ಅಮಿತ್‌ ಶಾ ಭೇಟಿಗೆ ಕಾಯುತ್ತಿರುವ ಸಿಎಂ ಯಡಿಯೂರಪ್ಪ!

By Kannadaprabha NewsFirst Published Aug 25, 2020, 7:28 AM IST
Highlights

ಅಮಿತ್‌ ಶಾ ಭೇಟಿಗೆ ಕಾಯುತ್ತಿರುವ ಸಿಎಂ| ಸದ್ಯ ಆಸ್ಪತ್ರೆಯಲ್ಲಿ ಅಮಿತ್‌ ಶಾ ಕ್ವಾರಂಟೈನ್‌| ಹೊರಬಂದ ಮೇಲಷ್ಟೇ ಸಂಪುಟ ಕಸರತ್ತು

ಬೆಂಗಳೂರು(ಆ.25): ಮುಂಬರುವ ವಿಧಾನಮಂಡಲದ ಅಧಿವೇಶನದೊಳಗೆ ಸಂಪುಟ ವಿಸ್ತರಣೆ ಮಾಡಲು ಉದ್ದೇಶಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ಸಂಬಂಧ ಪಕ್ಷದ ವರಿಷ್ಠರ ಭೇಟಿಗಾಗಿ ಎದುರು ನೋಡುತ್ತಿದ್ದಾರೆ.

ಅಧಿವೇಶನಕ್ಕೆ ಸಚಿವರಾಗಿ ಬರ್ತೀವಿ: ಬಿಜೆಪಿಯಲ್ಲಿ ಸಂಚಲನ ಮೂಡಿಸಿದ MLCಗಳ ಹೇಳಿಕೆ

ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗಿಂತ ಕರ್ನಾಟಕ ರಾಜಕಾರಣವನ್ನು ಚೆನ್ನಾಗಿ ಬಲ್ಲ ಹಿಂದಿನ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಒಂದು ಸುತ್ತಿನ ಸಮಾಲೋಚನೆ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟನಿರ್ಧಾರ ಕೈಗೊಳ್ಳಲು ಉದ್ದೇಶಿಸಿದ್ದಾರೆ. ಒಂದು ವೇಳೆ ವರಿಷ್ಠರು ಸೂಚಿಸಿದಲ್ಲಿ ಸಂಪುಟ ಪುನಾರಚನೆಗೆ ಕೈಹಾಕುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಕೋವಿಡ್‌ ಸೋಂಕಿನಿಂದ ಗುಣಮುಖರಾಗಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಅಮಿತ್‌ ಶಾ ಅವರು ದಿಲ್ಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಆಸ್ಪತ್ರೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸಂಪೂರ್ಣ ಗುಣಮುಖರಾಗಿ ಬಂದ ಬಳಿಕವಷ್ಟೇ ಭೇಟಿಗೆ ಅವಕಾಶ ಸಿಗಬಹುದು. ದೂರವಾಣಿಯಲ್ಲೇ ಈ ಬಗ್ಗೆ ಮಾತುಕತೆ ನಡೆಸಲು ಯಡಿಯೂರಪ್ಪ ಅವರು ಮನಸ್ಸು ಮಾಡಿಲ್ಲ. ಹೀಗಾಗಿ, ಸಂಪುಟ ಕಸರತ್ತಿಗೆ ಸಂಬಂಧಿಸಿದ ಬೆಳವಣಿಗೆ ಯಥಾಸ್ಥಿತಿಯಲ್ಲಿದೆ.

ಕುಮಾರಸ್ವಾಮಿಗೆ ಭರ್ಜರಿ ಉಡುಗೊರೆ ನೀಡಿದ ಸಿಎಂ ಯಡಿಯೂರಪ್ಪ...!

ಸದ್ಯ ಸಂಪುಟದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳ ಸಂಖ್ಯೆ ಆರು. ಇದರಲ್ಲಿ ಪಕ್ಷದ ಶಾಸಕರ ಪೈಕಿ ಎಷ್ಟುಮಂದಿಗೆ ಅವಕಾಶ ನೀಡಲು ಸಾಧ್ಯವಾಗುತ್ತದೆಯೊ ಗೊತ್ತಿಲ್ಲ. ಆದರೆ, ಅನ್ಯ ಪಕ್ಷಗಳಿಂದ ವಲಸೆ ಬಂದು ಇದೀಗ ವಿಧಾನಪರಿಷತ್‌ ಸದಸ್ಯರಾಗಿರುವ ಅದರಲ್ಲೂ ಹಿಂದಿನ ಸರ್ಕಾರದಲ್ಲಿ ತಮಗಿದ್ದ ಸಚಿವ ಸ್ಥಾನ ತ್ಯಾಗ ಮಾಡಿರುವ ಎಂ.ಟಿ.ಬಿ.ನಾಗರಾಜ್‌ ಮತ್ತು ಆರ್‌.ಶಂಕರ್‌ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಒಲವು ಹೊಂದಿದ್ದಾರೆ. ಸಾಧ್ಯವಾದರೆ ಎಚ್‌.ವಿಶ್ವನಾಥ್‌ ಅವರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಬಯಕೆ ಯಡಿಯೂರಪ್ಪ ಅವರದ್ದು. ಎರಡು ಸ್ಥಾನಗಳನ್ನು ಉಪಚುನಾವಣೆ ಎದುರಿಸಬೇಕಾಗಿರುವ ರಾಜರಾಜೇಶ್ವರಿನಗರ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗಾಗಿ ಕಾದಿರಿಸಬೇಕಾಗಿದೆ.

ಹೀಗಾಗಿ, ಈ ಬಗ್ಗೆ ಸ್ಪಷ್ಟತೆ ಪಡೆದುಕೊಳ್ಳುವ ಸಲುವಾಗಿ ಒಂದು ಬಾರಿ ವರಿಷ್ಠರನ್ನು ಭೇಟಿ ಮಾಡಬೇಕು ಎಂಬುದು ಯಡಿಯೂರಪ್ಪ ಅವರ ಅಭಿಪ್ರಾಯ. ಈಗಾಗಲೇ ಸಮಯವನ್ನೂ ಕೇಳಿದ್ದಾರೆ. ಅಲ್ಲಿಂದ ಹಸಿರು ನಿಶಾನೆ ದೊರೆತಲ್ಲಿ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!