ಭ್ರಷ್ಟಾಚಾರ ಕಾಂಗ್ರೆಸ್‌ನವರ ಮನೆ ಮಾತು: ಸಚಿವ ಅಶೋಕ್‌

By Kannadaprabha NewsFirst Published May 1, 2023, 8:22 PM IST
Highlights

ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ, ದ್ರೋಹ ವಂಚನೆ ಎಂಬುದೇ ಮನೆಮಾತಾಗಿದ್ದು, ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರಿಗಳೇ ತುಂಬಿದ್ದಾರೆ ಎಂದು ಸಚಿವ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದರು. 

ಚನ್ನಪಟ್ಟಣ (ಮೇ.01): ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ, ದ್ರೋಹ ವಂಚನೆ ಎಂಬುದೇ ಮನೆಮಾತಾಗಿದ್ದು, ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರಿಗಳೇ ತುಂಬಿದ್ದಾರೆ ಎಂದು ಸಚಿವ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದರು. ತಾಲೂಕಿನ ಮತ್ತೀಕೆರೆ ಶೆಟ್ಟಿಹಳ್ಳಿ ಬಳಿ ಆಯೋಜಿಸಿದ್ದ ನವ ಕರ್ನಾಟಕ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಪದೇ ಪದೇ ಪ್ರಧಾನಿ ನರೇಂದ್ರ ಮೋದಿಯವರನ್ನು ಏಕೆ ಕರೆಸುತ್ತೀರಾ ಎಂದು ಕಾಲೆಯುತ್ತಾರೆ. ನಮ್ಮ ಬಳಿ ನಮ್ಮ ನಾಯಕರಾದ ನರೇಂದ್ರ ಮೋದಿಯವರು ಇರುವುದರಿಂದ ಅವರನ್ನು ಕರೆಸುತ್ತೇವೆ. ಆದರೆ, ಭ್ರಷ್ಟಾಚಾರದಿಂದಲೇ ತುಂಬಿರುವ ನೀವು ಯಾರನ್ನು ಕರೆಸುತ್ತೀರಾ ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಎಸಿಬಿಯಲ್ಲಿ 65 ಪ್ರಕರಣಗಳು ದಾಖಲಾಗಿದ್ದವು. ಅವುಗಳನ್ನು ಸಿದ್ದರಾಮಯ್ಯ ಮುಚ್ಚಿಹಾಕಿದರು. ಆದರೇ ನಮ್ಮ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರ ಮೇಲೆ ಒಂದೇ ಒಂದು ಪ್ರಕರಣ ಇಲ್ಲದಿದ್ದರೂ ಅವರ ಮೇಲೆ ಭಷ್ಟಾಚಾರ ಆರೋಪ ಮಾಡುತ್ತಾರೆ ಎಂದು ಕಿಡಿಕಾರಿದರು. ಇವತ್ತು ಕಾಂಗ್ರೆಸ್‌ ದೇಶದ ಭೂಪಟದಿಂದ ಮೇಲಿನಿಂದ ನಿರ್ನಾಮವಾಗುತ್ತಿದೆ. ದೇಶದಲ್ಲಿ ಎಲ್ಲಡೆ ಕಾಂಗ್ರೆಸ್‌ ಅಳಿದು ಹೋಗಿದೆ. ರಾಜಸ್ಥಾನದಲ್ಲೂ ಕಾಂಗ್ರೆಸ್‌ ಸರ್ಕಾರ ಅಲ್ಲಾಡುತ್ತಿದೆ. ಇಂದು ಕಾಂಗ್ರೆಸ್‌ ನಾಯಕರಿಗೆ ಕರ್ನಾಟಕ ಎಂಬುದು ಎಟಿಎಂ ಆಗಿದೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಗೆ ಒಂದು ಎಟಿಎಂ ಬೇಕು. ಅದಕ್ಕಾಗಿ ಅವರು ಕರ್ನಾಟಕಕ್ಕೆ ಬರುತ್ತಿದ್ದಾರೆ. ಆದ್ದರಿಂದ ಅವರಿಗೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರು.

