೆ ಮಾತ್ರ ಕೆಲಸ ಮಾಡಲ್ಲ. ರಾಷ್ಟ್ರದ ನಿರ್ಮಾಣಕ್ಕೆ ಕೆಲಸ ಮಾಡುತ್ತೇವೆ. ಇನ್ನೇನು ಕೇವಲ 8 ರಿಂದ 10 ತಿಂಗಳಲ್ಲಿ ಲೋಕಸಭೆ ಚುನಾವಣೆ ಬರುತ್ತಿದೆ. ಆ ಚುನಾವಣೆಗೆ ಪಕ್ಷ ಗಟ್ಟಿಗೊಳಿಸುವ ಕೆಲಸ ಮಾಡುತ್ತೇವೆ. ಈ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ. ನಾವು ಹಿಂದೆ ಎಷ್ಟೋ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ನೋಡಿದ್ದೇವೆ. ಸೋಲಿಗೆ ಹಲವಾರು ರೀತಿಯ ಕಾರಣಗಳು ಇವೆ. ಅವುಗಳನ್ನು ಎಲ್ಲವನ್ನೂ ಕುಳಿತು ಚರ್ಚೆ ಮಾಡುತ್ತೇವೆ. ಏನು ವ್ಯತ್ಯಾಸ ಆಗಿದೆ, ಎಲ್ಲಿ ಏನಾಗಿದೆ ಎಂದು ಚರ್ಚಿಸಿ, ಆಗಿದ್ದ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
Karnataka Election Results 2023: ಡಿಕೆಶಿ ಬರ್ತಡೇಗೆ ಸೋನಿಯಾ ಗಾಂಧಿ ಬಂಪರ್ ಗಿಫ್ಟ್, ಸಿಗುತ್ತಾ ಸಿಎಂ ಕುರ್ಚಿ!
ಸುದೀಪ್ ರಾಜಕಾರಣಿ ಅಲ್ಲ: ಸೋಲಿಗೆ ಅವರನ್ನು ಹೊಣೆ ಅನ್ನುವುದು ಸರಿಯಲ್ಲ. ನಾನು ಈಗಾಗಲೇ ಹೇಳಿದ್ದೇನೆ. ಈ ಸೋಲಿಗೆ ನಾನೇ ಹೊಣೆ ಹೊರುತ್ತೇನೆ. ನಾವು ಕರ್ನಾಟಕದ ಜನತೆಯ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇವೆ. ನಾವು ನಮ್ಮ ತಪ್ಪುಗಳನ್ನು ವಿಶ್ಲೇಷಿಸಿ, ಸರಿಪಡಿಸಿಕೊಂಡು, ಪಕ್ಷವನ್ನು ಪುನಃ ಸಂಘಟಿಸಿ, ಸಂಸತ್ ಚುನಾವಣೆಯ ವೇಳೆಯಲ್ಲಿ ಮತ್ತೊಮ್ಮೆ ಪುನರಾಗಮಿಸುತ್ತೇವೆ.