CLP meeting in Karnataka: ಶಾಸಕಾಂಗ ಸಭೆಯಲ್ಲಿ ಸಿದ್ದು- ಡಿಕೆಶಿ ವಾಗ್ವಾದ, ವೀಕ್ಷಕರ ವಿರುದ್ಧ ತಿರುಗಿಬಿದ್ದ ಶಾಸಕರು

By Sathish Kumar KHFirst Published May 14, 2023, 11:10 PM IST
Highlights

ಕಾಂಗ್ರೆಸ್‌ ಸಿಎಂ ಆಯ್ಕೆಗೆ ನಡೆಸಲಾಗುತ್ತಿರುವ ಶಾಸಕಾಂಗ ಸಭೆಯಲ್ಲಿ ಎಐಸಿಸಿ ವೀಕ್ಷಕರ ವಿರುದ್ಧವೇ ಶಾಸಕರು ತಿರುಗಿ ಬಿದ್ದಿದ್ದಾರೆ. ಜೊತೆಗೆ, ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್‌ ವಾಗ್ವಾದ ನಡೆಸಿದ್ದಾರೆ.

ಬೆಂಗಳೂರು (ಮೇ 14): ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆಯ ಕುರಿತು ಒಮ್ಮತ ಮೂಡದ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ಎಐಸಿಸಿ ವೀಕ್ಷಕರು ಶಾಸಕರಿಂದ ಮೌಖಿಕ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಮೌಖಿಕ ಅಭಿಪ್ರಾಯ ಸಂಗ್ರಹ ಬೇಡವೆಂದು ಹೇಳಿದ್ದಾರೆ. ನಂತರ ಸಿದ್ದರಾಮಯ್ಯ ಎದ್ದುನಿಂತು ಪ್ರಜಾಪ್ರಭುತ್ವದ ಮಾದರಿಯಲ್ಲಿ ಶಾಸಕರಿಗೆ ಗೌಪ್ಯವಾಗಿ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕು ಎಂದ ಕೂಡಲೇ ಡಿಕೆಶಿವಕುಮಾರ್‌ ಆಕ್ಷೇಪ ವ್ಯಕ್ತಪಡಿಸಿ ವಾಗ್ವಾದ ನಡೆಸಿದ್ದಾರೆ.

ಭಾನುವಾರ ಸಂಜೆಯಿಂದಲೇ ಆರಂಭವಾದ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಎಲ್ಲ ಶಾಸಕರು ಒಮ್ಮತದ ನಿರ್ಣಯಕ್ಕೆ ಬರದ ಹಿನ್ನೆಲೆಯಲ್ಲಿ "ಎಲ್ಲ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್‌ ಆಯ್ಕೆ ಮಾಡುವ ಮುಖ್ಯಮಂತ್ರಿಗೆ ನಮ್ಮ ಬೆಂಬಲವಿದೆ" ಎಂದು ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಕೇಂದ್ರದಿಂದ ಆಗಮಿಸಿದ ಎಐಸಿಸಿ ಮುಖಂಡ ಸುಶೀಲ್‌ ಕುಮಾರ್‌ ಸಿಂಧೆ, ರಾಜ್ಯ ಕಾಂಗ್ರಸ್‌ ಉಸ್ತುವಾರಿ ವೇಣುಗೋಪಾಲ್‌ ಹಾಗೂ ಕಾಂಗ್ರೆಸ್‌ ಚುನಾವಣಾ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸೇರಿ ಎಲ್ಲ ಶಾಸಕರ ಮೌಖಿಕ ಅಭಿಪ್ರಾಯ ಪಡೆಯಲಾಗುತ್ತಿತ್ತು.

ಸಿಎಂ ಆಯ್ಕೆಗೆ ಸಿಗದ ಒಮ್ಮತ: ನಾಳೆ ಮತ್ತೊಮ್ಮೆ ಶಾಸಕರ ಅಭಿಪ್ರಾಯ ಸಂಗ್ರಹ

ವೀಕ್ಷಕರ ವಿರುದ್ಧ ತಿರುಗಿಬಿದ್ದ ಶಾಸಕರು:  ಮೌಖಿಕ ಅಭಿಪ್ರಾಯ ಕೊಡಲೊಪ್ಪದೇ ವೀಕ್ಷಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಎಐಸಿಸಿ ವೀಕ್ಷಕರಿಂದ ಕೆಲವು ಹೊಸ ಶಾಸಕರಿಂದ ಮೌಖಿಕ ಅಭಿಪ್ರಾಯ ಸಂಗ್ರಹ ಮಾಡಿದ ನಂತರ, ಹಿರಿಯ ನಾಯಕರು ಮೌಖಿಕವಾಗಿ ಅಭಿಪ್ರಾಯ ಸಂಗ್ರಹ ಬೇಡವೆಂದು ಹೇಳಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ಕೃಷ್ಣಬೈರೇಗೌಡ ಶಾಸಕರ ನಡುವೆ ಭಿನ್ನಾಭಿಪಗ್ರಾಯ ಮೂಡುವುದನ್ನು ತಡೆಯಬೇಕು ಎಂದು ಹೇಳಿದರು. ಆಗ, ಹೆಚ್.ಕೆ. ಪಾಟೀಲ್‌ ಅವರು ಯಾವುದೇ ಅಭಿಪ್ರಾಯ ಸಂಗ್ರಹ ಮಾಡದೇ ಹೈಕಮಾಂಡ್‌ ಆಯ್ಕೆಗೆ ಕಳಿಸಿ. ನಾವು ಅದಕ್ಕೆ ಬದ್ಧವೆಂದು ಹೇಳುತ್ತಾರೆ.