Latest Videos

ಪಂಚ​ರತ್ನ ಯೋಜ​ನೆ​ಗಳ ಅನುಷ್ಠಾನಕ್ಕೆ ಜೆಡಿಎಸ್‌ ಅಧಿಕಾರಕ್ಕೆ ಬರಬೇಕು: ಎಚ್‌.ಡಿ.​ದೇ​ವೇ​ಗೌಡ

ಕರ್ನಾಟಕ ಅಭಿವೃದ್ಧಿ ಹೊಂದಿದ ರಾಜ್ಯ. ಇಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿಗೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಮೋದಿ ಅವರು ಅಭಿವೃದ್ಧಿ ಅಂದರೆ ಏನೆಂದು ತೋರಿಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್‌ 60ವರ್ಷ ಅಧಿಕಾರ ನಡೆಸಿದೆ. ಈ ಅವಧಿಯಲ್ಲಿ ಕಾಂಗ್ರೆಸ್‌ ದೇಶವನ್ನು ಲೂಟಿ ಮಾಡಿದೆ. ಮೋದಿ ಅವರು ಅಧಿಕಾರಕ್ಕೆ ಬಂದು ಕೇವಲ 9 ವರ್ಷ ಆಗಿದೆ. ರಾಜ್ಯ ಹಾಗೂ ದೇಶದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ ಎಂದು ವಿನಂತಿಸಿದರು. ಪಕ್ಷದ ಅಣತಿಯಂತೆ ನಾನು ಎರಡು ಕಡೆಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಒಂದು ಕಡೆ ಡಿ.ಕೆ.ಶಿವಕುಮಾರ್‌ ವಿರುದ್ಧ ಕನಕಪುರದಲ್ಲಿ ಸ್ಪರ್ಧಿಸಿದ್ದೇನೆ. ಇನ್ನೊಂದು ಕಡೆ ದೇವೇಗೌಡರ ಮನೆ ಇರುವ ಪದ್ಮನಾಭನಗರದಲ್ಲಿ ಸ್ಪರ್ಧಿಸಿದ್ದೇನೆ. ಎರಡು ಕಡೆಗೂ ನನನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.

ಅ​ಶೋಕ್‌ ಪರ​ ಪುತ್ರ ಅಜಯ್‌ ಭರ್ಜರಿ ಪ್ರಚಾ​ರ: ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದವರ ದಬ್ಬಾಳಿಕೆ ಆಡಳಿತದಿಂದ ಬೇಸತ್ತಿರುವ ಜನತೆ ಈ ಬಾರಿ ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಆರ್‌.ಅ​ಶೋಕ್‌ ಅವರ ಪುತ್ರ ಅಜಯ ಅಶೋಕ್‌ ವಿಶ್ವಾಸ ವ್ಯಕ್ತಪಡಿಸಿದರು. ತಾಲೂ​ಕಿನ ಸಾತನೂರು ಹೋಬಳಿಯ ಹೊನ್ನಗನಹಳ್ಳಿ ಗ್ರಾಮದಲ್ಲಿ ತಮ್ಮ ತಂದೆ ಆರ್‌.ಅಶೋಕ್‌ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ನಮ್ಮ ದೇಶದ ಅಭಿವೃದ್ಧಿಗಾಗಿ ದಿನದ 24 ಗಂಟೆಯೂ ಶ್ರಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಜನಪರ ಆಡಳಿತ ನಡೆಸಿದ ಯಡಿಯೂರಪ್ಪ, ಬೊಮ್ಮಾಯಿ ರವರ ನಾಯಕತ್ವದ ಮೇಲೆ ನಂಬಿಕೆ, ಪ್ರೀತಿ ವಿಶ್ವಾಸವಿಟ್ಟಿರುವ ಮತದಾರ ಬಂಧುಗಳು ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಬಿಜೆಪಿ ಪಕ್ಷವನ್ನು ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಾಲಮನ್ನಾ: ನಿಖಿಲ್‌ ಕುಮಾರಸ್ವಾಮಿ

ಕಳೆದ 20-30 ವರ್ಷಗಳಿಂದ ಕ್ಷೇತ್ರದ ಜನತೆ ದೌರ್ಜನ್ಯ, ದಬ್ಬಾಳಿಕೆಯಂತಹ ವಾತಾವರಣದಲ್ಲಿ ಭಯದಿಂದ ಬದುಕು ನಡೆಸುತ್ತಿದ್ದರು. ಇದಕ್ಕೆಲ್ಲ ಇದುವರೆಗೂ ಸಮರ್ಥ ಎದುರಾಳಿ ಇಲ್ಲದಿರುವುದು ಒಂದು ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಕೇಂದ್ರ ನಾಯಕರು ಸೂಕ್ತ ತೀರ್ಮಾನ ತೆಗೆದುಕೊಂಡು ನಮ್ಮ ತಂದೆಯವರನ್ನು ಅಭ್ಯರ್ಥಿ ಮಾಡಿದ್ದು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಯೊಂದು ಮನೆ-ಮನೆಗೂ ಹೋಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಹಾಗೂ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಜನತೆಗೆ ತಿಳಿಸುವಂತಹ ಕೆಲಸವನ್ನು ಮಾಡುವಂತೆ ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!