ಲಿಂಗಾಯತ ಸಿಎಂ: ಬಿಜೆಪಿ-ಕಾಂಗ್ರೆಸ್‌ ನಾಯಕರ ನಡುವೆ ಜಟಾಪಟಿ

By Kannadaprabha NewsFirst Published Apr 21, 2023, 1:59 PM IST
Highlights

ಚುನಾವಣೆಯ ಹೊಸ್ತಿಲಲ್ಲಿ ಲಿಂಗಾಯತ ಸಿಎಂ ವಿಚಾರ ಮತ್ತೊಮ್ಮೆ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಡುವಿನ ಮಾತಿನ ಚಕಮಕಿಗೆ ಕಾರಣವಾಗಿದೆ. ವರುಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ, ಲಿಂಗಾಯತ ನಾಯಕರನ್ನು ಅವಮಾನಿಸುತ್ತಿದೆ.

ಬೆಂಗಳೂರು (ಏ.21): ಚುನಾವಣೆಯ ಹೊಸ್ತಿಲಲ್ಲಿ ಲಿಂಗಾಯತ ಸಿಎಂ ವಿಚಾರ ಮತ್ತೊಮ್ಮೆ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಡುವಿನ ಮಾತಿನ ಚಕಮಕಿಗೆ ಕಾರಣವಾಗಿದೆ. ವರುಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ, ಲಿಂಗಾಯತ ನಾಯಕರನ್ನು ಅವಮಾನಿಸುತ್ತಿದೆ. ಈ ಹಿಂದೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿತು. ಆ ವೇಳೆ, ಅವರು ಕಣ್ಣೀರಿಟ್ಟಿದ್ದರು. ಈಗ ಜಗದೀಶ ಶೆಟ್ಟರ್‌ಗೆ ಟಿಕೆಟ್‌ ನಿರಾಕರಿಸುವ ಮೂಲಕ ಮತ್ತೊಮ್ಮೆ ಲಿಂಗಾಯತರಿಗೆ ಅವಮಾನ ಮಾಡಿದೆ ಎಂದು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಇದಕ್ಕೆ ಬೀದರ್‌ನ ಭಾಲ್ಕಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ಶೆಟ್ಟರ್‌ ಹಾಗೂ ನನ್ನನ್ನು ಸಿಎಂ ಮಾಡಿದ್ದು ಬಿಜೆಪಿ. ಬಿಜೆಪಿ, ಲಿಂಗಾಯತ ಸಮುದಾಯವನ್ನು ಯಾವಾಗಲೂ ಗೌರವಯುತವಾಗಿ ನಡೆಸಿಕೊಂಡಿದೆ. 1967ರಿಂದ ಈವರೆಗೆ 50 ವರ್ಷದಲ್ಲಿ ಕಾಂಗ್ರೆಸ್‌ನಿಂದ ಒಬ್ಬ ಲಿಂಗಾಯತ ಮುಖ್ಯಮಂತ್ರಿಯನ್ನು ಮಾಡಲಾಗಲಿಲ್ಲ. ಹಿಂದೆ ಲಿಂಗಾಯತ ನಾಯಕರಾದ ವೀರೇಂದ್ರ ಪಾಟೀಲ, ರಾಜಶೇಖರ ಮೂರ್ತಿಗೆ ಕಾಂಗ್ರೆಸ್‌ನವರು ಅವಮಾನ ಮಾಡಿದ್ದರು. ಸಿದ್ದು ಸಿಎಂ ಆಗಿದ್ದಾಗ ಲಿಂಗಾಯತ ಧರ್ಮವನ್ನು ಒಡೆಯಲು ಯತ್ನ ನಡೆದಿತ್ತು ಎಂದು ತಿರುಗೇಟು ನೀಡಿದರು.

Latest Videos

ಉಪ ತಹಸೀಲ್ದಾರ್‌ ಆಗಿದ್ದ ಗವಿಸಿದ್ದಪ್ಪ ಈಗ ಚುನಾವಣಾ ಕಣಕ್ಕೆ: ಹಾವೇರಿ ಎಸ್ಸಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಈ ಮಧ್ಯೆ, ಚಾಮರಾಜನಗರದಲ್ಲಿ ಮಾತನಾಡಿದ ಸಚಿವ ಸೋಮಣ್ಣ, ಕಾಂಗ್ರೆಸ್‌ ಈ ಬಾರಿ ವೀರಶೈವ ಲಿಂಗಾಯತರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ. ಶೆಟ್ಟರ್‌ರನ್ನು ಸಿಎಂ ಮಾಡಲಿ ನೋಡೋಣ ಎಂದು ಸಿದ್ದುಗೆ ತಿರುಗೇಟು ನೀಡಿದರು. ಸೋಮಣ್ಣ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್‌ ಶಾಸಕ ಭೈರತಿ ಸುರೇಶ್‌, ಹಾಗಿದ್ದರೆ ಬಿಜೆಪಿಯವರು ಈ ಬಾರಿ ಸೋಮಣ್ಣನವರನ್ನು ಸಿಎಂ ಮಾಡ್ತಾರಾ? ಎಂದು ಪ್ರಶ್ನಿಸಿದರು. ಶೆಟ್ಟರ್‌ ಹಿನ್ನೆಲೆ ಒಳ್ಳೆಯದಿರುವ ಕಾರಣಕ್ಕೆ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದೇವೆ ಎಂದು ಸಮಜಾಯಿಸಿ ನೀಡಿದರು.

ವಾಮಮಾರ್ಗದಿಂದ ಡಿಕೆಶಿ ಸ್ಪರ್ಧೆ ತಡೆಯಲು ಬಿಜೆಪಿ ಯತ್ನ: ಸಂಸದ ಡಿ.ಕೆ.​ಸು​ರೇಶ್‌

ಇದೇ ವೇಳೆ, ಹೊನ್ನಾಳಿಯಲ್ಲಿ ಮಾತನಾಡಿದ ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ, ಈ ಬಾರಿ ಕೂಡ ಲಿಂಗಾಯತ ಸಮುದಾಯದವರೇ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ. ಬೊಮ್ಮಾಯಿ ಅವರೇ ಮುಂದಿನ ಸಿಎಂ ಆಗುವ ನಿರೀಕ್ಷೆ ಇದೆ. ಕಾಂಗ್ರೆಸ್‌ನಲ್ಲಿ ಧಮ್‌ ಇದ್ದರೆ ಲಿಂಗಾಯತ ಮುಖ್ಯಮಂತ್ರಿ ಯಾರು ಎಂದು ಈಗಲೇ ಘೋಷಣೆ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು. ಶಾಸಕ ರೇಣುಕಾಚಾರ್ಯ ಇದಕ್ಕೆ ಧ್ವನಿಗೂಡಿಸಿ, ವರಿಷ್ಠರ ಮಟ್ಟದಲ್ಲಿ ಮುಂದಿನ ಮುಖ್ಯಮಂತ್ರಿ ಲಿಂಗಾಯತರೇ ಎಂದು ಚರ್ಚಿತವಾಗಿದೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!