
ಕೊಪ್ಪಳ/ಹಾವೇರಿ(ಮೇ.05): ಭ್ರಷ್ಟಾಚಾರದಲ್ಲಿ ಇಡೀ ದೇಶದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಅತ್ಯಂತ ಕೆಟ್ಟಹೆಸರು ಪಡೆದುಕೊಂಡಿದೆ. ‘40 ಪರ್ಸೆಂಟ್ ಕಮಿಷನ್ ಸರ್ಕಾರ’ ಎಂದು ಕುಖ್ಯಾತಿ ಗಳಿಸಿದೆ. ಬಿಜೆಪಿಯವರು ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಹೇಳಿ ತಮ್ಮ ಆದಾಯ ಡಬಲ್ ಮಾಡಿಕೊಂಡಿದ್ದಾರೆ. ರೈತರು ದಿನಕ್ಕೆ 22 ಗಳಿಸಿದರೆ, ಪ್ರಧಾನಮಂತ್ರಿ ಆಪ್ತ ದಿನಕ್ಕೆ 16 ಸಾವಿರ ಕೋಟಿ ಗಳಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳದ ಕನಕಗಿರಿ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಗುರುವಾರ ಮಾತನಾಡಿದ ಅವರು ರಾಜಸ್ಥಾನ, ಛತ್ತೀಸ್ಗಢ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಆದರೆ ರಾಜ್ಯದ ಬಿಜೆಪಿ ಸರ್ಕಾರ ಮಾತ್ರ 40 ಪರ್ಸೆಂಟ್ ಲೂಟಿ ಹೊಡೆದಿದೆ. ಇದನ್ನು ನಾವು ಹೇಳುತ್ತಿಲ್ಲ, ಇಲ್ಲಿಯ ಗುತ್ತಿಗೆದಾರರೇ ಹೇಳುತ್ತಿದ್ದಾರೆ. ಪಿಎಸ್ಐ ಸೇರಿ ವಿವಿಧ ಹುದ್ದೆಗಳ ನೇಮಕಾತಿಯಲ್ಲೂ ಈ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂದು ಕಿಡಿಕಾರಿದರು.
ಕೊಪ್ಪಳ ಕಾಂಗ್ರೆಸ್ ಕೋಟೆಯಲ್ಲಿ ಅರಳಲು ಕಮಲ ಯತ್ನ: ಸಂಚಲನ ಮೂಡಿಸಿದ ರೆಡ್ಡಿ ಎಂಟ್ರಿ
ಸರ್ಕಾರ ಕಿತ್ತೊಗೆಯಿರಿ:
ಬಿಜೆಪಿಯವರು ರಾಜ್ಯದ ಒಂದೂವರೆ ಲಕ್ಷ ಕೋಟಿ ರು. ಲೂಟಿ ಹೊಡೆದಿದ್ದು, ಈ ಹಣದಲ್ಲಿ ನೂರಾರು ಆಸ್ಪತ್ರೆ, 30 ಲಕ್ಷ ಮನೆ, 30 ಸಾವಿರ ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡಬಹುದಿತ್ತು ಎಂದು ಪ್ರಿಯಾಂಕಾ ಕಿಡಿಕಾರಿದರು. ಜತೆಗೆ, ಅಡುಗೆ ಸಿಲಿಂಡರ್, ಪೆಟ್ರೋಲ್, ಡೀಸೆಲ್ ದರ ಮಿತಿಮೀರಿ ಜಾಸ್ತಿಯಾಗಿದೆ. ಗೊಬ್ಬರ ದರವೂ ಹೆಚ್ಚಳವಾಗಿದೆ. ಭ್ರಷ್ಟಸರ್ಕಾರದ ಭ್ರಷ್ಟನೀತಿಯಿಂದಾಗಿ ಈ ರೀತಿ ಬೆಲೆ ಏರಿಕೆ ಆಗುತ್ತಿದೆ. ಇಂಥ ಸರ್ಕಾರ ಕಿತ್ತೊಗೆಯುವ ಅನಿವಾರ್ಯತೆ ಇದೀಗ ಬಂದಿದೆ ಎಂದರು.
ಭಜರಂಗ ದಳ-ಪಿಎಫ್ಐ ನಿಷೇಧದಿಂದ ಏನು ಲಾಭ: ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ಎಚ್ಡಿಕೆ ವ್ಯಂಗ್ಯ
ಬೈಯ್ದದ್ದಕ್ಕಷ್ಟೇ ಲೆಕ್ಕ:
ಪ್ರಧಾನಿ ಮೋದಿ ಅವರು ರಾಜ್ಯದಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡದೆ ಕೇವಲ ತಮಗೆ ಎಷ್ಟುಬಾರಿ ಬೈಯ್ದಿದ್ದಾರೆ ಎಂದು ಲೆಕ್ಕ ಇಡುತ್ತಾರೆ. ಧರ್ಮದ ಬಗ್ಗೆ ಮಾತನಾಡಿ ವಿಷ ಬೀಜ ಬಿತ್ತುತ್ತಾರೆ. ಅವರು ಧರ್ಮ, ಜಾತಿ, ಭಾವನೆ ಬಗ್ಗೆ ಮಾತನಾಡುತ್ತಾರೆಯೇ ಹೊರತು ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ. ಜನರ ಕಷ್ಟಸಹ ಕೇಳಿಸಿಕೊಳ್ಳುವುದಿಲ್ಲ, ಬದಲಾಗಿ ತಾವೇ ಮಾತನಾಡುತ್ತಾರೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು.
ಖಾಲಿ ಹುದ್ದೆ ಭರ್ತಿ:
ರಾಜ್ಯದಲ್ಲಿ ಖಾಲಿ ಇರುವ ಎರಡೂವರೆ ಲಕ್ಷ ಹುದ್ದೆಗಳ ಭರ್ತಿಗೆ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಆದ್ಯತೆ ಮೇಲೆ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಪ್ರಿಯಾಂಕಾ ಗಾಂಧಿ ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.