Karnataka election 2023: ದೇಶದಲ್ಲೇ ಮೊದಲ ಸಲ ಕೋರ್ಟ್‌ ಗೆ ಹೋದ ಕ್ಷೇತ್ರ ತರೀಕೆರೆ!

By Kannadaprabha NewsFirst Published Apr 3, 2023, 9:01 PM IST
Highlights

ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯಾಯಾಲಯದ ಮೆಟ್ಟಿಲು ಏರಿದ ಕ್ಷೇತ್ರ ಯಾವುದಾದರೂ ಇದ್ದರೆ ಅದು ನಮ್ಮದೇ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ.

ಆರ್‌.ತಾರಾನಾಥ್‌

ಚಿಕ್ಕಮಗಳೂರು (ಏ.3) : ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯಾಯಾಲಯದ ಮೆಟ್ಟಿಲು ಏರಿದ ಕ್ಷೇತ್ರ ಯಾವುದಾದರೂ ಇದ್ದರೆ ಅದು ನಮ್ಮದೇ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ.

Latest Videos

ಸ್ಥಳೀಯ ನ್ಯಾಯಾಲಯ ಮಾತ್ರವಲ್ಲ, ಹೈಕೋರ್ಟ್(Highcourt) ನಿಂದ ಸುಪ್ರೀಂ ಕೋರ್ಚ್‌ ಅಂಗಳಕ್ಕೂ ಈ ಪ್ರಕರಣ ತಲುಪಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ನ್ಯಾಯಾಲಯದ ಮೆಟ್ಟಿಲೇರಿದ ಫಲಿತಾಂಶ ಮಾತ್ರವಲ್ಲ, ಪ್ರಥಮ ಬಾರಿಗೆ ಉಪ ಚುನಾವಣೆ ನಡೆದಿದ್ದು ಕೂಡ ಇದೇ ಕ್ಷೇತ್ರದಲ್ಲಿ. ವಿಧಾನಸಭೆಯ 5 ವರ್ಷದ ಅವಧಿಯಲ್ಲಿ ಮೂರು ಮಂದಿ ಶಾಸಕರನ್ನು ಕಂಡ ಕ್ಷೇತ್ರವಿದ್ದರೆ ಅದೂ ಇದೇ ಆಗಿದೆ. ಈ ಎಲ್ಲಾ ದಾಖಲೆಗಳು ಆಗಿದ್ದು 1952ರ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಅನ್ನುವುದು ವಿಶೇಷ.

ಕುಡುಕರಿಗಿದು ಸುಗ್ಗಿ ಕಾಲವಾದರೆ ಕಾರವಾರದಲ್ಲಿ ಉಲ್ಟಾ: ಹುಬ್ಬಳ್ಳಿಯಲ್ಲಿ ಮನೇಲಿ ಕುಕ್ಕರಿದ್ರೂ ರೇಡ್ ಆಗ್ತಾವು!...

ಚುನಾವಣಾ ಫಲಿತಾಂಶ: 1952ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ತರೀಕೆರೆ ವಿಧಾನಸಭಾ ಕ್ಷೇತ್ರ(Tarikere assembly constituency)ದಲ್ಲಿ ಕಿಸಾನ್‌ ಮಜ್ದೂರ್‌ ಪ್ರಜಾ ಪಕ್ಷದಿಂದ ಟಿ.ನಾಗಪ್ಪ, ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌(INC)ನಿಂದ ಟಿ.ಸಿ.ಬಸಪ್ಪ(TC Basappa) ಸ್ಪರ್ಧೆ ಮಾಡಿದ್ದರು. ಅಂದು ತರೀಕೆರೆಯಲ್ಲಿದ್ದ ಮತದಾರರ ಸಂಖ್ಯೆ 38,619. ಅದರಲ್ಲಿ ಟಿ.ನಾಗಪ್ಪ ಅವರು 8,093 ಮತಗಳನ್ನು ಪಡೆದಿದ್ದರು. ಟಿ.ಸಿ.ಬಸಪ್ಪ 8059 ಮತಗಳನ್ನು ಪಡೆದು 34 ಮತಗಳ ಅಂತರದಲ್ಲಿ ಪರಾಭವಗೊಂಡರು.

