
ಬಾಗಲಕೋಟೆ (ಏ.21) : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಲಿಂಗಾಯತರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸುವ ತಾಕತ್ತು ಇದೆಯೇ? ಬಿಜೆಪಿ ಅಧಿಕಾರದ ಅವಧಿಯ ನಾಲ್ವರು ಮುಖ್ಯಮಂತ್ರಿಗಳ ಪೈಕಿ ಮೂವರು ಲಿಂಗಾಯತರೇ ಮುಖ್ಯಮಂತ್ರಿಗಳಾಗಿದ್ದು, ಮುಂದೆಯೂ ಪಕ್ಷ ಅವಕಾಶ ನೀಡಲಿದೆ. ಆದರೆ ಕಾಂಗ್ರೆಸ್ ಇದನ್ನು ಘೋಷಿಸಲು ಸಿದ್ಧವಿದೆಯೇ ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಪ್ರಶ್ನಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗದೀಶ ಶೆಟ್ಟರ ಅವರ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಆರು ಬಾರಿ ಶಾಸಕರಾಗಿದ್ದ ಅವರು ತಾವು ಹಿರಿಯರೆಂಬ ಕಾರಣಕ್ಕೆ ಮಂತ್ರಿಸ್ಥಾನ ಬೇಡ ಎಂದಿದ್ದರು. ಅವರ ಹಿರಿತನವನ್ನು ಗಮನಿಸಿ ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸುವುದರ ಜತೆಗೆ ಕೇಂದ್ರದಲ್ಲಿ ಮಂತ್ರಿಯಾಗಿಸುವ ಗುರಿಯನ್ನು ಪಕ್ಷ ಹೊಂದಿತ್ತು. ಅಲ್ಲದೇ ಅವರ ಕ್ಷೇತ್ರದಲ್ಲಿ ಅವರು ಸೂಚಿಸುವ ವ್ಯಕ್ತಿಗೆ ಶಾಸಕ ಸ್ಥಾನ ನೀಡುವುದಾಗಿ ಪಕ್ಷ ಹೇಳಿದರೂ ಅವರು ಗಮನಿಸದೇ ಪಕ್ಷ ತೊರೆದರು. ಈಗ ಆ ಕ್ಷೇತ್ರಕ್ಕೆ ಹಿರಿಯ ಕಾರ್ಯಕರ್ತರ ಮಹೇಶ ಟೆಂಗಿನಕಾಯಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಟೆಂಗಿನಕಾಯಿ ಜಗದೀಶ ಶೆಟ್ಟರ್ ಅವರ ಆರೂ ಚುನಾವಣೆಗಳಲ್ಲಿ ಓಡಾಡಿ ಗೆಲ್ಲಿಸಿದ್ದಾರೆ. ಇಂದು ಮಹೇಶ ಟೆಂಗಿನಕಾಯಿಗೆ ಟಿಕೆಟ್ ಸಿಕ್ಕಾಗಲೂ ಶೆಟ್ಟರ್ ಅವರು ಖುಷಿಯಿಂದಲೇ ಸ್ವಾಗತಿಸಬೇಕಿತ್ತು ಎಂದು ಹೇಳಿದರು.
125ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ಸರ್ಕಾರ ರಚನೆ: ಸಚಿವ ಮುರುಗೇಶ್ನಿರಾಣಿ
ಸವದಿಗೆ ಎಲ್ಲ ಸ್ಥಾನಮಾನ ನೀಡಿತ್ತು:
ಲಕ್ಷ್ಮಣ ಸವದಿ ಅವರ ವಿಚಾರದಲ್ಲೂ ಹಾಗೆ ಆಗಿದೆ. ಅವರು ಚುನಾವಣೆಯಲ್ಲಿ ಸೋತರೂ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ ಡಿಸಿಎಂ ಮಾಡಲಾಯಿತು. ಸವದಿ, ಕಾರಜೋಳ, ಪಿ.ಸಿ.ಗದ್ದಿಗೌಡರ ಸೇರಿ ಅನೇಕರು 2004ರಲ್ಲಿ ಬಿಜೆಪಿಗೆ ಬಂದವರು. ಸವದಿ ಅವರಿಗೆ ಎಲ್ಲ ಸೂಕ್ತ ಸ್ಥಾನಮಾನವನ್ನು ಪಕ್ಷ ನೀಡಿತ್ತು. ಈಶ್ವರಪ್ಪರಂಥ ಹಿರಿಯರು ಪಕ್ಷ ನಿಷ್ಠೆಯನ್ನು ತೋರಿದ್ದಾರೆ. ಆದರೆ ಸವದಿ ಅವರು ಪಕ್ಷ ತೊರೆದರು ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಒಂದು ಬಾರಿ ವೀರೇಂದ್ರ ಪಾಟೀಲರನ್ನು ಸಿಎಂ ಆಗಿ ಮಾಡಿತ್ತು. ಅವರ ಅನಾರೋಗ್ಯದ ಕಾರಣ ಅವಧಿ ಪೂರ್ಣಗೊಳಿಸುವುದಕ್ಕೂ ಬಿಡಲಿಲ್ಲ. ಅವಮಾನಕರ ರೀತಿಯಲ್ಲಿ ಪಕ್ಷ ಅವರನ್ನು ಕೆಳಗಿಳಿಸಿತು. ಈಗಲೂ ರಾಜ್ಯದಲ್ಲಿ ಬಿಜೆಪಿ 47ಕ್ಕೂ ಹೆಚ್ಚು ಮಂದಿ ವೀರಶೈವ-ಲಿಂಗಾಯತರಿಗೆ ಟಿಕೆಟ್ ನೀಡಿದೆ. ಏನನ್ನೂ ಮಾಡದ ಕಾಂಗ್ರೆಸ್ ಕೇವಲ ಗೊಂದಲ ಸೃಷ್ಟಿಸಲು ಮುಂದಾಗುತ್ತಿದೆ. 2018ರಲ್ಲಿ ವೀರಶೈವ-ಲಿಂಗಾಯತ ಸಮುದಾಯವನ್ನು ಬೇರ್ಪಡಿಸಲು ಮುಂದಾಗಿದ್ದ ಕಾಂಗ್ರೆಸ್ ಈಗಲೂ ಅಂಥದೇ ಪ್ರಯತ್ನಕ್ಕೆ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್-ಜೆಡಿಎಸ್ ಅಭಿವೃದ್ಧಿಗೆ ಮಾರಕ: ಸಚಿವ ಮುರುಗೇಶ ನಿರಾಣಿ
ತಮ್ಮ ಕ್ಷೇತ್ರದಲ್ಲಿ 50 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ನಿಶ್ಚಿತ. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜಿಪಂ ಮಾಜಿ ಉಪಾಧ್ಯಕ್ಷ ಹೂವಪ್ಪ ರಾಠೋಡ ಇದ್ದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.