ಏನೇ ಮಾಡಿದರೂ ಪ್ರಜಾಪ್ರಭುತ್ವ ಮಾದರಿಯಲ್ಲಿ ಮಾಡಿ:  ದೆಹಲಿಗೆ ಹೋಗಿ ಹೈಕಮಾಂಡ್‌ ತೀರ್ಮಾನ ಮಾಡಿಕೊಂಡು ಬನ್ನಿ ಎಂದು ಹೇಳಿದ ಹೆಚ್.ಕೆ. ಪಾಟೀಲ್‌  ಮಾತಿಗೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಪ್ರಜಾಪ್ರಬುತ್ವದಲ್ಲಿ ಅವಕಾಶ ಇರುವ ಮಾದರಿಯಲ್ಲಿಯೇ ಮುಖ್ಯಮಂತ್ರಿ ಆಯ್ಕೆಗೆ ಅವಕಾಶ ಮಾಡಿಕೊಡಬೇಕು. ಗೌಪ್ಯ ಮತದಾನಕ್ಕೆ ಅವಕಾಶ ಮಾಡಿಕೊಡಿ. ಚೀಟಿಯನ್ನು ಬರೆದು ಹಾಕಿ ಅಭಿಪ್ರಾಯ ನೀಡುವಂತೆ ಸೂಚಿಸಿದರು. ಆದರೆ, ಸಿದ್ದರಾಮಯ್ಯ ಮಾತಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್‌ ಕೆಲ ಹೊತ್ತು ಸಿದ್ದರಾಮಯ್ಯನೊಂದಿಗೆ ವಾಗ್ವಾದ ನಡೆದಿದರು.

ನಮ್ಮ ಮುಂದೆಯೇ ಮತದಾನ ನಡೆಸಿ ಎಣಿಕೆ ಮಾಡಿ: ಇನ್ನು ವಾಗ್ವಾದದ ನಂತರವೂ ಪಟ್ಟು ಬಿಡದ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಅವಕಾಶ ಇರುವಂತೆ ಎಲ್ಲ ಶಾಸಕರು ಗೌಪ್ಯವಾಗಿ ಸಿಎಂ ಆಯ್ಕೆಯ ಬಗ್ಗೆ ಮತದಾನವನ್ನು ಮಾಡಲಿ. ಮೊದಲನೆಯದಾಗಿ ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟು, ನಂತರ ಪುರುಷರಿಂದ ಮತದಾನವಾಗಲಿ. ಇನ್ನು ಎಲ್ಲ ಮತಗಳನ್ನು ನಮ್ಮ ಮುಂದೆಯೇ ಎಣಿಕೆ ಮಾಡಿ, ಯಾರಿಗೆ ಎಷ್ಟು ಮತಗಳು ಬಂದಿವೆ ಎನ್ನುವುದನ್ನು ತಿಳಿಸಬೇಕು. ನಂತರ ಈ ವರದಿಯನ್ನು ಹೈಕಮಾಂಡ್‌ಗೆ ಕಳುಹಿಸಬೇಕು ಎಂದು ಪಟ್ಟು ಹಿಡಿದರು. ಇಬ್ಬರ ಕಿತ್ತಾಟಕ್ಕೆ ಬೇಸತ್ತ ಕೆಲ ಹಿರಿಯ ಶಾಸಕರು ಸಭೆಯಲ್ಲಿ ಅಭಿಪ್ರಾಯ ಚೀಟಿ ಹಾಕಿ ಹೊರನಡೆದರು.

ವೀಕ್ಷಕರ ವರದಿ ಆಧರಿಸಿ ಹೈಕಮಾಂಡ್‌ನಿಂದ ಸಿಎಂ ಆಯ್ಕೆ! ನಾಳೆಯೇ ತೀರ್ಮಾನ

ಲೆಫ್ಟ್‌ ಟು ಹೈಕಮಾಂಡ್‌ ಎಂದು ಬರೆಯಲು ಅವಕಾಶ: ಮೌಖಿಕ ಅಭಿಪ್ರಾಯ ಸಂಗ್ರಹಕ್ಕೆ ಕೆಲ ಶಾಸಕರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೌಖಿಕ ಅಭಿಪ್ರಾಯ ದಾಖಲಿಸುವುದು ಹೇಗೆ ಎನ್ನುವ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿರಿಯ ಶಾಸಕರ ಆಕ್ಷೇಪ ವ್ಯಕ್ತವಾಗಿದೆ. ಚೀಟಿಯಲ್ಲಿ ಅಭಿಪ್ರಾಯ ‌ಬರೆದು ತಿಳಿಸುವಂತೆ ಸೂಚನೆ ನೀಡಲಾಗುತ್ತಿದೆ. ಚೀಟಿಯಲ್ಲಿ ಅಭಿಪ್ರಾಯ ಬರೆದು ಬಾಕ್ಸ್ ಗೆ ಹಾಕುತ್ತಿರುವ ಶಾಸಕರು. ಆದರೆ, ಶಾಸಕರು ಅಭಿಪ್ರಾಯ ಸಂಗ್ರಹಣೆ ವೇಳೆ ಲೆಫ್ಟ್‌ ಟು ಹೈಕಮಾಂಡ್‌ (left to high command) ಎಂದು ನಮೂದಿಸಲು ಕೂಡ ಅವಕಾಶ ನೀಡಲಾಗಿದೆ.

click me!