ಕೋರ್ಟ್ನಲ್ಲಿ ಇತ್ಯರ್ಥ: ಈ ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಆದ್ದರಿಂದ ನಾಗಪ್ಪ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಟಿ.ಸಿ.ಬಸಪ್ಪ ಅವರು ಶಿವಮೊಗ್ಗದ ಟ್ರಿಬ್ಯೂನಲ್‌ನಲ್ಲಿ ದಾವೆ ಹೂಡಿದರು. ಆಗ ಟಿ.ಸಿ.ಬಸಪ್ಪ ಅವರಿಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿತು. ಇದನ್ನು ಪ್ರಶ್ನಿಸಿ ಟಿ.ನಾಗಪ್ಪ ಅವರುಹೈಕೋರ್ಟ್ ಮೆಟ್ಟಿಲೇರಿದರು. ಅದರ ತೀರ್ಪು ಟಿ. ನಾಗಪ್ಪ ಅವರ ಪರವಾಗಿ ಬಂತು. ಆಗ ಟಿ.ಸಿ.ಬಸಪ್ಪ ಅವರು ಕಾನೂನು ಹೋರಾಟ ಮುಂದುವರೆಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದರು. ಆಗ ಟಿ.ಸಿ.ಬಸಪ್ಪರ ಪರವಾಗಿ ತೀರ್ಪು ಬಂತು. ಅಂತಿಮ ತೀರ್ಪು ಬರುವ ಮೊದಲೇ ಟಿ.ಸಿ.ಬಸಪ್ಪ ಅವರು ನಿಧನರಾದರು.

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ

ಉಪ ಚುನಾವಣೆ: ಟಿ.ಸಿ.ಬಸಪ್ಪ ಅವರ ನಿಧನದ ನಂತರ ತರೀಕೆರೆಯಲ್ಲಿ ಉಪ ಚುನಾವಣೆ ನಡೆಯಿತು. ಅಂದಿನ ಚುನಾವಣೆಯಲ್ಲಿ ಟಿ.ಸಿ.ಬಸಪ್ಪ ಅವರ ಸಹೋದರ ಟಿ.ಸಿ.ಶಾಂತಪ್ಪ, ಕಡೂರಿನ ಗರ್ಜೆ ಮರುಳಪ್ಪ ಸ್ಪರ್ಧೆ ಮಾಡಿದ್ದರು. ಟಿ.ಸಿ.ಬಸಪ್ಪ ಅವರ ನಿಧನಾ ನಂತರ ಇದ್ದ ಅನುಕಂಪದ ಅಲೆಯಿಂದಾಗಿ ಟಿ.ಸಿ.ಶಾಂತಪ್ಪ ಜಯಗಳಿಸಿದರು. ಅಂದರೆ, 1952ರ ಮೊದಲ ವಿಧಾನಸಭೆ ಅವಧಿಯಲ್ಲಿ ತರೀಕೆರೆ ಕ್ಷೇತ್ರ ಟಿ.ನಾಗಪ್ಪ, ಟಿ.ಸಿ. ಬಸಪ್ಪ ಹಾಗೂ ಟಿ.ಸಿ.ಶಾಂತಪ್ಪ ಅವರನ್ನು ಶಾಸಕರನ್ನಾಗಿ ಕಂಡಿತು. ಈ ಮೂಲಕ ದೇಶದಲ್ಲಿ ಮೊದಲ ಬಾರಿಗೆ ನ್ಯಾಯಾಲಯದ ಮೆಟ್ಟಿಲು ಏರಿದ ವಿಧಾನಸಭಾ ಕ್ಷೇತ್ರದ ಫಲಿತಾಂಶ ಯಾವುದು? ಮೊದಲ ಬಾರಿ ಉಪ ಚುನಾವಣೆ ನಡೆದ ಕ್ಷೇತ್ರಯಾವುದು ಎಂಬ ಎರಡು ಪ್ರಶ್ನೆಗೆ ಉತ್ತರ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಕ್ಷೇತ್ರವಾಗಿದೆ.

click me!