ಬೆಳಗಾವಿಯಲ್ಲಿ ಉಪಚುನಾವಣೆ ಅಖಾಡಕ್ಕಿಳಿದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕರ್ತರ ಸಮಾವೇಶದಲ್ಲಿ ಜಾತಿ ಹೆಸರಿನ ಮೂಲಕ ಲಿಂಗಾಯತ ಮತಬ್ಯಾಂಕ್ ಕ್ರೋಢೀಕರಣ ಯತ್ನ ಮಾಡಿದರು. ಹಾಗಾದ್ರೆ ಸಮಾವೇಶದಲ್ಲಿ ಬಿಎಸ್ ವೈ ಏನೆಲ್ಲ ಹೇಳಿದ್ರು ಎನ್ನವು ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.
ಬೆಳಗಾವಿ, [ನ.23]: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಕಣ ರಂಗೇರಿದೆ. ಈಗಾಗಲೇ ಆಯಾ ಪಕ್ಷಗಳಿಂದ ಹುರಿಯಾಳುಗಳು ಘೋಷಣೆಯಾಗಿರುವ ಅಭ್ಯರ್ಥಿಗಳು ಮತಪ್ರಚಾರದಲ್ಲಿ ತೊಡಗಿದ್ದಾರೆ.
ಇತ್ತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಇದೀಗ ಮತ ಭೇಟೆಗೆ ಇಳಿದಿದ್ದು, ಇಂದು [ಶನಿವಾರ] ಬೆಳಗಾವಿಯ ಶಿರಗುಪ್ಪಿಯ ಕಾರ್ಯಕರ್ತರ ಸಮಾವೇಶ ನಡೆಸಿದರು. ಈ ವೇಳೆ ಯಡಿಯೂರಪ್ಪ ಜಾತಿ ಅಸ್ತ್ರ ಪ್ರಯೋಗಿಸಿದರು.
'ಡಿ.9ರ ನಂತರ ಯಡಿಯೂರಪ್ಪ ಕುರ್ಚಿಗೆ ಕಂಟಕ ಶತಸಿದ್ಧ'
ವೀರಶೈವ ಸಮಾಜದ ಮುಖಂಡರಿಗೆ ವಿಶೇಷವಾಗಿ ಹೇಳಲಿಕ್ಕೆ ಇಷ್ಟಪಡುತ್ತೇನೆ. ನಿಮ್ಮ ಯಡಿಯೂರಪ್ಪ ಸಿಎಂ ಆಗಿರುವಂತಾ ಸಂದರ್ಭದಲ್ಲಿ ವೀರಶೈವ ಸಮಾಜದ ಯಾವುದೇ ಒಂದು ಓಟು ಆಕಡೆ ಈಕಡೆ ಹೋಗದಂತೆ ನೋಡಿಕೊಳ್ಳಬೇಕು. ಪಕ್ಷ ವಿರೋಧಿಗಳಿಗೆ, ನಂಬಿಕೆ ದ್ರೋಹ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಈ ಮೂಲಕ ಸಿಎಂ ಯಡಿಯೂರಪ್ಪ ಅಥಣಿ, ಕಾಗವಾಡ ಹಾಗೂ ಗೋಕಾಕ್ ಕ್ಷೇತ್ರಗಳಲ್ಲಿರುವ ವೀರಶೈವ ಮತಗಳ ಬುಟ್ಟಿಗೆ ಕೈ ಹಾಕಿದರು. ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಆಯ್ಕೆಯಾದ ಬಳಿಕ ಅವರನ್ನು ಮಂತ್ರಿಯಾಗಿ ಮಾಡುತ್ತೇನೆ. ಅಷ್ಟೇ ಅಲ್ಲದೇ ಅಥಣಿ ಅಭ್ಯರ್ಥಿ ಮಹೇಶ ಕುಮಟಳ್ಳಿನ್ನೂ ಸಹ ಮಂತ್ರಿ ಮಾಡುತ್ತೇವೆ ಎಂದರು.
ಇನ್ನು ನೀರಾವರಿ ವಿಚಾರದ ಬಗ್ಗೆ ಹೇಳಿದ ಸಿಎಂ ಚುನಾವಣಾ ಮುಗಿದ ಬಳಿಕ ನಾನೇ ಮಹಾರಾಷ್ಟ್ರ ಸಿಎಂ ಭೇಟಿ ಮಾಡುತ್ತೇನೆ. ಕೃಷ್ಣ ನದಿಗೆ ನೀರು ಬಿಡಲು ಮನವಿ ಮಾಡಿಕೊಳ್ಳುತ್ತೇನೆ. ವಿಶೇಷವಾಗಿ 15 ಕ್ಷೇತ್ರಗಳ ಅಭಿವೃದ್ಧಿಗಾಗಿ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಭರವಸೆ ನೀಡಿದರು.